ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ತಮಿಳುನಾಡು ಪೊಲೀಸರಿಗೆ ಶರಣು!
ಬೆಂಗಳೂರು, ಡಿ. 20: ಕಳೆದ ಎರಡು ದಶಕದಿಂದ ತಲೆಮರೆಸಿಕೊಂಡಿದ್ದ ನಕ್ಸಲ್ ಸಂಘಟನೆ ಮುಖ್ಯಸ್ಥೆ ಹೊಸಗದ್ದೆ ಪ್ರಭಾ ಅಲಿಯಾಸ್ ಸಂಧ್ಯಾ ತಮಿಳುನಾಡು ಪೊಲೀಸರಿಗೆ ಶರಣಾಗಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ಕೇರಳ ಪೊಲೀಸರ ಕಾರ್ಯಚರಣೆ ವೇಳೆ ನಕ್ಸಲ್ ಮುಖಂಡ ಬಿ.ಜಿ. ಕೃಷ್ಣಮೂರ್ತಿ ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೇ ಹೊಸಗದ್ದೆ ಪ್ರಭಾ ತಮಿಳುನಾಡು ಪೊಲೀಸರಿಗೆ ಶರಣಾಗಿದ್ದಾರೆ.
ಮಲೆನಾಡಿನ ನಕ್ಸಲ್ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಹೊಸಗೆದ್ದೆ ಪ್ರಭಾ ಆಗುಂಬೆ ಸಮೀಪದ ಹೊಸಗದ್ದೆ ನಿವಾಸಿ. ಕಡು ಬಡತನ ಕುಟುಂಬದ ಹಿನ್ನೆಲೆ ಹೊಂದಿದ್ದರು. ಮಲೆನಾಡಿನಲ್ಲಿ ಟೀ ಪ್ಲಾಂಟರ್ಗಳು ಹಾಗೂ ರಾಷ್ಟ್ರೀಯ ಉದ್ಯಾನದಲ್ಲಿ ಬುಡಕಟ್ಟು ನಿವಾಸಿಗಳನ್ನು ಒಕ್ಕಲೆಬ್ಬಿಸುವ ಸಮಯದಲ್ಲಿ ರೂಪಗೊಂಡ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಅಸಮಾನತೆ, ಶೋಷಣೆ ನೋಡುತ್ತ ಎಡಪಂಥೀಯ ಚಳವಳಿಗೆ ಆಕರ್ಷಿತಳಾಗಿ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಳು.
ಹೋರಾಟದ ಮೂಲಕ ಗುರುತಿಸಿಕೊಂಡಿದ್ದ ಪ್ರಭಾ ಮುಖ್ಯ ವಾಹಿನಿಯಿಂದ ಮಾಯವಾಗಿ ಮಲೆನಾಡಿನ ಕಾಡು ಸೇರಿ ನಕ್ಸಲ್ ಹೋರಾಟದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಳು. ನಕ್ಸಲ್ ಮುಖಂಡ ಬಿ.ಜಿ. ಕೃಷ್ಣಮೂರ್ತಿಯನ್ನು ಮದುವೆಯಾಗಿದ್ದಾರೆ. ಬಹುತೇಕ ನಕ್ಸಲ್ ಮುಖಂಡರು ಶರಣಾಗತಿ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬಂದರೂ ಹೊಸಗದ್ದೆ ಪ್ರಭಾ ಶರಣಾಗಿರಲಿಲ್ಲ. ಪತ್ನಿ ಬಿ.ಜಿ. ಕೃಷ್ಣಮೂರ್ತಿ ಹಾದಿಯಲ್ಲಿಯೇ ಸಾಗಿದ್ದರು.
