ಮಹಾರಾಷ್ಟ್ರವನ್ನು ಚೀನಾಗೆ ಹೋಲಿಸಿದ ಕುಮಾರಸ್ವಾಮಿ: ಕನ್ನಡಿಗರು ಸುಮ್ಮನಿರುವ ಕಾಲ ಮುಗಿದಿದೆ ಎಂದ ಮಾಜಿ ಸಿಎಂ
ಬೆಂಗಳೂರು, ಏಪ್ರಿಲ್ 05: ಮಹಾರಾಷ್ಟ್ರದಲ್ಲಿರುವ ಬಿಜೆಪಿ ಡಬಲ್ ಎಂಜಿನ್ ಸರಕಾರ ಪದೇಪದೆ ಕಾಲು ಕೆರೆದು ಕಿತಾಪತಿ ಮಾಡುತ್ತಿದೆ. ಚೀನಾ ಮನಸ್ಥಿತಿಯ ಆ ರಾಜ್ಯವು ಕರ್ನಾಟಕವನ್ನು ಶತ್ರು ದೇಶದಂತೆ ನೋಡುತ್ತಿದೆ. ಕೇಂದ್ರ ಬಿಜೆಪಿ ಸರಕಾರ ಇದೆಲ್ಲಾ ನೋಡಿಕೊಂಡು ಮೌನವಾಗಿದೆ, ಒಕ್ಕೂಟ ವ್ಯವಸ್ಥೆಯ ಅವಸಾನಕ್ಕೆ ಇದೇ ಕಾರಣವಾಗಬಹುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, 'ಒಂದಲ್ಲ ಎರಡಲ್ಲ, ಪ್ರತಿಯೊಂದು ವಿಷಯದಲ್ಲೂ ಮಹಾರಾಷ್ಟ್ರವು ಕರ್ನಾಟಕವನ್ನು ಕೆರಳಿಸುತ್ತದೆ. ರಾಜ್ಯದ ಗಡಿ ಒಳಗಿರುವ 865 ಗ್ರಾಮಗಳ ಜನರಿಗೆ ಆರೋಗ್ಯ ವಿಮೆ ಜಾರಿ ಮಾಡಿದ ಆ ರಾಜ್ಯ ಸರಕಾರದ ನಡೆ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ನೇರ, ಧೂರ್ತ ಪ್ರಯತ್ನ' ಎಂದು ಹರಿಹಾಯ್ದಿದ್ದಾರೆ.

'ಮಹಾರಾಷ್ಟ್ರವು ಒಕ್ಕೂಟ ವ್ಯವಸ್ಥೆಯ ಎಲ್ಲಾ ಎಲ್ಲೆಗಳನ್ನು ಮೀರಿ ಅಹಂಕಾರದಿಂದ ವರ್ತಿಸುತ್ತಿದೆ. ಬಿಜೆಪಿ ಸರಕಾರ ' ಶಿಂಧೆ ಸೂತ್ರದ ಗೊಂಬೆ ' ಯಾಗಿ ಅಂತಹ ರಾಜಕಾರಣಕ್ಕೆ ಕರ್ನಾಟಕವನ್ನು ಬಲಿ ಕೊಡಲು ಹೊರಟಿದೆಯಾ? ಎನ್ನುವ ಅನುಮಾನ ನನ್ನದು. ಇಲ್ಲವಾದರೆ, ಮಹಾರಾಷ್ಟ್ರ ಈ ಪರಿಯ ಉದ್ಧಟತನ ತೋರುತ್ತಿದ್ದರೂ ಮೋದಿ ಸರಕಾರದ ಮೌನವೇಕೆ?' ಎಂದು ಪ್ರಶ್ನಿಸಿದ್ದಾರೆ.
'ಕರ್ನಾಟಕದಲ್ಲಿ ಇಡೀ ಭಾರತವೇ ಅಡಗಿದೆ. ಕಾಶ್ಮೀರದಿಂದ ಕನ್ಯಾಕಮಾರಿಯವರೆಗೆ, ಗುಜರಾತಿನಿಂದ ಒಡಿಶಾವರೆಗೆ ಎಲ್ಲ ಕಡೆಯಿಂದಲೂ ಅನ್ನ ಅರಸಿಕೊಂಡು ಬಂದವರಿಗೆ ಆಶ್ರಯ ನೀಡಿದೆ. ಆ ಅನ್ನಕ್ಕೆ ಮಣ್ಣು ಹುಯ್ಯುವ ಹೀನ ಕೆಲಸವನ್ನು ಮಹಾರಾಷ್ಟ್ರ ಎಗ್ಗಿಲ್ಲದೆ ಮಾಡುತ್ತಿದೆ. ಕನ್ನಡಿಗರು ಸುಮ್ಮನಿರುವ ಕಾಲ ಮುಗಿದಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಭಾರತ ಸ್ವತಂತ್ರ್ಯಗೊಂಡಾಗ ಎಲ್ಲರಿಗಿಂತ ಮೊದಲೇ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟವರು ನಾವು. ನಮ್ಮ ಉದಾರತೆಯೇ ನಮಗೆ ಇಂದು ಮುಳುವಾಗಿದೆಯಾ? ನೆಲ, ಜಲ, ಭಾಷೆ, ಅನುದಾನ ಸೇರಿ ಪ್ರತಿ ವಿಷಯದಲ್ಲೂ ಕನ್ನಡಿಗರು ಮಲತಾಯಿ ಮಕ್ಕಳಾಗಿದ್ದಾರೆ!! ಇನ್ನೆಷ್ಟು ದಿನ ಈ ಅನ್ಯಾಯ?' ಎಂದು ಕೇಳಿದ್ದಾರೆ.
ಜೆಡಿಎಸ್ ಸರಣಿ ಟ್ವೀಟ್
ಮಹಾರಾಷ್ಟ್ರದ ಖ್ಯಾತೆ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಜೆಡಿಎಸ್, 'ಕರ್ನಾಟಕ ಗಡಿಯೊಳಗಿರುವ 865 ಹಳ್ಳಿಗಳಿಗೂ ಅನ್ವಯವಾಗುವಂತೆ ಜನಾರೋಗ್ಯ ಯೋಜನೆ ಜಾರಿಮಾಡಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದೆ.ದುರಹಂಕಾರದ ಮದ ಏರಿದರೆ, ವಿವೇಚನೆ ಸತ್ತುಹೋಗುತ್ತದೆ ಎಂಬುದಕ್ಕೆ ಅವರ ಈ ನಡೆಯೇ ಸಾಕ್ಷಿ.ಕನ್ನಡಿಗರು ಮತ್ತು ಇಲ್ಲಿನ ಕಳಪೆ ಬಿಜೆಪಿ ಸರ್ಕಾರದ ಆಕ್ಷೇಪವನ್ನು ಸಾರಾಸಗಟಾಗಿ ಕಡೆಗಣಿಸಲಾಗಿದೆ' ಎಂದು ಹೇಳಿದೆ.

