Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ಬೇಸಿಗೆಯಲ್ಲೂ ಮಳೆಗಾಲದಂತಹ ಅನುಭವ ಆಗಿತ್ತು. ಇದೀಗ ಬಿರು ಬೇಸಿಗೆ, ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಿದ್ದು, ರಾಜ್ಯಾದ್ಯಂತ ಉರಿಬಿಸಿಲಿನ ಅನುಭವವಾಗುತ್ತಿದೆ. ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಅತ್ಯದಿಕ ಗರಿಷ್ಠ ತಾಪಮಾನ ದಾಖಲಾಗಿದೆ. ಒಂದೇ ದಿನದಲ್ಲಿ ಸಾಮಾನ್ಯಕ್ಕಿಂತ 4.1 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ಏರಿಕೆ ಆಗಿದೆ. ರಾಜ್ಯಾದ್ಯಂತ ಬಿಸಿಲಿನ ತಾಪ, ಸೆಕೆ ಕಂಡು ಬರಲಿದ್ದು, ಐಎಂಡಿ 'ಉಷ್ಣ ಅಲೆ' (Heat Wave Alert) ಎಚ್ಚರಿಕೆ ನೀಡಿದೆ.
ಏಪ್ರಿಲ್ 14ರಂದು ಮಂಗಳವಾರ ಕಲಬುರಗಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ಮತ್ತು ಕೊಪ್ಪಳದಲ್ಲಿ 43 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಕಂಡು ಬಂದಿದೆ. ಕಲಬುರಗಿಯಲ್ಲಿ ಹಿಂದಿನ ದಿನ ಸೋಮವಾರ 41 ಡಿ.ಸೆ. ದಾಖಲಾಗಿತ್ತು. ಇತ್ತೀಚೆಗೆ ಮಳೆ ಸುರಿದ ಸಂದರ್ಭದಲ್ಲಿ 36-38ರ ಆಸುಪಾಸಿನಲ್ಲಿತ್ತು. ಇದೀಗ ತೀವ್ರ ಸ್ವರೂಪದಲ್ಲಿ ತಾಪಮಾನ ಏರಿಕೆ ಆಗಿದೆ. ಮುಂದಿನ ಏಪ್ರಿಲ್ 19ರವರೆಗೆ ರಾಜ್ಯದಲ್ಲಿ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ.'

12 ಜಿಲ್ಲೆಗಳಿಗೆ ಉಷ್ಣ ಅಲೆ ಎಚ್ಚರಿಕೆ
ಆಲಿಕಲ್ಲು ಮಳೆ ಆಗಿ ಬೇಸಿಗೆಯಲ್ಲೂ ತಂಪಾಗಿದ್ದ ವಾತಾವರಣ ಇದೀಗ ಕಾದು ಕೆಂಡದಂತಹ ಅನುಭವ ನೀಡುತ್ತಿದೆ. ಹೌದು, ಇಂದಿನಿಂದ ರಾಜ್ಯದ 12 ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಅತ್ಯಧಿಕ ಗರಿಷ್ಠ ತಾಪಮಾನ ದಾಖಲಾಗುವ ಮುನ್ಸೂಚನೆ ಇದೆ. ಹೀಗಾಗಿ ಕರಾವಳಿ ಮತ್ತು ಒಳನಾಡು ಜಿಲ್ಲೆಗಳಿಗೆ ಉಷ್ಣ ಅಲೆ ಎಚ್ಚರಿಕೆ ನೀಡಲಾಗಿದೆ.
ಕರಾವಳಿ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ, ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ವಿಜಯಪುರ, ಕಲ್ಯಾಣ ಕರ್ನಾಟಕ ಕಲಬುರಗಿ, ಕೊಪ್ಪಳ, ರಾಚಯೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವ್ಯಾಪಕ ಬಿಸಿಲು ಬೀಳಲಿದೆ. ಇದರಿಂದ ಜನರು ಮನೆಯಿಂದ ಹೊರ ಬರುವುದು ಕಷ್ಟವಾಗಲಿದೆ. ಎಲ್ಲೆಲ್ಲೂ ಬಿಸಿ ಗಾಳಿ ಬೀಸಲಿದೆ. ಬೆಳಗ್ಗೆ ಮತ್ತು ಸಂಜೆ ಮಾತ್ರವೇ ಹೊರಗಿನ ಕೆಲಸ ಕಾರ್ಯ ಮುಗಿಸುವುದು ಅನಿವಾರ್ಯವಾಗಲಿದೆ.
ಹೆಚ್ಚಿದ ಸೆಕೆ, ತಂಪು ಗಾಳಿ ಮಾಯ!
ಉಳಿದಂತೆ ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆ ನಿರೀಕ್ಷೆ ಇದೆ. ಆದರೆ ಒಣಹವೆಯ ವಾತಾವರಣವೇ ಮೇಲುಗೈ ಸಾಧಿಸಲಿದೆ. ಹವಾಮಾನ ವೈಪರೀತ್ಯಗಳ ತೀವ್ರ ತಗ್ಗಿದ ಪರಿಣಾಮ ಮಳೆ ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್ಲೆಡೆ ಬಿಸಿ ಗಾಳಿ, ಸೆಕೆಯ ಅನುಭವವಾಗುತ್ತಿದ್ದು, ಸಂಜೆ ನಂತರವು ತಂಪು ಗಾಳಿ ಬೀಸುವುದು ಕಡಿಮೆ ಆಗಿದೆ.
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಕೊಂಚ ಮಳೆ ಬರಬಹುದು. ಇದರ ಹೊರತು ರಾಜ್ಯದಲ್ಲಿ ಜೋರು ಮಳೆಯ ಮುನ್ಸೂಚನೆ ಯಾವ ಭಾಗಕ್ಕೂ ಇಲ್ಲವೆಂದು ಐಎಂಡಿ ಹವಾಮಾನ ವರದಿ ತಿಳಿಸಿದೆ.
ರಾಜ್ಯದ ಅಧಿಕ ತಾಪಮಾನದ ಜಿಲ್ಲೆಗಳು
ಕಲಬುರಗಿ 44.1, ಕೊಪ್ಪಳದಲ್ಲಿ 43, ವಿಜಯಪುರ ಮತ್ತು ರಾಯಚೂರು ತಲಾ 40, ಬಾಗಲಕೋಟೆ ಮತ್ತು ಗದಗ, ಬಳ್ಳಾರಿಯಲ್ಲಿ ತಲಾ 39, ತುಮಕೂರು, ಧಾರವಾಡ, ಚಿತ್ರದುರ್ಗದಲ್ಲಿ 38, ಬೆಂಗಳೂರು ಕೆಐಎಲ್ ವಿಮಾನ ನಿಲ್ದಾಣ, ಹಾವೇರಿಯಲ್ಲಿ ತಲಾ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇತರ ಜಿಲ್ಲೆಗಳಲ್ಲೂ ಗರಿಷ್ಠ ತಾಪಮಾನದಲ್ಲಿ ಕನಿಷ್ಠ 2 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆ ಆಗಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.












Click it and Unblock the Notifications