ಕರ್ನಾಟಕ: ಹಿಂದುತ್ವ, ಕನ್ನಡಪರ ಹೋರಾಟಗಾರರ ಮೇಲಿನ 33 ಕೇಸ್ ವಾಪಸ್ಗೆ ನಿರ್ಧಾರ
ಬೆಂಗಳೂರು ಸೆಪ್ಟಂಬರ್ 20: ಸಂಪುಟ ಉಪಸಮಿತಿಯ ಮಾಡಿರುವ ಶಿಫಾರಸುಗಳನ್ನು ಆಧರಿಸಿ ರಾಜ್ಯದಲ್ಲಿ 33 ಹಿಂದುತ್ವ ಹಾಗೂ ಕನ್ನಡಪರ ಹೋರಾಟಗಾರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ಹಿಂಪಡೆಯಲು ಸಚಿವ ಸಂಪುಟವು ಸೋಮವಾರ ನಿರ್ಧರಿಸಿದೆ.
ರಾಜ್ಯ ಸರ್ಕಾರದ ಈ ನಿರ್ಧಾರದಲ್ಲಿ ರೈತರು ಸೇರಿದಂತೆ ವಿದ್ಯಾರ್ಥಿಗಳ ವಿರುದ್ಧ ಮೊಕದ್ದಮೆ ಹಿಂಪಡೆಯಲಾಗುವುದು. ಮುಖ್ಯವಾಗಿ ಇದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತದರ ಅಂಗ ಸಂಸ್ಥೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬೆಂಗಳೂರಿನ ಅಧಿಕೃತ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಇದ್ದಾರೆ ಎಂದು ಸಂಪುಟದ ವರದಿ ತಿಳಿಸಿದೆ.
ಇದಕ್ಕೂ ಮೊದಲು ಸಚಿವ ಸಂಪುಟ ಸಭೆ ಪೌರ ಕಾರ್ಮಿಕರನ್ನು ಸೇವೆಯಲ್ಲಿ ಹಂತ ಹಂತವಾಗಿ ಕಾಯಂ ಮಾಡಲು ನಿರ್ಧರಿಸಿತು. ಅಲ್ಲದೇ ಅವರಲ್ಲಿ 11,133 ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ತೆಗೆದುಕೊಳ್ಳಲು ಸಹ ಅನುಮತಿಸಲಾಗಿದೆ. ಅವರಿಗೆ ವೇತನ ಶ್ರೇಣಿ 17,000 ರಿಂದ 28,980 ರೂ.ವರೆಗೆ ನೀಡಲು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮುಂದಿನ ಹಂತದಲ್ಲಿ 15ಸಾವಿರ ಪೌರ ಕಾರ್ಮಿಕರ ಪರಿಗಣನೆ
ಪೌರ ಕಾರ್ಮಿಕರು ಬಹುಕಾಲದಿಂದಲೂ ಕೆಲಸ ಖಾಯಂಮಾತಿಗೆ ಒತ್ತಾಯಿಸುತ್ತಲೆ ಬಂದಿದ್ದರು. ಇದೀಗ ಮೊದಲ ಹಂತದಲ್ಲಿ 11,133 ಮಂದಿಯನ್ನು ಪರಿಗಣಿಸಲಾಗುತ್ತಿದೆ. ಬಾಕಿ ಇರುವ 15,000 ಪೌರ ಕಾರ್ಮಿಕರನ್ನು ಮುಂದಿನ ಹಂತಗಳಲ್ಲಿ ಸರ್ಕಾರದಲ್ಲಿನ ಆರ್ಥಿಕ ಸಂಪನ್ಮೂಲಗಳ ಲಭ್ಯತೆ ಆಧಾರದಲ್ಲಿ ಪರಿಗಣಿಸುವ ಚಿಂತನೆ ಇದೆ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಸರ್ಕಾರ ಪರಿಗಣಿಸಿರುವ 11ಸಾವಿರಕ್ಕೂ ಅಧಿಕ ಪೌರ ಕಾರ್ಮಿಕರ ಪೈಕಿ 3,673 ಮಂದಿ ರಾಜಧಾನಿ ಬೆಂಗಳೂರಿನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ 5,333 ಮಂದಿ ಇನ್ನಿತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ, ಟೌನ್ ಮುನ್ಸಿಪಲ್ ಕೌನ್ಸಿಲ್ (ಟಿಎಂಸಿ) ಮತ್ತು ಪಟ್ಟಣ ಪಂಚಾಯಿತಿಗಳಡಿ ಮತ್ತು 1,927 ಮಂದಿ ಬೆಂಗಳೂರು ಹೊಲ ವಲಯದ ಇತರ ಹತ್ತು ನಗರ ಪಾಲಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.
ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ)ಗೆ ಸೇರಿದ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಗೃಹ ಉದ್ದೇಶಗಳಿಗಾಗಿ 75 ಯೂನಿಟ್ವರೆಗೆ ಉಚಿತ ವಿದ್ಯುತ್ ಒದಗಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ. ಇದರಿಂದ ಸಾಕಷ್ಟು ಬಡ ವರ್ಗದ ಕೆಳ ಸಮುದಾಯಗಳಿಗೆ ಅನುಕೂಲವಾಗಲಿದೆ ಎಂದರು.