ಕರ್ನಾಟಕ ಲೋಕಸಭೆ ಚುನಾವಣೆ 2ನೇ ಹಂತದ ಒಟ್ಟಾರೆ ಚಿತ್ರಣ
ಬೆಂಗಳೂರು, ಏಪ್ರಿಲ್ 23: ದೇಶದ ಭವಿಷ್ಯ ನಿರ್ಧರಿಸುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕವು ಪಾಲ್ಗೊಂಡಿದ್ದು, ಮತ ಚಲಾವಣೆಯ ಜವಾಭ್ದಾರಿಯುತ ಕಾರ್ಯವನ್ನು ಕರ್ನಾಟಕದ 68% ಮತದಾರರು ಮಾಡಿ ಮುಗಿಸಿದ್ದಾರೆ.
ಇಂದು ರಾಜ್ಯದ 14 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆದು 67.21% ಮತದಾನ ದಾಖಲಾಯಿತು. ಇಂದಿನ ಮತದಾನವು ಬಹುತೇಕ ಶಾಂತಿಯುತವಾಗಿ ನಡೆದಿದೆ. ಕೆಲವು ಕಡೆ ಇವಿಎಂಗಳು ಕೈಕೊಟ್ಟ ವರದಿಯಾಯಿತಾದರೂ ಎಲ್ಲಿಯೂ ಮತದಾನ ನಿಲ್ಲಲಿಲ್ಲ.
ಚಿಕ್ಕೋಡಿ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಕ್ಷೇತ್ರಗಳಿಗೆ ಇಂದು ಮತದಾನವಾಯಿತು. ಮೊದಲ ಹಂತದ ಮತದಾನ ಏಪ್ರಿಲ್ 18ರಂದು ಮುಗಿದಿದೆ. ಅಂದು 68.80% ಮತದಾನ ದಾಖಲಾಗಿತ್ತು.
ಇಂದು ಒಟ್ಟು 237 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಯಿತು. ಎರಡನೇ ಹಂತದ ಚುನಾವಣೆಯಲ್ಲಿ ಗಮನ ಸೆಳೆದಿರುವ ಶಿವಮೊಗ್ಗದಲ್ಲಿ ಹೆಚ್ಚು ಮತದಾನ ದಾಖಲಾದರೆ, ಮತ್ತೊಂದು ಪ್ರಮುಖ ಕ್ಷೇತ್ರ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿರುವ ಕಲಬುರಗಿಯಲ್ಲಿ ಕಡಿಮೆ ಮತದಾನ ದಾಖಲಾಯಿತು.

ಶಿವಮೊಗ್ಗ-ಉತ್ತರ ಕನ್ನಡದಲ್ಲಿ ಮಳೆ
ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಧ್ಯಾಹ್ನದ ಮೇಲೆ ಮಳೆ ಸುರಿದು ಮತದಾನಕ್ಕೆ ಅಡ್ಡಿಯಾಯಿತು, ಆದರೂ ಸಹ ಆ ಎರಡೂ ಕ್ಷೇತ್ರಗಳಲ್ಲಿ ಉತ್ತಮ ಮತದಾನ ದಾಖಲಾಗಿದ್ದು, ಅಲ್ಲಿನ ಮತದಾರರ ಕರ್ತವ್ಯ ನಿಷ್ಠೆ ಪ್ರದರ್ಶಿಸಿತು.

12 ಕಡೆ ಮತದಾನ ಬಹಿಷ್ಕಾರ
12 ಕಡೆ ಮತದಾನ ಬಹಿಷ್ಕಾರ ಮಾಡಲಾಗಿತ್ತು, ಆದರೆ ಮನವೊಲಿಸಿದ ಬಳಿಕ ಮತದಾನ ಸರಾಗವಾಗಿ ನಡೆಯಿತು, ಎಲ್ಲೂ ಸಹ ಮರುಮತದಾನದ ಆಗುತ್ತಿಲ್ಲ.

ಹಲವು ಗಣ್ಯರಿಂದ ಮತದಾನ
ಬಿಎಸ್.ಯಡಿಯೂರಪ್ಪ, ರಾಘವೇಂದ್ರ, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್, ಅನಂತ್ಕುಮಾರ್ ಹೆಗ್ಡೆ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಕುಮಾರ ಬಂಗಾರಪ್ಪ, ಮಧು ಬಂಗಾರಪ್ಪ, ಚಿತ್ರ ನಟ ರಿಶಬ್ ಶೆಟ್ಟಿ ಇನ್ನೂ ಹಲವು ಪ್ರಮುಖರು ಇಂದು ಮತಚಲಾಯಿಸಿದರು.

ಕೆಲವು ಕಡೆ ಸಣ್ಣ-ಪುಟ್ಟ ಸಂಘರ್ಷಗಳು
ಕೆಲವು ಕಡೆ ಸಣ್ಣ-ಪುಟ್ಟ ಸಂಘರ್ಷಗಳು ನಡೆದವು, ಕಾರವಾರದಲ್ಲಿ ಶಾಸಕಿ ರೂಪಾಲಿ ಅವರು ಜೆಡಿಎಸ್ ಕಾರ್ಯಕರ್ತರಿಗೆ ಮತಗಟ್ಟೆ ಬಳಿ ಜೋರು ದನಿಯಲ್ಲಿ ಬೈದಾಡಿದ್ದು ಸುದ್ದಿಯಾಯಿತು, ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಮಾರಾ-ಮಾರಿ ಆಯಿತು.

ಗಮನ ಸೆಳೆದ ರಮೇಶ್ ಜಾರಕಿಹೊಳಿ ಹೇಳಿಕೆ
ಕಾಂಗ್ರೆಸ್ ಭಿನ್ನಮತೀಯ ಶಾಸಕ ರಮೇಶ್ ಜಾರಕಿಹೊಳಿ ಅವರು ಇಂದು ಮತದಾನ ಮಾಡಿ ಬಂದು ನೀಡಿದ ಹೇಳಿಕೆ, ಚುನಾವಣೆಯಿಂದ ಮಾಧ್ಯಮಗಳ ಗಮನ ರಾಜಕಾರಣದತ್ತ ಹರಿಯುವಂತೆ ಮಾಡಿತು, 'ಕಾಂಗ್ರೆಸ್ ರಾಜೀನಾಮೆ ನೀಡಿಯೇ ಸಿದ್ಧ, ಶೀಘ್ರದಲ್ಲಿಯೇ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ' ಎಂದು ಹೇಳಿದರು.












Click it and Unblock the Notifications