ಬಿಡುಗಡೆಗೊಂಡು ಬೆಂಗಳೂರಿಗೆ ಬಂದ ದಿನವೇ ಡಿಕೆಶಿ ವರ್ತನೆಯ ಬಗ್ಗೆ ಸಿದ್ದರಾಮಯ್ಯ ಬೇಸರ
Recommended Video
ತಿಹಾರ್ ಜೈಲಿನಿಂದ ಬಿಡುಗಡೆಗೊಂಡು ಬಂದಿರುವ ಡಿ.ಕೆ.ಶಿವಕುಮಾರ್ ಅವರನ್ನು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನರಕ ಚತುರ್ದಶಿಯ (ಅ 27) ದಿನದಂದು ಭೇಟಿಯಾಗಿದ್ದಾರೆ.
ಬೆಂಗಳೂರಿಗೆ ಆಗಮಿಸಿದ್ದ ಡಿಕೆಶಿಯನ್ನು ಸ್ವಾಗತಿಸಲು, ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ಸಿನ ಪ್ರಮುಖ ಸಾಲಿನ ಮುಖಂಡರು ಆಗಮಿಸಿರಲಿಲ್ಲ. ಆದರೆ, ಹೆಚ್ಚಿನ ಮುಖಂಡರು, ಕೆಪಿಸಿಸಿ ಕಚೇರಿಯಲ್ಲಿ ಹಾಜರಿದ್ದರು.
ಸಿದ್ದರಾಮಯ್ಯನವರು ಪೂರ್ವನಿರ್ಧಾರಿತ ಕಾರ್ಯಕ್ರಮ ಇದ್ದಿದ್ದರಿಂದ ಗದಗಕ್ಕೆ ಹೋಗಿದ್ದರು. ಹಾಗಾಗಿ, ಅವರು ವಿಮಾನ ನಿಲ್ದಾಣಕ್ಕೂ ಬರಲಿಲ್ಲ, ಕೆಪಿಸಿಸಿ ಕಚೇರಿಯಲ್ಲೂ ಇರಲಿಲ್ಲ.
ಡಿಕೆಶಿಯವರನ್ನು ಭಾರೀ ರೋಡ್ ಶೋ ಮೂಲಕ ಕೆಪಿಸಿಸಿ ಕಚೇರಿಗೆ ಕರೆತರಲಾಗಿತ್ತು. ಈ ವಿಚಾರದಲ್ಲಿ ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿರುವ ವಿಡಿಯೋ ತುಣುಕೊಂದು ಬಹಿರಂಗಗೊಂಡಿದೆ.

ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು
ರಾಮನಗರ, ಕನಕಪುರ, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಯಿಂದ, ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲು ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಜಮಾಯಿಸಿದ್ದರು. ಅವರಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರೂ ಬಾವುಟ ಹಿಡಿದುಕೊಂಡು ಭಾಗವಹಿಸಿದ್ದರು. ಕುಮಾರಸ್ವಾಮಿ, ಡಿಕೆಶಿಯನ್ನು ಏರ್ಪೋರ್ಟಿನಲ್ಲಿ ಸ್ವಾಗತಿಸಿದ್ದರು.

ಜೆಡಿಎಸ್ ಕಾರ್ಯಕರ್ತರೂ ಡಿಕೆಶಿಗೆ ಜೈಘೋಷ ಮೊಳಗಿದರು
ಡಿಕೆಶಿಯನ್ನು ರೋಡ್ ಶೋ ಮೂಲಕ ಕರೆತರಲು ಕಾಂಗ್ರೆಸ್ ಮುಖಂಡರಲ್ಲಿ ಭಿನ್ನಾಭಿಪ್ರಾಯವಿದ್ದವು. ವಿಮಾನ ನಿಲ್ದಾಣಕ್ಕೆ ಆಗಮಿಸದ ಕೃಷ್ಣ ಭೈರೇಗೌಡ, ರೋಡ್ ಶೋ, ಸಾದರಹಳ್ಳಿ ಗೇಟ್ ಬಳಿ ಬಂದಾಗ ಅಲ್ಲಿ ಕಾಣಿಸಿಕೊಂಡರು, ಅಲ್ಲಿ, ಕಾಂಗ್ರೆಸ್ ಜೊತೆ ಜೆಡಿಎಸ್ ಕಾರ್ಯಕರ್ತರೂ ಡಿಕೆಶಿಗೆ ಜೈಘೋಷ ಮೊಳಗಿದರು. ಇದು, ಕಾಂಗ್ರೆಸ್-ಜೆಡಿಎಸ್ ಜಂಟಿ ರೋಡ್ ಶೋ ನಂತಿತ್ತು.

ರೋಡ್ ಶೋ ವೇಳೆ ಡಿಕೆಶಿ
ರೋಡ್ ಶೋ ವೇಳೆ ಡಿಕೆಶಿ, ಜೆಡಿಎಸ್ ಧ್ವಜವನ್ನು ಹಿಡಿದುಕೊಂಡಿದ್ದು ಸಿದ್ದರಾಮಯ್ಯನವರ ತೀವ್ರ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಸಿದ್ದರಾಮಯ್ಯ, ತಮ್ಮ ಆಪ್ತರ ಬಳಿ ಅಸಮಾಧಾನ ತೋರ್ಪಡಿಸಿಕೊಂಡಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ಸದ್ದು ಮಾಡಲಾರಂಭಿಸಿದೆ.

ಜೆಡಿಎಸ್ ಬಾವುಟ ಹಿಡಿದುಕೊಂಡು ಬಂದರೆ ಏನು ಮಾಡುವುದು
"ನಾನು ಗದಗ ನಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದೆ. ನನ್ನ ಮತ್ತು ಕುಮಾರಸ್ವಾಮಿಯ ನಡುವೆ ಬಹಿರಂಗ ಮಾತಿನ ಚಕಮಕಿಯೂ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಡಿಕೆಶಿ, ಜೆಡಿಎಸ್ ಬಾವುಟ ಹಿಡಿದುಕೊಂಡು ಬಂದರೆ ಏನು ಮಾಡುವುದು" ಎಂದು ಸಿದ್ದರಾಮಯ್ಯ ಆಪ್ತರ ಜೊತೆ ಮಾತುಕತೆಯ ವೇಳೆ ಬೇಸರ ಮಾಡಿಕೊಂಡಿದ್ದಾರೆ.

ಕುಮಾರಸ್ವಾಮಿ 2006ರಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದವರು
"ಎಚ್. ಡಿ. ಕುಮಾರಸ್ವಾಮಿ 2006ರಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದವರು. ಹೀಗಾಗಿ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಭಾನುವಾರ (ಅ 27) ಟೀಕಿಸಿದ್ದರು. "ಕುಮಾರಸ್ವಾಮಿ ಹೇಳಿಕೆ ನೋಡಿದರೆ ಅವರು ಬಿಜೆಪಿಯನ್ನು ಬೆಂಬಿಸುತ್ತಿದ್ದಾರೆ ಅನ್ನಿಸುತ್ತಿದೆ. ನಾನು ಬಿಜೆಪಿ ಸರ್ಕಾರವನ್ನು ಉಳಿಸುವೆ ಎಂದರೆ ಏನು ಅರ್ಥ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು.












Click it and Unblock the Notifications