Siddaramaiah: ಕುಟುಂಬ ರಾಜಕಾರಣಕ್ಕೆ ಸಿದ್ದರಾಮಯ್ಯ ಇಂಬು, ಹುಟ್ಟಿಕೊಂಡ ಪರ, ವಿರೋಧ ಚರ್ಚೆ
ಮೈಸೂರು, ಏಪ್ರಿಲ್ 20: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ನಂಜನಗೂಡಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ತಮ್ಮ ಮೊಮ್ಮಗ ಧವನ್ ರಾಕೇಶ್ ಅವರನ್ನು ಮುಂದೆ ರಾಜಕಾರಣಕ್ಕೆ ತರುವ ಬಗ್ಗೆ ಮಾತನಾಡಿದ್ದಾರೆ.
ಕಾರ್ಯಕ್ರಮದ ಬಳಿಕ ಮಾತನಾಡಿದ ಧವನ್ ರಾಕೇಶ್ ನನಗೆ ನಮ್ಮ ತಾತಾ ಸಿದ್ದರಾಮಯ್ಯ ಅವರ ಬಗ್ಗೆ ತುಂಬಾ ಹೆಮ್ಮೆ ಇದೆ. ನನಗೂ ಅವರಂತೆ ರಾಜಕಾರಣಿಯಾಗಬೇಕು ಎನಿಸುತ್ತಿದೆ. ಆದರೆ ನನಗೆ ಓದಲು ಇನ್ನು ಇದೆ. ನಾನು ತಾತನಂತೆ ಲಾ (ಎಲ್ಎಲ್ಬಿ) ಓದಲು ಮುಂದಾಗುತ್ತೇನೆ. ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬರುಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಈಗ 17 ವರ್ಷದ ಧವನ್ ರಾಕೇಶ್ ರಾಜಕೀಯಕ್ಕೆ ಬರುವುದರ ಬಗ್ಗೆ ಸಿದ್ದರಾಮಯ್ಯ ಆಡಿರುವ ಅವರ ಮಾತುಗಳು ಅಂಬೇಡ್ಕರ್ವಾದಿ, ಸಮಾಜವಾದಿ, ಲೋಹಿಯಾ ಚಿಂತನೆಗಳನ್ನು ಹೊಂದಿರುವ ಅವರ ಸಿದ್ದಾಂತದ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಹಾಕುವಂತೆ ಮಾಡಿದೆ. ಸಿದ್ದರಾಮಯ್ಯ ಮೊಮ್ಮಗ ಧವನ್ ಅನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾಗ ಅವನೇ ಸ್ವ ಆಸಕ್ತಿಯಿಂದ ಬಂದಿದ್ದಾನೆ. ನಾನು ಅವನನ್ನು ಸೇರಿದಂತೆ ನಮ್ಮ ಕುಟುಂಬದ ಯಾರನ್ನು ಪ್ರಚಾರಕ್ಕೆ ಕರೆತರುವುದಿಲ್ಲ ಎಂದು ಹೇಳಿದ್ದರು. ಆದರೆ ಮಾರನೇ ದಿನ ಇದು ಉಲ್ಟಾ ಆದಂತೆ ಇತ್ತು.
ಸಿದ್ದರಾಮಯ್ಯ ಅವರು ಬುಧವಾರ ನಡೆದ ಕಾಂಗ್ರೆಸ್ಸಮಾವೇಶದ ಭಾಷಣದಲ್ಲಿ ನನಗೆ ಇದು ಕೊನೆಯ ಚುನಾವಣೆ ಕ್ಷೇತ್ರದ ಜನರು ನನ್ನನು ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಹೇಳಿದರು. ಮುಂದುವರೆದು ನನ್ನ ನಂತರ ಯತೀಂದ್ರ ಹಾಗೂ ಧವನ್ ಇದ್ದಾರೆ. ಇವರನ್ನು ಬೆಂಬಲಿಸುವಂತೆ ಪರೋಕ್ಷವಾಗಿ ಕೇಳಿಕೊಂಡಿದ್ದರು. ಮಾತಿನ ಮಧ್ಯೆ ಸ್ವಲ್ಪ ತಡೆದಿದ್ದ ಅವರು ಜನರಿಂದ ಬರುತ್ತಿದ್ದ ಶಿಳ್ಳೆ, ಚಪ್ಪಾಳೆ, ಉದ್ಘಾರದ ಘೋಷಣೆಗಳನ್ನು ಆಲಿಸುತ್ತಾ ಜನರ ಪ್ರತಿಕ್ರಿಯೆಯನ್ನು ಗಮನಿಸಿದ್ದರು.