ಕೇರಳದ ವಯನಾಡು ಪೊಲೀಸರು ಬಿ.ಜಿ. ಕೃಷ್ಣಮೂರ್ತಿಯನ್ನು ಇತ್ತೀಚೆಗೆ ಬಂಧಿಸಿದ್ದರು. ಇದಾದ ಬಳಿಕ ಹೊಸಗದ್ದೆ ಪ್ರಭಾ ತಮಿಳುನಾಡಿನ ವೆಲ್ಲೂರು ಪೊಲೀಸರಿಗೆ ಶರಣಾಗಿದ್ದಾರೆ. ಪತಿ ಬಂಧನದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಹೊಸಗದ್ದೆ ಪ್ರಭಾ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಪ್ರಭಾ ಸಾವಿನ ವದಂತಿ: 2010 ರಲ್ಲಿ ಪ್ರಭಾ ಸಾವನ್ನಪ್ಪಿದ್ದಾಳೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಗ್ರಾಮದ ಮುಖಂಡರಿಗೆ ಕರೆ ಮಾಡಿ ಪ್ರಭಾ ಸಾವನ್ನಪ್ಪಿದ್ದು, ಶ್ರದ್ಧಾಂಜಲಿ ಸಲ್ಲಿಸುವಂತೆ ಅಪರಿಚಿತರು ಕರೆ ಮಾಡಿ ಗ್ರಾಮಸ್ಥರಿಗೆ ತಿಳಿಸಿದ್ದರು. ಹೀಗಾಗಿ ಪ್ರಭಾ ಸಾವನ್ನಪ್ಪಿರಬಹುದು ಎಂದು ಪೊಲೀಸರು ಕೂಡ ಶಂಕಿಸಿದ್ದರು. ಆದರೆ, ಆಕೆಯ ಮೃತ ದೇಹ ಸಿಗದೇ ಖಚಿತ ಪಡಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದರು. ಕೇರಳದಲ್ಲಿ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇದರ ಬೆನ್ನಲ್ಲೇ ವಯನಾಡು ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಭಾ ಅವರ ಪತಿ ಬಿ.ಜಿ. ಕೃಷ್ಣಮೂರ್ತಿಯನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಹೊಸಗದ್ದೆ ಪ್ರಭಾ ಕೂಡ ಶರಣಾಗಿದ್ದಾರೆ.
ಪ್ರಭಾ ಪತ್ತೆಗೆ ಬಹುಮಾನ ಘೋಷಣೆ : ಹೊಸಗದ್ದೆ ಪ್ರಭಾ ವಿರುದ್ಧ ರಾಜ್ಯದಲ್ಲಿ 30 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ ಎನ್ನಲಾಗಿದೆ. ಶಿವಮೊಗ್ಗದಲ್ಲಿ ತಲ್ಲೂರು ಅಂಗಡಿ ಬಸ್ ಸುಟ್ಟ ಪ್ರಕರಣ ಸೇರಿದಂತೆ ನಾಲ್ಕು ಕೇಸು ದಾಖಲಾಗಿದ್ದು, ಆಕೆಯನ್ನು ಹುಡುಕಿಕೊಟ್ಟವರಿಗೆ ಐದು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಅದಾಗಿಯೂ ಎಲ್ಲಿಯೂ ಪ್ರಭಾ ಸಿಕ್ಕಿರಲಿಲ್ಲ. ಇದೀಗ ಹೊಸಗದ್ದೆ ಪ್ರಭಾ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ನೂರ್ ಶ್ರೀಧರ್ ಸೇರಿದಂತೆ ಅನೇಕರು ಶರಣಾಗತಿ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬಂದರು. ಆದರೂ ಹೊಸಗದ್ದೆ ಪ್ರಭಾ ಮತ್ತು ಬಿ.ಜಿ.ಕೃಷ್ಣಮೂರ್ತಿ ಹೋರಾಟದಲ್ಲಿಯೇ ಮುಂದುವರೆದಿದ್ದರು. ಕೃಷ್ಣಮೂರ್ತಿ ಬಂಧನದ ಬಳಿಕ ಇದೀಗ ಸ್ವಯಂ ಪ್ರೇರಿತವಾಗಿ ಪ್ರಭಾ ಪೊಲೀಸರಿಗೆ ಶರಣಾಗಿದ್ದಾರೆ.
ಮಲೆನಾಡಿನ ನಕ್ಸಲ್ ಚಳವಳಿ ಮುಕ್ತಾಯ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ಹೊಸ ಮನ್ವಂತರಕ್ಕೆ ನಾಂದಿ ಹಾಡಿತ್ತು. ನಕ್ಸಲ್ ಚಳವಳಿ ಹುಟ್ಟಿಕೊಳ್ಳಲು ನಾಂದಿ ಹಾಡಿತ್ತು. ಬಿ.ಜಿ.ಕೃಷ್ಣಮೂರ್ತಿ ಮತ್ತು ಹೊಸಗದ್ದೆ ಪ್ರಭಾ ಕೂಡ ಈ ಹೋರಾಟದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಬಿ.ಜಿ. ಕೃಷ್ಣಮೂರ್ತಿ ಬಂಧನಕ್ಕೆ ಒಳಗಾಗಿದ್ದು, ಇದೀಗ ಪ್ರಭಾ ಕೂಡ ಶರಣಾಗಿದ್ದಾರೆ. ಈ ಮೂಲ ಮಲೆನಾಡಿನ ನಕ್ಸಲ್ ಚಟುವಟಿಕೆ ಬಹುತೇಕ ಅಂತ್ಯಗೊಂಡಂತಾಗಿದೆ.
Recommended Video