Breaking: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನ
ಬೆಂಗಳೂರು, ಆಗಸ್ಟ್ 03: ಕನ್ನಡ ನಾಡು-ನುಡಿ, ಸಾಹಿತ್ಯ ಪರಂಪರೆಯ ಪ್ರಾತಿನಿಧಿಕ ಸಂಸ್ಥೆಯಾದ 'ಕನ್ನಡ ಸಾಹಿತ್ಯ ಪರಿಷತ್ತಿ'ನ ಅಧ್ಯಕ್ಷ ಸ್ಥಾನಕ್ಕೆ ಇದೇ ಪ್ರಪ್ರಥಮ ಭಾರಿಗೆ ಸಚಿವ ದರ್ಜೆಯ ಸ್ಥಾನಮಾನ ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು 'ಕನ್ನಡ ಸಾಹಿತ್ಯ ಪರಿಷತ್ತಿ'ನ 26ನೇ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರಿಗೆ ರಾಜ್ಯ ಸಚಿವ ದರ್ಜೆಗೆ ಸಮಾನದ ಸ್ಥಾನಮಾನ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇನ್ನು ಮುಂದೆ ರಾಜ್ಯ ಸಂಪುಟದ ಸಚಿವರಂತೆ ಸರ್ಕಾರದ ಎಲ್ಲ ವಿಧದ ಗೌರವ, ಸ್ಥಾನಮಾನ, ಸೌಲಭ್ಯಗಳನ್ನು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರು ಪಡೆಯಲಿದ್ದಾರೆ.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆಯಾಗಿದ್ದು, ಅಂದಿನಿಂದ ಈ ವರೆಗೆ ಪರಿಷತ್ತು 25ಅಧ್ಯಕ್ಷರನ್ನು ಕಂಡಿದೆ. ಆದರೆ ಈ ವರೆಗೆ ಅಧ್ಯಕ್ಷ ಸ್ಥಾನಕ್ಕೆ ಸಂಪುಟ ದರ್ಜೆಯ ಸ್ಥಾನಮಾನ ದೊರೆತಿರಲಿಲ್ಲ. ಇದೀಗ ಸುಮಾರು 107ವರ್ಷ ಬಳಿಕ ಆ ಸಚಿವ ದರ್ಜೆ ಸ್ಥಾನಮಾನಗಳು ಲಭಿಸಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸಿದೆ.
20ನೇ ಶತಮಾನದ ಆರಂಭದಲ್ಲಿ ಆಗ ಮೈಸೂರು ಅರಸನಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದ್ದರು. ನಂತರ 1935ರಲ್ಲಿ 'ಕನ್ನಡ ಸಾಹಿತ್ಯ ಪರಿಷತ್ತು' ಎಂದು ನಾಮಕರಣ ಮಾಡಲಾಯಿತು. ಅಲ್ಲಿಂದ ಈವರೆಗೆ ಪರಿಷತ್ತು ಕನ್ನಡ ಭಾಷೆ ಕಟ್ಟಲು ಶ್ರಮಿಸುತ್ತಿದೆ. ಕನ್ನಡ ನಾಡು ನುಡಿಯನ್ನು ಸಂರಕ್ಷಿಸುತ್ತಿದೆ. ಬಹುಕಾಲದಿಂದಲೂ ಪುಸ್ತಕ ಪ್ರಕಟಣೆಯನ್ನೂ ಮಾಡುತ್ತಾ ಬಂದಿದೆ. ಕನ್ನಡದ ಸೊಗಸು ಸಾಹಿತ್ಯವನ್ನು ನಾಡಿನ ಮೂಲೆಗಳಲ್ಲೂ ಪಸರಿಸುವ ನಿಟ್ಟಿನಲ್ಲಿ ಪರಿಷತ್ತು ಕಾರ್ಯ ನಿರ್ವಹಿಸುತ್ತಿದೆ.