ಆರೋಗ್ಯ ಸೇತು ಆಪ್: ದತ್ತಾಂಶ ಹಂಚಿಕೊಳ್ಳದಂತೆ ಹೈಕೋರ್ಟ್ ತಡೆ
ಬೆಂಗಳೂರು, ಜನವರಿ 26: ಕೊರೊನಾ ವೈರಸ್ ಸೋಂಕು ತೀವ್ರಗೊಂಡ ಸಂದರ್ಭದಲ್ಲಿ ಸೋಂಕಿತರು ಮತ್ತು ಶಂಕಿತರ ವಿವರ ಸಂಗ್ರಹಿಸಲು, ವೈರಸ್ ಕುರಿತು ಮಾಹಿತಿ ನೀಡಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಆರೋಗ್ಯ ಸೇತು ಆಪ್ ಈಗ ಬಹುತೇಕ ಅಪ್ರಸ್ತುತ ಎನಿಸಿದೆ. ಆದರೆ ಆರೋಗ್ಯ ಸೇತು ಆಪ್ ಮೂಲಕ ಲಕ್ಷಾಂತರ ಜನರ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಈ ದತ್ತಾಂಶಗಳನ್ನು ಇತರೆ ಸರ್ಕಾರಿ ಅಧಿಕಾರಿಗಳು ಮತ್ತು ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಅನಿವರ್ ಎ ಅರವಿಂದ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಬಳಿಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ನ್ಯಾಯಫೀಠ ಈ ಆದೇಶ ನೀಡಿದೆ.
ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್ಐಸಿ) ಆರೋಗ್ಯ ಸೇತು ಆಪ್ ಮೂಲಕ ಸಂಗ್ರಹ ಮಾಡಿದ ದತ್ತಾಂಶಗಳನ್ನು ಹಂಚಿಕೊಳ್ಳದಂತೆ ತಡೆದಿದೆ. ಆದರೆ ಆರೋಗ್ಯ ಸೇತು ಆಪ್ ಅಪ್ಲಿಕೇಷನ್ ಬಳಕೆ ಅಥವಾ ಅದರ ಮೂಲಕ ದತ್ತಾಂಶ ಸಂಗ್ರಹಿಸುವುದನ್ನು ಮತ್ತು ಅದರ ಬಳಕೆಯನ್ನು ತಡೆಯಲು ಹೈಕೋರ್ಟ್ ನಿರಾಕರಿಸಿದೆ.

ಆರೋಗ್ಯ ಸೇತು ಆಪ್ನಲ್ಲಿ ಬಳಕೆದಾರರ ತಿಳಿವಳಿಕೆಯುಕ್ತ ಅನುಮತಿಯ ನಂತರವೇ ಆಪ್ ಮೂಲಕ ದತ್ತಾಂಶ ಸಂಗ್ರಹ ಮಾಡಲಾಗುತ್ತಿದೆ ಎಂದು ಅದು ಅಭಿಪ್ರಾಯಪಟ್ಟಿದೆ. ಆರೋಗ್ಯ ಸೇತು ಆಪ್ ಮೂಲಕ ಕೇಂದ್ರ ಸರ್ಕಾರ ದತ್ತಾಂಶ ಸಂಗ್ರಹಣೆ ಮಾಡುತ್ತಿದ್ದು, ಅದಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.












Click it and Unblock the Notifications