ಕರ್ನಾಟಕದಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ: ಅಧಿಕಾರಿಗಳಿಗೆ ಗೃಹ ಸಚಿವರು ಮಹತ್ವದ ಸಲಹೆಗಳು
ಬೆಂಗಳೂರು, ಜೂನ್ 28: ಮನೆಮನೆಗೆ ಪೊಲೀಸ್ ಉಪಕ್ರಮವನ್ನು ಯಶಸ್ವಿಗೊಳಿಸಿದರೆ, ಕರ್ನಾಟಕ ಪೊಲೀಸ್ ಇಲಾಖೆಗೆ ದೇಶದಲ್ಲಿ ಕೀರ್ತಿ ಬರುತ್ತದೆ. ಪೊಲೀಸರು ಮನೆಗಳಿಗೆ ಭೇಟಿ ನೀಡುವುದರಿಂದ, ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಮಸ್ಯೆಗಳು ಏನೆಂಬುದು ಗೊತ್ತಾಗುತ್ತದೆ. ಅಪರಾಧಗಳನ್ನು ತಡೆಗಟ್ಟಬಹುದು. ಕರ್ನಾಟಕ ಪೊಲೀಸರನ್ನು ನೋಡಿ ಬೇರೆ ರಾಜ್ಯಗಳ ಪೊಲೀಸರು ಹೊಸತನ್ನು ಕಲಿಯಬೇಕು ಎಂದು ಹಲವು ವಿಚಾರಗಳ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದ ಎರಡನೇ ದಿನದ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಪೊಲೀಸ್ ಇಲಾಖೆಯ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆಯಾಗಬೇಕಿದೆ. ವಿವಿಧ ಸಮಸ್ಯೆಗಳಿಗೆ ಸಂದಂಧಿಸಿದಂತೆ ತಜ್ಞರಿಂದ ಚರ್ಚೆ ನಡೆಸಿ, ಸಲಹೆಗಳನ್ನು ಪಡೆಯಬೇಕು. ಇದರಿಂದ ಪೊಲೀಸರ ತನಿಖೆಗೆ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದ ರೂಪುರೇಷೆ ಬದಲಾಗಬೇಕು ಎಂದರು.

ಪೊಲೀಸರು ಜನಸ್ನೇಹಿಯಾಗಿ ವರ್ತಿಸಬೇಕು
ಬೇರೆ ರಾಜ್ಯಗಳ ಪೊಲೀಸರು ಕರ್ನಾಟಕ ಪೊಲೀಸರಿಂದ ತಂತ್ರಜ್ಞಾನ ಬಳಕೆ, ಹೊಸತನ್ನು ಕಲಿಯುವಂತಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿಗಳಾಗಬೇಕು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಕರ್ನಾಟಕ ಪೊಲೀಸರು ಮಾದರಿಯಾಗಬೇಕು. ಸರ್ಕಾರ ಹಾಗೂ ಜನರ ಆಶಯದಂತೆ ಪೊಲೀಸ್ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಠಾಣೆಗಳಿಗೆ ಬರುವ ಜನರನ್ನು ಹತ್ತಾರು ಬಾರಿ ಅಲೆಸದೆ ಅವರ ದೂರುಗಳನ್ನು ಸ್ವೀಕರಿಸಿ, ಜನಸ್ನೇಹಿಯಾಗಿ ವರ್ತಿಸಬೇಕು ಎಂದು ಸಲಹೆಗಳನ್ನು ನೀಡಿದರು.
ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳಿರುತ್ತವೆ. ಅಧಿಕಾರಿಗಳು ಫೀಲ್ಡ್ಗೆ ಇಳಿದು ಕೆಲಸ ಮಾಡಬೇಕು. ದ್ವೇಷ, ಕೋಮು ಸಂಘರ್ಷ ಇನ್ನಿತರ ವಿಚಾರಗಳು ಹೊರ ಬರುತ್ತವೆ. ಗಣೇಶ ಹಬ್ಬ ಆಚರಣೆ, ಮೊಹರಂ ಸೇರಿದಂತೆ ಇನ್ನಿತರ ಹಬ್ಬ-ಆಚರಣೆಗಳ ಸಂದರ್ಭದಲ್ಲಿ ಏನೆಲ್ಲ ಸಮಸ್ಯೆಗಳು ಬರುತ್ತವೆ ಎಂಬುದನ್ನು ಗಮನಸಿದೇ ಹೋದರೆ ಪೊಲೀಸರ ಪ್ರಯೋಜನವೇನಿದೆ?

ಎಸ್ಸಿ, ಎಸ್ಟಿ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತಪ್ಪಿತಸ್ಥರಿಗೆ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಇಂತಹ ಪ್ರಕರಣಗಳ ಕುರಿತಂತೆ ತನಿಖಾಧಿಕಾರಿಗಳು ಸರ್ಕಾರಿ ಅಭಿಯೋಜಕರನ್ನು (ಪಬ್ಲಿಕ್ ಪ್ರಾಸಿಕ್ಯೂಟರ್) ಭೇಟಿ ಮಾಡಿ, ಚರ್ಚಿಸಿ ಅಗತ್ಯ ಸಲಹೆಗಳನ್ನು ಪಡೆಯಬೇಕು. ಇದನ್ನು ಅಧಿಕಾರಿಗಳು ಸರಿಯಾಗಿ ಪಾಲಿಸುತ್ತಿಲ್ಲ. ಇದರಿಂದಾಗಿಯೇ ಆರೋಪಿಗಳು ಕಾನೂನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.
ಡ್ರಗ್ಸ್ ದಂಧೆ ತಡೆಯುವುದು ರಾಕೆಟ್ ಸೈನ್ಸ್ ಅಲ್ಲ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಜನರ ಮೇಲಿನ ದೌರ್ಜನ್ಯ ತಡೆಗಟ್ಟಲು ರಾಜ್ಯದಲ್ಲಿ 33 ಡಿಸಿಆರ್ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಇದನ್ನು ಯಶಸ್ವಿಗೊಳಿಸಬೇಕು. ಡ್ರಗ್ಸ್ ಕುರಿತಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವುದು ರಾಕೆಟ್ ಸೈನ್ಸ್ ಏನಲ್ಲ. ಇಲಾಖೆಯಲ್ಲಿ ಅಗತ್ಯ ಪೊಲೀಸ್ ಬಲವಿದೆ. ಡ್ರಗ್ಸ್ ಪ್ರಕರಣಗಳ ತನಿಖೆಯಲ್ಲಿ ತನಿಖಾಧಿಕಾರಿಗಳು ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ತಂತ್ರಾಂಶಗಳ ಪ್ರಯೋಜನ, ವಿಶೇಷ್ಲಣೆ ಅಗತ್ಯ
ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ತರಬೇತಿ ನೀಡಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಂಭೀರವಾಗಿ ಆಲೋಚಿಸಿ, ಗಮನಹರಿಸಬೇಕು. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವರ್ಷಗಳಿಂದಲೂ ಅನೇಕ ತಂತ್ರಾಂಶಗಳನ್ನು (ಅಪ್ಲಿಕೇಶನ್) ಅಭಿವೃದ್ಧಿಪಡಿಸಲಾಗಿದೆ. ಅವುಗಳು ಎಷ್ಟರ ಮಟ್ಟಿಗೆ ಪ್ರಯೋಜನವಾಗಿವೆ ಎಂಬುದರ ಕುರಿತು ಡೇಟಾ ವಿಶ್ಲೇಷಣೆಯ ಅಗತ್ಯವಿದೆ ಎಂದರು.












Click it and Unblock the Notifications