ಡಿ.11 ರಿಂದ ಕರ್ನಾಟಕದಲ್ಲಿ ಹೊಸಬೆಳಕು ಮೂಡಲಿದೆ: ಡಿಕೆಶಿ
ಬೆಂಗಳೂರು, ಡಿ.04: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಎಲ್ ಇಡಿ ವಿತರಣೆ ಕಾರ್ಯಕ್ರಮಕ್ಕೆ ಹೊಸ ಹೆಸರಿಡಲಾಗಿದೆ. ಡಿಸೆಂಬರ್ 11 ರಿಂದ ರಾಜ್ಯದ ಎಲ್ಲ ಕುಟುಂಬಗಳಿಗೆ ಎಲ್ಇಡಿ ಬಲ್ಬ್ ವಿತರಿಸುವ ಕಾರ್ಯಕ್ರಮಕ್ಕೆ'ಹೊಸ ಬೆಳಕು' ಚಾಲನೆ ಪಡೆಯಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಗುರುವಾರದಂದು ವಿಧಾನಸೌಧದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಎಲ್ಇಡಿ ಬಲ್ಬ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗವು ಅನುಮತಿ ನೀಡಿದ್ದು, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಮೇಲೆ ಪ್ರಭಾವ ಬೀರುವಂಥ ಯಾವುದೇ ಘೋಷಣೆಗಳನ್ನು ಮಾಡುವಂತಿಲ್ಲ ಎಂದು ಶರತ್ತು ವಿಧಿಸಿದೆ ಎಂದರು.[ಎಲ್ಇಡಿ, ಸಿಎಫ್ಎಲ್, ಸಾಮಾನ್ಯ ಬಲ್ಬ್ ನಡುವಿನ ವ್ಯತ್ಯಾಸ]
ಈ ಯೋಜನೆಯಡಿಯಲ್ಲಿ ಪ್ರತಿ ಮನೆಗೆ 100 ರು ಪ್ರತಿ ಎಲ್ ಇಡಿ ಬಲ್ಬ್ ನಂತೆ ಐದರಿಂದ ಹತ್ತು ಬಲ್ಬ್ ನೀಡಲಾಗುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 400 ರು ನಷ್ಟಿದೆ ಎಂದರು. ಮೊದಲಿಗೆ ಮೈಸೂರಿನಲ್ಲಿ ಯೋಜನೆಗೆ ಚಾಲನೆ ದೊರೆಯಲಿದ್ದು, ಸುಮಾರು 6 ಕೋಟಿಗು ಅಧಿಕ 9 ವ್ಯಾಟ್ ಸಾಮರ್ಥ್ಯದ ಬಲ್ಬ್ ಗಳು ವಿತರಣೆಯಾಗಲಿವೆ.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ 20 ದಿನಗಳಿಂದ ಬೆಂಗಳೂರಿನಲ್ಲಿ ವಿದ್ಯುತ್ ಕಡಿತವಾಗಿಲ್ಲ. ರೈತರಿಗೆ 11 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಸಬ್ಸಿಡಿ ಇಲ್ಲದೆ ವಿದ್ಯುತ್ ಖರೀದಿ ಮಾಡಲು ರೈತರು ಮುಂದೆ ಬಂದರೆ ಅವರಿಗೆ 24 ಗಂಟೆ ವಿದ್ಯುತ್ ಪೂರೈಸಲು ಸರಕಾರ ಸಿದ್ಧವಿದೆ ಎಂದು ಶಿವಕುಮಾರ್ ತಿಳಿಸಿದರು.
ನಾಲ್ಕು ರಾಜ್ಯಗಳ ಸಭೆ: ಶಿವನಸಮುದ್ರದಲ್ಲಿ ಜಲ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರದ ಇಂಧನ ಕಾರ್ಯದರ್ಶಿ ಪೂಜಾರಿ ನೇತೃತ್ವದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ರಾಜ್ಯಗಳ ಸಭೆ ನಡೆಯಲಿದೆ ಎಂದು ಅವರು ಹೇಳಿದರು.
8,992 ಸಿಬ್ಬಂದಿ ನೇಮಕ: 8,080 ಲೈನ್ಮ್ಯಾನ್ಗಳು, 413 ಸಹಾಯಕ ಎಂಜಿನಿಯರ್ಗಳು, 480 ಜಂಟಿ ಎಂಜಿನಿಯರ್ಗಳು ಸೇರಿದಂತೆ ಒಟ್ಟು 8,992 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಕೆಪಿಟಿಸಿಎಲ್ ಸೇರಿದಂತೆ ವಿವಿಧ ಹೆಸ್ಕಾಂಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಂದಾಯ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿಕಲಚೇತನ ಉದ್ಯೋಗಿಗಳಿಗೆ ಮಾನವೀಯತೆ ಆಧಾರದಲ್ಲಿ ಸಂಬಳವನ್ನು ಹೆಚ್ಚು ಮಾಡಲಾಗಿದೆ. ಆದರೆ, ಸುಪ್ರೀಂಕೋರ್ಟ್ ಆದೇಶದನ್ವಯ ಅವರನ್ನು ಖಾಯಂ ಮಾಡಲು ಆಗುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.