ಕರ್ನಾಟಕದ ಜನರಿಗೆ 10 ತಿಂಗಳಿನಲ್ಲಿ ಮತ್ತೆ ಮತ್ತೆ ಚುನಾವಣೆ!
ಬೆಂಗಳೂರು, ಮೇ 16; ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ರಾಜ್ಯದ ಜನರು ಸಾಲು-ಸಾಲು ಚುನಾವಣೆ ಎದುರಿಸಬೇಕಿದೆ. ಮತದಾನ ಮಾಡಬೇಕಿದೆ.
ಮಾರ್ಚ್ 29ರಂದು 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿತ್ತು. ಮೇ 13ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲಿದೆ. ಮತದಾನ ಮಾಡಿದ ಬಳಿಕ ಜನರ ಕೆಲಸ ಮುಗಿದಿದೆ.

ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಆದರೆ ಈಗ ಬೆಂಗಳೂರು ನಗರದ ಜನರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಿದ್ಧವಾಗಬೇಕು. ಉಳಿದ ಜಿಲ್ಲೆಗಳ ಜನರು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಬೇಕು.
ಸಾಲು, ಸಾಲು ಚುನಾವಣೆ; 2024ರ ಲೋಕಸಭಾ ಚುನಾವಣೆಗೆ 10 ತಿಂಗಳು ಬಾಕಿ ಇದೆ. ಇದಕ್ಕೂ ಮೊದಲು ಕರ್ನಾಟಕದ ಜನರು ಸಾಲು-ಸಾಲು ಚುನಾವಣೆಯನ್ನು ಎದುರಿಸಬೇಕಿದೆ. ಆದ್ದರಿಂದ ಈ ವರ್ಷವಿಡೀ ಜನರು ಮತದಾನ ಮಾಡುತ್ತಲೇ ಇರಬೇಕು.

2021ರ ಏಪ್ರಿಲ್ಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅವಧಿ ಮುಕ್ತಾಯಗೊಂಡಿದೆ. ವಿವಿಧ ಕಾರಣಗಳನ್ನು ನೀಡಿದ ಚುನಾವಣೆಯನ್ನು ಮುಂದೂಡಲಾಗಿತ್ತು. ಈಗ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ಕೈಗೊಂಡಿದೆ.
ಎರಡು ವರ್ಷಗಳಿಂದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾಲ ಕೂಡಿ ಬಂದಿಲ್ಲ. ಮೀಸಲಾತಿ ವಿಚಾರ ಸೇರಿದಂತೆ ವಿವಿಧ ಕಾರಣಗಳಿಗೆ ಕೋರ್ಟ್ಗೆ ಅರ್ಜಿಗಳು ಸಲ್ಲಿಕೆಯಾಗಿವೆ. ಈಗ ಎಲ್ಲಾ ಅಡೆತಡೆ ತೆರವಾಗಿದ್ದು ಚುನಾವಣೆ ನಡೆಸಲಾಗುತ್ತದೆ. ಈಗಾಗಲೇ ಚುನಾವಣೆ ನಡೆಸುವುದು ವಿಳಂಬವಾದ ಕಾರಣಕ್ಕೆ ಸರ್ಕಾರ ಹೈಕೋರ್ಟ್ಗೆ 5 ಲಕ್ಷ ರೂ. ದಂಡವನ್ನು ಕಟ್ಟಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಕ್ಷೇತ್ರ ಪುನರ್ ವಿಂಗಡನೆ, ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಂಡಿದೆ. ವಿಧಾನಸಭೆ ಚುನಾವಣೆ ಪೂರ್ಣಗೊಂಡ ಬಳಿಕ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸುತ್ತೇವೆ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್ಗೆ ಹೇಳಿಕೆ ನೀಡಿತ್ತು.
ಬಿಬಿಎಂಪಿ ಚುನಾವಣೆ; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಸಹ ನಡೆಯಬೇಕಿದೆ. 2020ರ ಸೆಪ್ಟೆಂಬರ್ನಲ್ಲಿಯೇ ಪಾಲಿಕೆ ಅವಧಿ ಅಂತ್ಯಗೊಂಡಿದೆ. ಬಳಿಕತ ಆಡತಾಧಿಕಾರಿ ನೇಮಕ ಮಾಡಿ ಬೆಂಗಳೂರಿನ ಆಡಳಿತ ನೋಡಿಕೊಳ್ಳಲಾಗುತ್ತಿದೆ.
ಕರ್ನಾಟಕ ಸರ್ಕಾರ ಬಿಬಿಎಂಪಿಯ ವಾರ್ಡ್ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಏರಿಕೆ ಮಾಡಿದೆ. ಇದರಿಂದಾಗಿ ಪಾಲಿಕೆ ಚುನಾವಣೆ ವಿಳಂಬವಾಗಿದೆ. ಈಗ ವಾರ್ಡ್ಗಳ ಗಡಿಗಳನ್ನು ಗುರುತಿಸಿ ಪುನರ್ ವಿಂಗಡನೆ ಮಾಡಲಾಗಿದೆ. ಆದ್ದರಿಂದ ಬಿಬಿಎಂಪಿಗೆ ಸಹ ಚುನಾವಣೆ ನಡೆಯಬೇಕಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ನಡೆಸಬೇಕಿದೆ. ಈ ಬಾರಿ ವಾರ್ಡ್ಗಳ ಸಂಖ್ಯೆ ಅಧಿಕವಾಗಿದ್ದು, ವಿಧಾನಸಭೆ ಚುನಾವಣೆಯಂತೆಯೇ ಬೆಂಗಳೂರು ನಗರದ ಚುನಾವಣೆ ಮಹತ್ವ ಪಡೆದಿದೆ.
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆ ಮುಗಿಯುವ ಹೊತ್ತಿಗೆ ಲೋಕಸಭೆ ಚುನಾವಣೆ ಎದುರಾಗಲಿದೆ. 2019ರಲ್ಲಿ ಲೋಕಸಭೆ ಚುನಾವಣೆ ನಡೆದಿತ್ತು, 2024ರ ಏಪ್ರಿಲ್-ಮೇ ತಿಂಗಳಿನಲ್ಲಿ ಮತ್ತೆ ಚುನಾವಣೆ ನಡೆಯಲಿದೆ.
2019ರ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಜಯಗಳಿಸಿತ್ತು. ಜೆಡಿಎಸ್, ಕಾಂಗ್ರೆಸ್ ತಲಾ 1 ಸೀಟು, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮುಂಬರುವ ಲೋಕಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications