Karnataka Monsoon: ರಾಜ್ಯದ ಈ ಜಿಲ್ಲೆಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ವರುಣಾರ್ಭಟ
ವಾರ (ಜೂನ್ 25) ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಹಾಗೆಯೇ ಇಂದು (ಜೂನ್ 26) ಕೂಡ ಈ ಭಾಗಗಳಲ್ಲಿ ಮಾತ್ರ ಮುಂಗಾರು ಆರ್ಭಟ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ ಮೋಡ ಮುಚ್ಚಿದ ವಾತಾವರಣ ನಿರ್ಮಾಣ ಆಗಿದ್ದು, 11 ಗಂಟೆ ಬಳಿಕ ಬಿಸಿಲಿನ ಧಗೆ ಮುಂದುವರೆದಿತ್ತು. ಅದರಲ್ಲೂ ಸಂಜೆ 6 ಗಂಟೆಯಾದರೂ ನಗರದಲ್ಲಿ ಬಿಸಿಲಿನ ವಾತಾವರಣವೇ ಇದ್ದು, ರಾತ್ರಿ 8 ಗಂಟೆ ಸುಮಾರಿಗೆ ಹಲವೆಡೆ ಸಾಧಾರಣ ಮಳೆಯಾಗಿದೆ. ಹಾಗೆಯೇ ಸೋಮವಾರ (ಜೂನ್ 26) ಕೂಡ ಬೆಳಗ್ಗೆಯಿಂದ ಮೋಡ ಕವಿದಿದ್ದು, ಸಂಜೆ ವೇಳೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಕರಾವಳಿಯ ಬಹುತೇಕ ಜಿಲ್ಲೆಗಳು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಜೂನ್ 26, 27ರಂದು ಭಾರೀ ಮಳೆ ಬೀಳಲಿದೆ ಎಂದು ತಿಳಿಸಿದೆ. ಅದರಲ್ಲೂ ಹಲವು ದಿನಗಳಿಂದ ಉತ್ತರ ಒಳನಾಡಿನಲ್ಲಿ ಮುಂಗಾರು ಚುರುಕಾಗಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾನುವಾರ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಸಾಧಾರಣ ಮಳೆಯಾಗಿದೆ. ಅದರಲ್ಲೂ ದಾಸರಹಳ್ಳಿ ವಲಯದ ಪೀಣ್ಣ ಕೈಗಾರಿಕೆ ಪ್ರದೇಶದಲ್ಲಿ ಅಧಿಕ ಮಳೆ ಬಿದ್ದಿದೆ. ಇನ್ನು ಮೆಜೆಸ್ಟಿಕ್, ಹೆಬ್ಬಾಳ, ಆರ್ಟಿ ನಗರ, ಗಂಗಾನಗರ, ಶಿವಾಜಿನಗರ, ವಸಂತ ನಗರ, ಚಾಮರಾಜಪೇಟೆ, ಯಲಹಂಕ, ರಾಜಾಜಿನಗರ, ಕೋರಮಂಗಲ ಸೇರಿ ಹಲವು ಕಡೆ ಸಾಧಾರಣ ಮಳೆಯಾಗಿದೆ ಎಂದು ತಿಳಿಸಿದೆ.
ಹಾಗೆಯೇ ಸಿಲಿಕಾನ್ ಸಿಟಿಯ ಹಲವೆಡೆ ಸೋಮವಾರವೂ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಗುಡುಗು ಸಹಿತ ಭಾರೀ ಮಳೆ ಬೀಳುವ ಸಾಧ್ಯತೆಯಿದೆ. ಅಲ್ಲದೆ ಗಾಳಿಯ ವೇಗವು ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ನಗರದಲ್ಲಿ ಗರಿಷ್ಠ ಉಷ್ಣಾಂಶ 29 ಡಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಮತ್ತೊಂದೆಡೆ ನಿನ್ನೆ ರಾಯಚೂರು, ಕಲಬುರಗಿ, ಬೀದರ್, ಯಾದಗಿರಿ, ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬಿದ್ದಿದೆ. ಇನ್ನೂ ಕೆಲವು ಕಡೆ ಅಬ್ಬರದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಜೂನ್ 26, 27 ಎರಡು ದಿನಗಳ ಕಾಲ ಕರಾವಳಿ, ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳು, ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ಮುಂದಿನ 24 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಬಿರುಗಾಳಿ ವೇಗ ಗಂಟೆಗೆ 40-45 ಕಿ.ಮೀಟರ್ನಿಂದ 55 ಕಿ.ಮೀ. ಇರಲಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ.
ನಿನ್ನೆ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಬಿದ್ದಿದೆ. ಹಾಗೆಯೇ ಕುಂದಾಪುರ, ಕೋಟಾ, ಮಂಕಿಯಲ್ಲಿ 11 ಸೆಂ. ಮೀ. ಮಳೆ ದಾಖಲಾಗಿದೆ. ಸಿದ್ದಾಪುರ 10 ಸೆಂ.ಮೀ, ಶಿರಾಲಿ ತಲಾ 9 ಸೆಂ.ಮೀ., ಗೇರುಸೊಪ್ಪ 8 ಸೆಂ.ಮೀ., ಅಂಕೋಲಾ ಮತ್ತು ಕಾರ್ಕಳದಲ್ಲಿ ತಲಾ 7 ಸೆಂ.ಮೀ. ಮಳೆ ಬಿದ್ದಿದೆ ಎಂದು ತಿಳಿಸಿದೆ.
ಒಟ್ಟಿನಲ್ಲಿ ರಾಜ್ಯದ ಬಹುತೇಕ ಕಡೆ ಈಗಾಗಲೇ ಮುಂಗಾರು ಆವರಿಸಿಬಿಟ್ಟಿದೆ. ಮತ್ತೆ ಕೆಲವಡೆ ಮಳೆ ಇಲ್ಲದೆ ಬೇಸಿಗೆ ಬೆಳೆಗಳು ನಾಶವಾಗುತ್ತಿವೆ. ಇನ್ನು ಬೆಳೆಗಳನ್ನು ಕಳೆದುಕೊಂಡ ರೈತರ ಪಾಡಂತೂ ಹೇಳತೀರದಾಗಿದೆ. ಮಳೆಗಾಗಿ ಹಲವರು ವಿಶೇಷ ಆಚರಣೆಗಳನ್ನು ಮಾಡಿದರೆ, ಇನ್ನು ಕೆಲವರು ದೇವರ ಮೊರೆ ಹೋಗಿ ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ. ಅದೇನೇ ಇರ್ಲಿ ಕಳೆದ ಬಾರಿಗೆ ಹೋಲಿಸಿದೆ ಈ ಬಾರಿ ಮುಂಗಾರು ಮಳೆಯ ಆರ್ಭಟ ತುಸು ಕಡಿಮೆಯೇ ಆಗಿದೆ. ಹಲವು ಡ್ಯಾಂಗಳು ಕೂಡ ಬತ್ತಿಹೋಗುವ ಹಂತವನ್ನು ತಲುಪಿವೆ.












Click it and Unblock the Notifications