SIR: ಮತದಾರರ ಪಟ್ಟಿ ಪರಿಷ್ಕರಣೆ ಗೊಂದಲಕ್ಕೆ ಸರ್ಕಾರ ಹೊಣೆ ಅಲ್ಲ; ಬಿಎಲ್ಒಗಳದ್ದು ತಪ್ಪು: ಡಿಸಿಎಂ
ತುಮಕೂರು: ಬೆಂಗಳೂರು ಸೇರಿ ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿದ್ದು, ಇದರಲ್ಲಿ ಅಕ್ರಮ ನಡೆಯುತ್ತಿದೆ. ಈ ಪರಿಷ್ಕರಣೆಯಲ್ಲಿ ಗೊಂದಲ ಉಂಟಾಗಿದೆ ಎಂಬುದಕ್ಕೆ ವಿಡಿಯೋ, ಪೋಟೋ ಸಾಕ್ಷಿಗಳು ಸಿಕ್ಕಿವೆ. ರಾಜ್ಯ ಸರ್ಕಾರ ದುರುದ್ದೇಶದಿಂದಲೇ ಈ ರೀತಿ ಮಾಡುತ್ತಿದೆ ಎಂಬ ದೂರುಗಳು ಕೇಳಿ ಬಂದ ಬೆನ್ನಲ್ಲೆ ಈ ಕುರಿತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ. 'ಎಸ್ ಆರ್ ಐನಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ' ಎಂದಿರುವ ಅವರು ಪಂಚಾಯಿತಿ ಚುನಾವಣೆ ಕುರಿತು ಅಪ್ಡೇಟ್ ನೀಡಿದ್ದಾರೆ.
ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಡಿಸಿಎಂ ಮಾತನಾಡಿದರು. ಚುನಾವಣಾ ಆಯೋಗದ ಸೂಚನೆಯಂತೆ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. 'ಚುನಾವಣಾ ಅಧಿಕಾರಿಗಳೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಒಂದು ವೇಳೆ ಅಧಿಕಾರಿಗಳೇನಾದ್ರು ತಪ್ಪು ಮಾಡಿದರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ರಾಜ್ಯ ಸರ್ಕಾರ ಇದರಲ್ಲಿ ನೇರ ಭಾಗಿ ಅಲ್ಲ' ಎಂದು ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಹೇಳಿದರು.

ಬಿಎಲ್ಒ ಗಳದ್ದೇ ತಪ್ಪು ಎಂದ ಸರ್ಕಾರ
ಎಸ್ಐಆರ್ಗೆ ಸಂಬಂಧಿಸಿ ಸರ್ಕಾರವು ಯಾವುದೇ ಸೂಚನೆಗಳನ್ನು ಕೊಟ್ಟಿಲ್ಲ. ಚುನಾವಣಾ ಆಯೋಗ ಕೇಳಿದ ಸಿಬ್ಬಂದಿಯನ್ನು ಮಾತ್ರ ನಾವು ಕೊಟ್ಟಿದ್ದೇವೆ. ಮನೆ ಮನೆಗೆ ತೆರಳಿ ಎನ್ಯೂಮರೇಷನ್ ಫಾರಂ ವಿತರಿಸಿ, ಅದನ್ನು ಮರಳಿ ಸಂಗ್ರಹಿಸುವ ಜವಾಬ್ದಾರಿ ಬಿಎಲ್ಒಗಳದ್ದೇ ಆಗಿದೆ. ಒಂದು ವೇಳೆ ಬಿಎಲ್ಒಗಳು ಒಂದೇ ಸ್ಥಳದಲ್ಲಿ ಕುಳಿತು ಫಾರಂ ವಿತರಿಸುತ್ತಿದ್ದರೆ, ಅದು ಅವರ ತಪ್ಪು. ಅಂತಹ ಘಟನೆಗಳು ಕಂಡುಬಂದರೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಹೇಗೆ ನಡೆದಿದೆ ಎಂಬುದನ್ನು ಬಿಜೆಪಿಯವರು ಸೂಕ್ಷ್ಮವಾಗಿ ಪರಿಶೀಲಿಸಲಿ ಎಂದರು.
ಕೆಲವು ಎಂಎಲ್ಎಗಳು ಎನ್ಯೂಮರೇಷನ್ ಫಾರಂನಲ್ಲಿ ತಮ್ಮ ಭಾವಚಿತ್ರಗಳನ್ನು ಅಂಟಿಸಿಕೊಡುತ್ತಿರುವುದು ಕಂಡು ಬಂದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಇದೆಲ್ಲಾ ಬಿಎಲ್ಒಗಳು ನೋಡಿಕೊಳ್ಳಬೇಕು. ಎನ್ಯೂಮರೇಷನ್ ಫಾರಂ ಅನ್ನು ಸ್ವತಃ ಬಿಎಲ್ಒಗಳೇ ಮನೆ ಮನೆಗೆ ಹೋಗಿ ಕೊಡಬೇಕು. ಆ ಕೆಲಸವನ್ನು ಅವರು ಸರಿಯಾಗಿ ಮಾಡಿಲ್ಲ ಎಂದಾದರೇ ಎಲೆಕ್ಷನ್ ಕಮಿಷನ್ನವರು ನೋಡಿಕೊಳ್ಳುತ್ತಾರೆ. ಇದರಲ್ಲಿ ನಮ್ಮ ಸರ್ಕಾರದ ಪಾತ್ರ ಎಳ್ಳಷ್ಟು ಇಲ್ಲ ಎಂದು ಸ್ಪಷ್ಟಪಡಿಸಿದರು.