ಅವರ ನಿರೀಕ್ಷೆಯಂತೆ ಕ್ಷೇತ್ರದ ಜನರು ಎಂದಿನಂತೆ ಬೆಂಬಲ ಮಳೆಗರೆದರು. ಇಲ್ಲಿ ಸಿದ್ದರಾಮಯ್ಯ ಅವರಿಗೆ ಮುಂದೆ ಮೊಮ್ಮಗನಿಗೆ ಬೆಂಬಲ ಸಿಗುವುದು ಪಕ್ಕಾ ಆಗಿತ್ತು. ದೇಶದಲ್ಲಿ ಕಾಂಗ್ರೆಸ್ ವಿರುದ್ದ ಕುಟುಂಬ ರಾಜಕಾರಣದ ಬಗ್ಗೆ ಪ್ರಮುಖ ಎದುರಾಳಿ ಪಕ್ಷ ಬಿಜೆಪಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ತೆಗಳುವುದು ಈಗಾಗಲೇ ಇದ್ದೇ ಇದೆ. ಈಗ ರಾಜ್ಯದಲ್ಲಿ ಬಿಜೆಪಿಯವರಿಗೆ ಇದು ಪ್ರಮುಖ ಅಸ್ತ್ರವಾದರೂ ಆಗಬಹುದು.
ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಬಹುದೊಡ್ಡ ನಕಾರಾತ್ಮಕ ನಿರೂಪಣೆಯನ್ನು ಮಾಡಿಕೊಂಡು ಬರುತ್ತಿದೆ, ಇದು ರಾಜ್ಯದಲ್ಲೂ ಪ್ರತಿಧ್ವನಿಸಿದೆ. ಈಗಗಲೇ ನಿನ್ನೆ ಸಿದ್ದರಾಮಯ್ಯ ಅವರ ಮೊಮ್ಮಗ ಸಮಾವೇಶದಲ್ಲಿ ಪಾಲ್ಗೊಂಡು ಅದರ ಬಳಿಕ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಪರ ವಿರೋಧ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ಅಂಬೇಡ್ಕರ್ವಾದಿಯಾಗಿರುವ ಸಿದ್ದರಾಮಯ್ಯ ಅವರು ಕುಟುಂಬದ ಕುಡಿಯನ್ನು ಮೆಚ್ಯೂರಿಟಿ ಬರದಿದ್ದರೂ ರಾಜಕಾರಣಕ್ಕೆ ಎಳೆದು ತಂದಿರುವುದು ಎಷ್ಟು ಸರಿ ಎಂದು ಪ್ರಶ್ನೆಗಳನ್ನು ಕೇಳುತಿದ್ದಾರೆ.
ಆದರೆ ಕೆಲವು ಸಿದ್ದರಾಮಯ್ಯ ಬೆಂಬಲಿಗರು ನಮಗೆ ಧವನ್ ರಾಕೇಶ್ ಬಗ್ಗೆ ಅಭಿಮಾನವಿದೆ. ನಾವು ನಮ್ಮ ದಿವಂಗತ ನಾಯಕ ರಾಕೇಶ್ ಸಿದ್ದರಾಮಯ್ಯ ಅವರನ್ನು ಅವರ ಮಗ ಧವನ್ ಅವರಲ್ಲಿ ಕಾಣಬಯಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಈಗ ಸಿದ್ದರಾಮಯ್ಯ ಅವರ ನಡೆ ಬಗ್ಗೆ ಪರ ವಿರೋಧ ಚರ್ಚೆಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಸಿದ್ದರಾಮಯ್ಯ ಏನು ಸಮಜಾಯಿಷಿ ನೀಡುತ್ತಾರೆ ನೋಡಬೇಕಿದೆ.












Click it and Unblock the Notifications