ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರು ಘೋಷಣೆ
ಬೆಂಗಳೂರು, ನ. 15: ಮರಾಠ ಸಮುದಾಯದ ಬಹುಕಾಲದ ಬೇಡಿಕೆಯನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಈಡೇರಿಸಿದ್ದಾರೆ. ಮರಾಠ ಸಮುದಾಯ ಅಭಿವೃದ್ಧಿಗಾಗಿ ಮರಾಠ ಅಭಿವೃದ್ದಿ ಪ್ರಾಧಿಕಾರ ಸ್ಥಾಪಿಸಿ, ಅನುದಾನ ಘೋಷಿಸಿದ್ದಾರೆ.
ರಾಜ್ಯದಲ್ಲಿ ಮರಾಠ ಜನಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿ ಇತ್ಯಾದಿಗಾಗಿ ''ಮರಾಠ ಅಭಿವೃದ್ಧಿ ಪ್ರಾಧಿಕಾರ''ವನ್ನು ಸ್ಥಾಪಿಸುವುದು ಹಾಗೂ ಸದರಿ ಪ್ರಾಧಿಕಾರಕ್ಕೆ 50 ಕೋಟಿ ರು ಅನುದಾನವನ್ನು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಮೀಸಲಿಡಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಹಿಯಿರುವ ಆದೇಶ ಪ್ರತಿಯಲ್ಲಿ ಹೇಳಲಾಗಿದೆ.
ರಾಜ್ಯ ಕ್ಷತ್ರಿಯ ಮರಾಠ ಸಮಾಜವನ್ನು ಪ್ರವರ್ಗ 3 (ಬಿ) ಯಿಂದ 2(ಎ) ಪ್ರವರ್ಗಕ್ಕೆ ಸೇರ್ಪಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಸಕಲ ಮರಾಠ ಸಮಾಜ, ಏಕ್ ಮರಾಠ ಲಾಕ್ ಮರಾಠಾ ಕ್ರಾಂತಿ ಮೋರ್ಚಾ ಮುಂತಾದ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿವೆ.

ಪ್ರಮುಖ ಬೇಡಿಕೆಗಳು:
ಪ್ರವರ್ಗ 3 (ಬಿ) ಯಲ್ಲಿ ಅನೇಕ ಮುಂದುವರೆದ ಮತ್ತು ಬಲ ಸಮಾಜಗಳಿರುವುದರಿಂದ ಕ್ಷತ್ರಿಯ ಮರಾಠ ಸಮಾಜ ಬಾಂಧವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ.
ಮರಾಠ ಸಮಾಜವನ್ನು ಸದ್ಯ 3ಬಿಯಲ್ಲಿ ಸೇರಿಸಲಾಗಿದೆ. ಇದರಿಂದ ಸಮಾಜದ ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಶೇ.95ಕ್ಕಿಂತಲೂ ಹೆಚ್ಚು ಅಂಕ ಪಡೆದರೂ ಸೌಲಭ್ಯ ದೊರೆಯುತ್ತಿಲ್ಲ

ಉಪ ಪಂಗಡಗಳಾದ ಭಾವಸಾರ ಕ್ಷತ್ರಿಯ, ಸೂರ್ಯವಂಶಿ ಕ್ಷತ್ರಿಯ, ನಾಮದೇವ ಸಿಂಪಿ, ಸ್ವಕುಳಸಾಳಿ ಸಮಾಜ, ಸಹಸ್ರಾರ್ಜುನ ಆರ್ಯ ಕ್ಷತ್ರಿಯ, ಲಾಡ್ ಸಮಾರ ಈಗಾಗಲೇ 2ಎ ಪ್ರವರ್ಗದಲ್ಲಿವೆ. ಕರ್ನಾಟಕ ರಾಜ್ಯ ಸರ್ಕಾರದ ಹಿಂದುಳಿದ ಆಯೋಗದ ಶಿಫಾರಸ್ಸಿನಂತೆ ಕ್ಷತ್ರೀಯ ಸಮಾಜವನ್ನು 2ಎಗೆ ಸೇರಿಸಬೇಕೆಂದು ಆಗ್ರಹಿಸಿದರು.
Recommended Video
ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿರುವ ಷಹಾಜಿ ರಾಜೇ ಭೋಂಸ್ಲೆ ಅವರ ಸಮಾಧಿ ಸ್ಥಳವನ್ನು ಪುಣ್ಯ ಸ್ಥಳವೆಂದು ಘೋಷಿಸಿ ಸಮಗ್ರ ವಿಕಾಸಕ್ಕೆ ಪ್ರಾತಿನಿಧ್ಯ ಹಾಗೂ ಪ್ರೇಕ್ಷಣಿಯ ಸ್ಥಳದ ಮಾನ್ಯತೆ ನೀಡಬೇಕು. ಇಲ್ಲಿಯೇ ಸೈನಿಕ ಶಾಲೆಯನ್ನು ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ.












Click it and Unblock the Notifications