'ಸ್ವತಃ ಬಿಜೆಪಿ ಪಕ್ಷದವರೇ ಆದ ದೇಶದ ಗೃಹ ಸಚಿವ ಅಮಿತ್ ಶಾ 'ಗಡಿ ತಂಟೆ ತೀರ್ಪು ಬರುವವರೆಗೂ ಹಸ್ತಕ್ಷೇಪ ಸಲ್ಲ' ಎಂದು ಸಂಧಾನ ಸಭೆಯಲ್ಲಿ ಹೇಳಿದ್ದರು. ಅವರ ಮಾತಿಗೂ ಕವಡೆಕಾಸಿನ ಕಿಮ್ಮತ್ತು ಕೊಡದ ಮಹಾರಾಷ್ಟ್ರದ ಸರ್ಕಾರ ಎಲ್ಲ ಸೂಚನೆಗಳನ್ನು ಗಾಳಿಗೆ ತೂರಿದೆ. ಇದು ಒಕ್ಕೂಟ ವ್ಯವಸ್ಥೆ ವಿರೋಧಿತನದ ಪರಮಾವಧಿ' ಎಂದೂ ಹೇಳಿದೆ.
'ಇಡೀ ಆಡಳಿತವನ್ನೇ ನಿಸ್ತೇಜ ಮಾಡಿರುವ ಬಿಜೆಪಿ ಸರ್ಕಾರ ಈಗಲೂ ಕಣ್ಣುಮುಚ್ಚಿ ಕುಳಿತರೆ ಕನ್ನಡಿಗರ ಅಸ್ಮಿತೆ ಹಾಳುಗೆಡವಿದಂತೆ. ಸಿಎಂ ಬಸವರಾಜ ಬೊಮ್ಮಾಯಿಯವರೆ, ಬೆನ್ನು ಮೂಳೆ ಸದೃಢವಾಗಿದ್ದರೆ ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳಿ. ನಿಮ್ಮದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ. ಸ್ವಾಭಿಮಾನ ಇಲ್ಲದ ಅಧಿಕಾರ ತೃಣಕ್ಕೆ ಸಮ' ಎಂದು ಜೆಡಿಎಸ್ ಟೀಕಿಸಿದೆ.
ಮಹಾರಾಷ್ಟ್ರ ವಿಚಾರವಾಗಿ ಡಿಕೆಶಿ ಟ್ವೀಟ್
'ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಮಹಾರಾಷ್ಟ್ರ ಸರ್ಕಾರವೋ ಅಥವಾ ನರಸತ್ತ BJP ಸರ್ಕಾರವೋ? ಕೇಂದ್ರ ಗೃಹ ಸಚಿವರ ಮಧ್ಯಸ್ಥಿಕೆ, ಕನ್ನಡಿಗರ ಆಕ್ರೋಶ ಬದಿಗೊತ್ತಿ ರಾಜ್ಯದ 865 ಹಳ್ಳಿಗಳಿಗೆ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಿರುವುದು ಉದ್ಧಟತನದ ಪರಮಾವಧಿ. ಈಗ ಮುಖ್ಯಮಂತ್ರಿಗಳು ತಮ್ಮ ಧಮ್ಮು ತಾಕತ್ತು ತೋರಿಸಲಿ ಇಲ್ಲ ಮನೆ ಕಡೆ ನಡೆಯಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
'ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಂವಿಧಾನ ಮೀರಿ ಯೋಜನೆ ಜಾರಿಗೊಳಿಸುವ ಅಧಿಕಾರ ಕೊಟ್ಟವರು ಯಾರು? ಮಹಾರಾಷ್ಟ್ರ ಸರ್ಕಾರಕ್ಕೆ ನೀತಿ ಸಂಹಿತೆ ಎನ್ನುವುದು ಕಾಲ್ಕಸವಾಯಿತೇ? ಬಿಜೆಪಿ ಸರ್ಕಾರ ಕಡೆ ದಿನಗಳು ಹತ್ತಿರ ಬಂದಿವೆ. ಇನ್ಮುಂದೆ ಆಡಳಿತ ನಿಮ್ಮ ಸರ್ಕಾರದ್ದು, ಅಂದ್ರೆ ಕಾಂಗ್ರೆಸ್ ಸರ್ಕಾರದ್ದು' ಎಂದು ತಿಳಿಸಿದ್ದಾರೆ.












Click it and Unblock the Notifications