ವೈದ್ಯರ ರಾಜೀನಾಮೆː ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ಬೆಂಗಳೂರು, ಅ.29: ವೈದ್ಯರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ವಿವರ ಕೇಳಿ ನೋಟಿಸ್ ಸಹ ಜಾರಿ ಮಾಡಿದೆ.
ಸರ್ಕಾರಿ ವೈದ್ಯರ ರಾಜೀನಾಮೆ ಮತ್ತು ಮುಷ್ಕರಕ್ಕೆ ಸಂಬಂಧಿಸಿದಂತೆ ವಕೀಲ ಎನ್.ಪಿ.ಅಮೃತೇಶ್ ಎಂಬುವರು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಮತ್ತು ರವಿ ಮಳಿಮಠ್ ಇದ್ದ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಹಾಕಿದೆ.[ರಾಜೀನಾಮೆ ನೀಡಿದ ಸರಕಾರಿ ವೈದ್ಯರ ಅಳಲುಗಳು]

ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೇ ಜನ ತೊಂದರೆ ಪಡುತ್ತಿದ್ದಾರೆ. ಪ್ರತಿ ಬಾರಿಯೂ ವೈದ್ಯರ ನಾಟಕ ನಡೆಯುತ್ತಲೇ ಇದೆ. ಅವರಿಗೆ ಎಸ್ಮಾ ಕಾಯ್ದೆ ಅನ್ವಯ ಯಾಕೆ ನೋಟಿಸ್ ನೀಡಿಲ್ಲ ಎಂದು ಪ್ರಶ್ನಿಸಿದೆ. ವಿಚಾರಣೆಯನ್ನು ಅಕ್ಟೋಬರ್ 30 ಕ್ಕೆ ಮುಂದಕ್ಕೆ ಹಾಕಲಾಗಿದೆ. ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರು ವಿಚಾರಣೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚನೆ ನೀಡಿದೆ.
ಇಂಥ ಪ್ರಕರಣಗಳ ಕುರಿತು ಹೈಕೋರ್ಟ್ ಈ ಹಿಂದೆಯೇ ಅನೇಕ ತೀರ್ಮಾನಗಳನ್ನು ನೀಡಿದೆ. ಜನರಿಗೆ ತೊಂದರೆ ನೀಡುವ ಯಾವ ಕ್ರಮಗಳನ್ನು ನ್ಯಾಯಾಲಯ ಸಹಿಸಲ್ಲ. ನೀವೇ ನ್ಯಾಯಾಲಯದ ತೀರ್ಪು ಉಲ್ಲಂಘಿಸಿದ್ದೀರಿ. ನಿಮ್ಮ ಮೇಲೆಯೇ ಯಾಕೆ ನ್ಯಾಯಾಂಗ ನಿಂದನೆ ದೂರು ದಾಖಲಿಸಬಾರದು ಎಂದು ಕೇಳಿದೆ.[ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದ ಸಚಿವ ಖಾದರ್]
ನ್ಯಾಯಪೀಠ ಕೇಳಿದ ಇತರ ಪ್ರಶ್ನೆಗಳು ಮತ್ತು ಸಲಹೆಗಳು
* ಹೀಗಾಗುತ್ತದೆ ಎಂದು ಗೊತ್ತಿದ್ದರೂ ಮುಂಜಾಗೃತಾ ಕ್ರಮ ಯಾಕೆ ತೆಗೆದುಕೊಂಡಿಲ್ಲ?
* ತುರ್ತು ಸೇವೆ ಅಡಿ ಕಠಿಣ ಕ್ರಮ ತೆಗೆದುಕೊಳ್ಳಬಹುದಿತ್ತಲ್ಲ.
* ಗ್ರಾಮೀಣ ಭಾಗದ ಜನರು ಆರೋಗ್ಯ ಸೇವೆಯಿಲ್ಲದೇ ಪರಿತಪಿಸುತ್ತಿದ್ದಾರೆ.
* ವೈದ್ಯರ ಡ್ರಾಮಾಕ್ಕೆ ನೀವು ಪೂರಕವಾಗಿ ನಡೆದುಕೊಂಡಂತೆ ಕಾಣುತ್ತಿದೆ.
ಹೆಚ್ಚಿದ ಗೊಂದಲ
ಇತ್ತ ರಾಜೀನಾಮೆ ನೀಡಿದ ವೈದ್ಯರಲ್ಲಿಯೇ ಗೊಂದಲ ಕಂಡುಬಂದಿದೆ. ಇಬ್ಬರು ವೈದ್ಯರು ರಾಜೀನಾಮೆ ಹಿಂಪಡೆಯಲು ಒಪ್ಪಿದ್ದಾರೆ. ಅಲ್ಲದೇ ಅನೇಕರು ಪತ್ರ ಮತ್ತು ಇ ಮೇಲ್ ಮೂಲಕ ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.











Click it and Unblock the Notifications