ಕೊರೊನಾ ಎವೈ 4.2; ಕರ್ನಾಟಕದ ಆರೋಗ್ಯ ಇಲಾಖೆ ಹೇಳುವುದೇನು?
ಬೆಂಗಳೂರು, ಅಕ್ಟೋಬರ್ 27; ಬ್ರಿಟನ್ ಮತ್ತು ರಷ್ಯಾದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕೊರೊನಾ ವೈರಸ್ನ 'ಎವೈ 4.2' ರೂಪಾಂತರಿ ತಳಿ ಕಾರಣವಾಗಿದೆ. ಕರ್ನಾಟಕದ ಆರೋಗ್ಯ ಇಲಾಖೆ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದೆ.
SARS-COV-2 ಜೀನೋಮಿಕ್ ಕಾನ್ಸೋರ್ಟಿಯಮ್ ಇದರ ವರದಿ/ ಮಾಹಿತಿಯ ಮೇರೆಗೆ ಇದುವರೆಗೆ ದೇಶಾದ್ಯಂತ ಒಟ್ಟು 17 SARS-COV-2 ಮಾದರಿ ಡೆಲ್ಟಾ ರೂಪಾಂತರಿಯ ಉಪವಂಶವಾದ ಎವೈ-4.2 ಎಂದು ದೃಢಪಟ್ಟಿದೆ ಎಂದು ಹೇಳಿದೆ.
ಇದುವರೆಗೂ ಆಂಧ್ರ ಪ್ರದೇಶದಲ್ಲಿ 7, ಕೇರಳ 4, ಕರ್ನಾಟಕ 2, ತೆಲಂಗಾಣ 2, ಜಮ್ಮು ಮತ್ತು ಕಾಶ್ಮೀರ 1, ಮಹಾರಾಷ್ಟ್ರ 1 ಸೇರಿದಂತೆ ದೇಶದಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಈ ಎವೈ-4.2 ಪ್ರಕರಣಗಳು ಯುನೈಟೆಡ್ ಕಿಂಗ್ಡಮ್ ನಲ್ಲಿ ಹೆಚ್ಚಾಗಿ ವರದಿಯಾಗುತ್ತಿದ್ದು, ಇದರ ಬಗ್ಗೆ ತನಿಖಾ ಕಾರ್ಯವೂ ಇನ್ನೂ ಪ್ರಗತಿಯಲ್ಲಿದೆ ಎಂದು ತಿಳಿಸಲಾಗಿದೆ.
ಕರ್ನಾಟಕದಲ್ಲಿ ಮೊದಲಿಗೆ ಎರಡು ಎವೈ-4.2 ಪ್ರಕರಣಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವರದಿಯಾಗಿವೆ. ಈ ಎರಡೂ ಪ್ರಕರಣಗಳು (23 ವರ್ಷ, 43 ವರ್ಷ) ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ವ್ಯಕ್ತಿಗಳ ಪರೀಕ್ಷೆ ನಡೆಸಲಾಗಿದೆ.
ಇವುಗಳಲ್ಲಿ ಒಂದು ಪ್ರಕರಣ ಮಾತ್ರ ಕೋವಿಡ್ ಸಕಾರಾತ್ಮಕವಾಗಿರುತ್ತದೆ. ಉಳಿದ ಎಲ್ಲಾ ಪ್ರಕರಣಗಳು ಕೋವಿಡ್ ನೆಗೆಟಿವ್ ಆಗಿವೆ. ಈ ಪ್ರಕರಣಗಳ ಈಗ ಸಂಪೂರ್ಣ ಗುಣಮುಖ ಹೊಂದಿರುತ್ತಾರೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಸದ್ಯ ಭಾರತದಲ್ಲಿ ಡೆಲ್ಟಾ ರೂಪಾಂತರಿಯೇ ಮುಖ್ಯವಾದ ಪ್ರಬಲ ರೂಪಾಂತರಿಯಾಗಿ ಪರಿಚಲನೆಯಲ್ಲಿರುತ್ತದೆ. ಈ ಎವೈ-4.2 ಎಂಬುದು ಕೋವಿಡ್ ಡೆಲ್ಟಾ ರೂಪಾಂತರಿಯ ಉಪವಂಶವಾಗಿರುತ್ತದೆ.
ಎವೈ-4.2 ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದು ಹೆಚ್ಚಿನ ರೀತಿಯಲ್ಲಿ ಪ್ರಸರಣವಾಗುವ ಸಾಧ್ಯತೆ ಇದ್ದರೂ ಮಾರಣಾಂತಿಕವಾಗಿರುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ ಎಂದು ತಿಳಿಸಲಾಗಿದೆ.
ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಚಾಲ್ತಿಯಲ್ಲಿರುವುದರಿಂದ ಮತ್ತು ಇದುವರೆಗೂ ಕೇವಲ ಎರಡು ಪ್ರಕರಣಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ವರದಿಯಾಗಿರುವುದರಿಂದ ಇದರ ಬಗ್ಗೆ ಭಯಪಡದೇ ಕೋವಿಡ್ ಸೂಕ್ತ ನಡಾವಳಿಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಕೋವಿಡ್ ನಿಯಂತ್ರಣ ಮಾಡಲು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಆರೋಗ್ಯ ಸಚಿವರ ಹೇಳಿಕೆ; ಭಾರತದಲ್ಲಿ ಹೊಸದಾಗಿ ಪತ್ತೆಯಾಗಿರುವ ಮಾರಕ ಎವೈ-4.2 ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿಕೆ ನೀಡಿದ್ದಾರೆ, "ಐಸಿಎಂಆರ್ ಮತ್ತು ಎನ್ಸಿಡಿಸಿ ತಂಡಗಳು ದೇಶದಲ್ಲಿ ಪತ್ತೆಯಾಗುವ ನೂತನ ತಳಿಗಳ ಬಗ್ಗೆ ಅಧ್ಯಯನ ಕೈಗೊಂಡು ವಿಶ್ಲೇಷಣೆ ಮಾಡುತ್ತವೆ. ಅದೇ ರೀತಿ ಎವೈ-4.2 ಬಗ್ಗೆಯೂ ತಜ್ಞರ ತಂಡ ತನಿಖೆ ನಡೆಸುತ್ತಿದೆ" ಎಂದು ಹೇಳಿದ್ದಾರೆ.
ಕರ್ನಾಟಕದ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಮಾತನಾಡಿ, "ಎವೈ-4.2 ರೂಪಾಂತರಿ ತಳಿಯ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಸದ್ಯಕ್ಕೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸುತ್ತಿಲ್ಲ. ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸೂಚನೆ ನೀಡಿದರೆ ಮಾತ್ರ ನಿರ್ಬಂಧಗಳನ್ನು ಹೇರಲಾಗುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸಂಜೆಯ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ 282 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 24 ಗಂಟೆಯಲ್ಲಿ 13 ಜನರು ಸಾವನ್ನಪ್ಪಿದ್ದು, 349 ಜನರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 8430 ಆಗಿದೆ. ರಾಜ್ಯದ ಒಟ್ಟು ಪ್ರಕರಣಗಳು 2986835. ಇದುವರೆಗೂ ಡಿಸ್ಚಾರ್ಜ್ 2940339 ಜನ. ಒಟ್ಟು ಮೃತಪಟ್ಟವರು 38037.












Click it and Unblock the Notifications