SIRಗೆ ಸಹಕರಿಸುವುದೇ ಸರ್ಕಾರದ ಜವಾಬ್ದಾರಿ
ರಾಜ್ಯ ಸರ್ಕಾರವನ್ನು ಕೇಳಿ ಅವರು ನಿಯಮಗಳನ್ನು ಮಾಡಿಲ್ಲ. ಒಂದು ತಿಂಗಳೊಳಗೆ ಎಸ್ಐಆರ್ ಪ್ರಕ್ರಿಯೆಯನ್ನು ಮುಗಿಸಬೇಕು ಎಂದು ಚುನಾವಣಾ ಆಯೋಗ ತೀರ್ಮಾನ ಮಾಡಿದೆ. ಅದರಂತೆ ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದಾರೆ. ಇದಕ್ಕೆ ಬೇಕಾದ ಅಗತ್ಯ ಸಹಕಾರವನ್ನು ಮಾತ್ರ ರಾಜ್ಯ ಸರ್ಕಾರ ನೀಡುವುದಷ್ಟೇ ನಮ್ಮ ಜವಾಬ್ದಾರಿ.
ಶೀಘ್ರವೇ ಪಂಚಾಯತಿ ಚುನಾವಣೆ ದಿನಾಂಕ
ರಾಜ್ಯದಲ್ಲಿ ಬಹುನಿರೀಕ್ಷೆಯ ಪಂಚಾಯಿತಿ ಚುನಾವಣೆಗಳನ್ನು ಆದಷ್ಟು ಶೀಘ್ರವೇ ನಡೆಸುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲಬುರಗಿಯಲ್ಲಿ ಪ್ರಸ್ತಾಪಿಸಿದ್ದಾರೆ. ಮುಂದಿನ ದಿನದಲ್ಲಿ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಡಿಸಿಂ ತಿಳಿಸಿದರು.
ತುಮಕೂರಿನ ಮಸೀದಿಗಳಲ್ಲಿ, ಶಾದಿ ಮಹಲ್ಗಳಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಬಿಎಲ್ಒಗಳ ಜವಾಬ್ದಾರಿ. ಚುನಾವಣಾ ಆಯೋಗ ಪರಿಶೀಲಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದರು.
ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ರದ್ದು ಅಸಾಧ್ಯ
ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆಯ ರದ್ದತಿಯ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಈ ಯೋಜನೆಗಾಗಿ ₹900 ಕೋಟಿಗೂ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. ಈಗಾಗಲೇ ಕಾಮಗಾರಿಗಾಗಿ ಒಂದಿಷ್ಟು ಹಣವನ್ನು ವ್ಯಯಿಸಲಾಗಿದೆ. ಅದನ್ನು ಈಗ ನಿಲ್ಲಿಸಬೇಕು ಎಂದು ಹೇಳಿದರೆ ಅದು ಅಸಾಧ್ಯ. ಅದನ್ನು ಮುಂದುವರೆಸಲಾಗುವುದು.
ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಹತ್ತಿಕ್ಕಿದೆ. ಪ್ರತಿ ಮನೆ ಮನೆಗೂ ಕಡ್ಡಾಯವಾಗಿ ತೆರಳಿ ಪರಿಶೀಲನೆ ಮಾಡುವುದನ್ನು ಬಿಟ್ಟ, ಬೂತ್ ಮಟ್ಟದ ಅಧಿಕಾರಿಗಳು (BLOs) ಮಸೀದಿಗಳು ಮತ್ತು ಮದ್ರಸಾಗಳ ಒಳಗೆ ಅಕ್ರಮವಾಗಿ ಮತದಾರರ ಎನ್ಯುಮರೇಷನ್ ಫಾರಂಗಳನ್ನು ನೀಡುವುದನ್ನು ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ವಿಪಕ್ಷ ನಾಯಕರು ದೆಹಲಿಯ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದು, ಇನ್ನು ಮುಂದಾದರೂ ನಿಯಮಗಳಂತೆ ಎಸ್ ಐಆರ್ ನಡೆಯುತ್ತಾ ನೋಡಬೇಕಿದೆ.














Click it and Unblock the Notifications