ರಾಮನಗರ: ಕಾಡುಹಂದಿ ಬೇಟೆಗೆ ರಾಜ್ಯ ಸರ್ಕಾರ ಸಮ್ಮತಿ
ರಾಮನಗರ, ನವೆಂಬರ್, 2: ಬೆಳೆಗಳನ್ನು ಹಾಳುಮಾಡುವ ಕಾಡುಹಂದಿಗಳನ್ನು ಬೇಟೆಯಾಡಲು ರೈತರಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದು, ಅರಣ್ಯ ಇಲಾಖೆಯೂ ಸಹ ಅನುಮತಿ ನೀಡಿದೆ.
ಕಾಡುಹಂದಿ ಉಪಟಳದಿಂದ ರಾಮನಗರದ ಹಲವು ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ ಎಂದು ಬೆಂಗಳೂರು, ಗ್ರಾಮಾಂತರ ಜಿಲ್ಲೆ ಸಂಸದ ಡಿ.ಕೆ.ಸುರೇಶ್ ಅವರು ರಾಜ್ಯಸರ್ಕಾರ ದೂರು ನೀಡಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕಾಡುಹಂದಿಗೆ ಬೇಟೆಗೆ ಅರಣ್ಯ ಇಲಾಖೆ ಸಮ್ಮತಿ ಸೂಚಿಸಿದೆ.
ಸರ್ಕಾರದ ಈ ನಿರ್ಧಾರವನ್ನು ವನ್ಯಜೀವಿ ಸಂರಕ್ಷರ ಕಾರ್ಯಕರ್ತರು ಖಂಡಿಸಿದ್ದು, ಸರ್ಕಾರದ ಈ ನಿರ್ಧಾರದಿಂದ ಪ್ರಾಣಿಗಳ ಮಾಂಸಕ್ಕಾಗಿ ಜನರಲ್ಲಿ ಬೇಟೆಯಾಡುವ ಪ್ರವೃತ್ತಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಡುಹಂದಿಗಳನ್ನು ಉಪದ್ರವ ನೀಡುವ ಪಟ್ಟಿಗೆ ಅರಣ್ಯ ಇಲಾಖೆ ಸೇರಿಸಿದ್ದು, ಅವು ಬೆಳೆಗಳನ್ನು ಹಾಳು ಮಾಡುತ್ತಿರುವಾಗ ಕೊಲ್ಲಬಹುದು ಎಂದು ಇಲಾಖೆ ತಿಳಿಸಿದೆ.
ಇದಷ್ಟೇ ಅಲ್ಲದೇ ಬೆಳೆಗಳನ್ನು ಹಾಳುಮಾಡುವ ಪ್ರಾಣಿಗಳನ್ನು, ಮುಖ್ಯವಾಗಿ ಕಾಡುಹಂದಿಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, ಕಲಂ 62 ರ ಪ್ರಕಾರ ಕೆಲವೊಂದು ಪ್ರದೇಶಗಳಲ್ಲಿ ಬೇಟೆಯಾಡಬಹುದಾಗಿದೆ.
ರಾಮನಗರ ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ಒತ್ತಡದಿಂದ ಇಲಾಖೆ ಕಾಡುಹಂದಿ ಬೇಟೆಗೆ ಅನುಮತಿ ಕಲ್ಪಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೃಷಿಗೆ ಅಡ್ಡಿಪಡಿಸುತ್ತಿರುವ ಕಾಡುಹಂದಿಗಳನ್ನು ಬೇಟೆಯಾಡುವುದಕ್ಕೂ ಮುಂಚೆ ಕಾಡುಹಂದಿಗಳಿಂದ ಜಿಲ್ಲೆಯಲ್ಲಿಯಾಗಿರುವ ಬೆಳೆ ನಷ್ಟದ ಕುರಿತು ಮತ್ತು ಕಾಡುಹಂದಿಗಳ ಸಂಖ್ಯೆ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು ಎಂದು ವನ್ಯಜೀವಿ ಸಂರಕ್ಷಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.