ಸರ್ಕಾರ ರಚಿಸುವಾಗ ಸುಮ್ಮನಿದ್ದು, ಈಗ ಜಾತಿ ನೋಡುವುದು ಸರಿಯಲ್ಲ!
ಬೆಂಗಳೂರು, ಜೂ. 15: ಪರಿಷತ್ ಚುನಾವಣೆ ಬಿಜೆಪಿಯಲ್ಲಿಯೇ ರಂಗೇರುತ್ತಿದೆ. ಪಕ್ಷದಲ್ಲಿಯೇ ಹೇಳಿಕೆಗಳು-ಪ್ರತಿ ಹೇಳಿಕೆಗಳು ತೀವ್ರಗೊಳ್ಳುತ್ತಿವೆ. ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಎಚ್. ವಿಶ್ವನಾಥ್ ಸರ್ಕಾರದಲ್ಲಿನ ತಮ್ಮ ಆಪ್ತ ಸಚಿವರೊಂದಿಗೆ ಕುಮಾರಕೃಪಾ ಅತಿಥಿಗೃಹದಲ್ಲಿ ಮಾತುಕತೆ ನಡೆಸಿದ್ದಾರೆ.
Recommended Video
ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುವ ಮೊದಲು ಬೆಂಗಳೂರಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್, ಮಾಜಿ ಸಚಿವ ಎಚ್. ವಿಶ್ವನಾಥ್, ಅನರ್ಹ ಶಾಸಕ ಮುನಿರತ್ನ ಸಭೆ ಸೇರಿ ಚರ್ಚಿಸಿದರು. ಮಜಿ ಸಚಿವ ಎಚ್. ವಿಶ್ವನಾಥ್ ಜೊತೆ ಚರ್ಚಿಸಿದ ಬಳಿಕ ಸಿಎಂ ಗೃಹಕಚೇರಿ ಕೃಷ್ಣಾಕ್ಕೆ ಸಚಿವ ಸೋಮಶೇಖರ್ ತೆರಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿರುವ ಮಾಜಿ ಸಚಿವ ಎಚ್. ವಿಶ್ವನಾಥ್, ಪರಿಷತ್ಗೆ ಆಯ್ಕೆಗೆ ಟಿಕೆಟ್ ಕೊಡುವಾಗ ಜಾತಿ ನೋಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಒಂದೇ ಸಮುದಾಯಕ್ಕೆ ಸೇರಿರುವ ಮಾಜಿ ಸಚಿವ ಆರ್. ಶಂಕರ್ ಹಾಗೂ ಎಚ್. ವಿಶ್ವನಾಥ್ ಇಬ್ಬರಿಗೂ ಪರಿಷತ್ ಚುನಾವಣೆಗೆ ಟಿಕೆಟ್ ಕೊಡಲು ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗಿದೆ ಎಂಬುದಕ್ಕೆ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈಗ ಜಾತಿ ನೋಡುವುದಾದರೆ, ಹಿಂದೆ ಬಿಜೆಪಿ ಸರ್ಕಾರ ರಚನೆ ಮಾಡೋವಾಗ ಯಾಕೆ ಜಾತಿ ನೋಡಲಿಲ್ಲ? ಎಂದು ಅವರು ಮರುಪ್ರಶ್ನೆ ಹಾಕಿದ್ದಾರೆ. ಜಾತಿಯ ಹೆಸರಿನಲ್ಲಿ ನಮ್ಮನ್ನು ಪರಿಗಣನೆ ಮಾಡೋದು ಸರಿಯಾದ ಕ್ರಮ ಅಲ್ಲ. ಸರ್ಕಾರ ಬರುವಾಗ ಯಾರಾದರೂ ಜಾತಿ ನೋಡಿದ್ರಾ? ಆಗಲೇ ಇವರು ಆ ಜಾತಿಯವರು ಬೇಡ ಅಂತ ಹೇಳಿದ್ರಾ?
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತಿನ ಮೇಲೆ ನಿಲ್ಲುವ ನಾಯಕ. ನನಗೆ ಹಾಗೂ ಮಾಜಿ ಸಚಿವರಾದ ಶಂಕರ್ ಮತ್ತು ಎಂಟಿಬಿಗೆ ಅವಕಾಶ ಸಿಕ್ಕೆ ಸಿಗಲಿದೆ. 9 ಪರಿಷತ್ ಸ್ಥಾನ ಈಗ ಖಾಲಿಯಾಗಲಿವೆ. ನಮಗೆ ಅವಕಾಶ ಕೊಡ್ತೇನೆ ಅಂತ ಸಿಎಂ ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ದಾರೆ. ನಮಗೆ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇದೆ. ನಾನು ರಾಜ್ಯಸಭೆಗೆ ಹೋಗಬಹುದಿತ್ತು ಅನ್ನೋ ಚರ್ಚೆ ಸರಿಯಲ್ಲ. ಚುನಾವಣೆಗೆ ನಿಲ್ಲಬಾರದಿತ್ತು ಅನ್ನೋ ಚರ್ಚೆಯೂ ಬೇಡ. ನಮಗೆ ಅವಕಾಶ ಕೊಡಿ ಅನ್ನೋದಷ್ಟೇ ಈಗ ಮುಖ್ಯ ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿಕೆ ಕೊಟ್ಟಿದ್ದಾರೆ.












Click it and Unblock the Notifications