ಪ್ರವಾಹ ಸಂತ್ರಸ್ತರಿಗೆ ಮಾನವೀಯತೆ ತೋರಿದ ಕುಮಾರಸ್ವಾಮಿ
ಬೆಂಗಳೂರು, ಆ 9: ರಾಜ್ಯದಲ್ಲಿನ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಜಾತ್ಯಾತೀತ ಜನತಾದಳ ನಿರ್ಧರಿಸಿದೆ. ಈ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಕಷ್ಟದಲ್ಲಿರುವ ನಮ್ಮವರ ಜೊತೆ ನಿಲ್ಲೋಣ ಎಂದಿದ್ದಾರೆ.
ಕುಮಾರಸ್ವಾಮಿ ಮಾಡಿರುವ ಟ್ವೀಟ್ ಹೀಗಿದೆ, ' ಅತಿವೃಷ್ಟಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ಪರಿಹಾರ ಕಾರ್ಯಕ್ಕಾಗಿ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ನಮ್ಮ ಒಂದು ತಿಂಗಳ ಸಂಬಳವನ್ನು ನೀಡುತ್ತಿದ್ದೇವೆ.
ಕಷ್ಟದ ಸಂದರ್ಭದಲ್ಲಿ ನಮ್ಮ ಅಣ್ಣ-ತಮ್ಮಂದಿರೊಂದಿಗೆ ನಿಲ್ಲೋಣ, #KarnatakaFloods'.

ಜೊತೆಗೆ, ಪ್ರವಾಹ ಸಂತ್ರಸ್ತರ ನಿರ್ವಹಣೆಯ ಬಗ್ಗೆ ಯಡಿಯೂರಪ್ಪ ಸರಕಾರದ ವಿರುದ್ದ ಅಸಮಾಧಾನವನ್ನೂ ಕುಮಾರಸ್ವಾಮಿ ಹೊರಹಾಕಿದ್ದಾರೆ. ಅತೃಪ್ತ ಶಾಸಕರ ಮೇಲೆ ತೋರಿದ ಕಾಳಜಿ, ಸಂತ್ರಸ್ತರ ಮೇಲೆ ಇಲ್ಲದಾಯಿಯೇ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ರೋಮ್ ಹೊತ್ತಿ ಉರಿಯುವಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ, ಹಾಗೆಯೇ ಉತ್ತರ ಕರ್ನಾಟಕ ಭಾರೀ ಮಳೆಯಿಂದ ಜರ್ಜರಿತವಾಗಿರುವಾಗ ಯಡಿಯೂರಪ್ಪನವರು ದೆಹಲಿಗೆ ಹೋಗಿ ಕುಳಿತಿದ್ದಾರೆ'.
'ಕರ್ನಾಟಕದಲ್ಲಿ ಸಮಸ್ಯೆ ಹೇಳಿಕೊಳ್ಳೋಕೆ ಮಂತ್ರಿಮಂಡಲವೂ ಇಲ್ಲ.ಇದೇನಾ ನಿಮ್ಮ ಜನಮೆಚ್ಚಿನ ಆಡಳಿತ ಮರ್ಯಾದಾ ಪುರುಷೋತ್ತಮರೇ', ಎಂದು ಕುಮಾರಸ್ವಾಮಿ, ಮುಖ್ಯಮಂತ್ರಿಗಳ ವಿರುದ್ದ ಕಿಡಿಕಾರಿದ್ದಾರೆ.
'ಸಂತ್ರಸ್ತರ ನೆರವಿಗೆ ಬನ್ನಿ' ಎಂದು ರಾಜ್ಯ ಸರಕಾರ ಮತ್ತು ವಿವಿಧ ಸಂಘಟನೆಗಳು, ಚಿತ್ರೋದ್ಯಮದವರು ಮನವಿ ಮಾಡಿದ್ದು, ಸುಧಾ ಮೂರ್ತಿ ನೇತೃತ್ವದ ಇನ್ಫೋಸಿಸ್ ಫೌಂಡೇಶನ್ ಹತ್ತು ಕೋಟಿ ರೂಪಾಯಿ ದೇಣಿಗೆ ನೀಡಿದೆ.












Click it and Unblock the Notifications