ಕರ್ನಾಟಕಕ್ಕೆ ಶೇ.26ರಷ್ಟು ಮಳೆ ಕೊರತೆ, 196 ತಾಲೂಕುಗಳಲ್ಲಿ ಬರಗಾಲ: ಸರ್ಕಾರ
ಬೆಂಗಳೂರು, ಸೆಪ್ಟಂಬರ್ 05: ಕರ್ನಾಟಕ ರಾಜ್ಯದಲ್ಲಿ ಸೋಮವಾರ ಸೆಪ್ಟಂಬರ್ 04ರವರೆಗೆ ಮಳೆ ಕೊರೆತೆಯಿಂದಾಗಿ ಶುಷ್ಕ ವಾತಾವರಣ ಹೆಚ್ಚಾಗಿರುವುದು ಗೊತ್ತಾಗಿದೆ. ಈವರೆಗೆ ರಾಜ್ಯ 26% ನಷ್ಟು ಮಳೆಯ ಕೊರತೆಯನ್ನು ಕಂಡಿದೆ. ಹೀಗಾಗಿ ಬರಪೀಡಿತ ತಾಲೂಕುಗಳ ಸಂಖ್ಯೆಯಲ್ಲಿ ಸಹ ಏರಿಕೆ ಆಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಆಗಸ್ಟ್ ತಿಂಗಳಿನಿಂದ ರಾಜ್ಯದ ಹೆಚ್ಚಿನ ಪ್ರದೇಶಗಳಲ್ಲಿ ಒಣ ಹವೆ ಮುಂದುವರಿದಿದೆ. ದಕ್ಷಿಣ ಒಳನಾಡು ಜಿಲ್ಲೆಗಳು ಈ ಭಾರಿ ಮಳೆಗಾಲದಲ್ಲಿ ಅಧಿಕ ತಾಪಮಾನದ ದಿನಗಳನ್ನು ಕಂಡಿವೆ. ಇದೆಲ್ಲ ನೋಡಿದರೆ ರಾಜ್ಯದಲ್ಲಿ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 196 ಕ್ಕೆ ಏರುವ ಸಾಧ್ಯತೆ ಇದೆ.

ಮಳೆ ಕೊರತೆ, ಬರ ತಾಲೂಕುಗಳ ಘೊಷಣೆ, ಸಮೀಕ್ಷೆ ಫಲಿತಾಂಶಗಳ ಕುರಿತು ಚರ್ಚೆಗಾಗಿ ಸೋಮವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಪ್ರಾಕೃತಿಕ ವಿಕೋಪಗಳ ಸಂಪುಟ ಉಪಸಮಿತಿ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಅವರು, ಆಗಸ್ಟ್ 19 ರಂದು ರಾಜ್ಯದ 237 ತಾಲ್ಲೂಕುಗಳ ಪೈಕಿ 113 ತಾಲ್ಲೂಕುಗಳಲ್ಲಿ ಜಂಟಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಸಮೀಕ್ಷೆಯ ಫಲಿತಾಂಶ, ಅಧಿಕೃತ ಮಾಹಿತಿಗಳ ಆಧಾರದ ಮೇಲೆ ಕೇವಲ 62 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಯಿತು.

3-4 ದಿನಗಳಲ್ಲಿ ಬರಗಾಲ ಸಮೀಕ್ಷೆ ಪೂರ್ಣ
ಅಲ್ಲಿಂದ (ಆಗಸ್ಟ್ 19) ಸೋಮವಾರ ಸೆಪ್ಟೆಂಬರ್ 4ರವರೆಗೆ ಮಳೆ ಸುರಿಯುವಿಕೆಯಲ್ಲಿ ಏರಿಕೆ ಆಗದೇ ಪರಿಸ್ಥಿತಿ ಹದಗೆಟ್ಟ ಕಾರಣ ಹೆಚ್ಚುವರಿ 134 ತಾಲೂಕುಗಳಲ್ಲಿ ಹೆಚ್ಚಿನ ಬೆಳೆ ಹಾನಿ ಆಗಿದೆ ಎಂದು ವರದಿ ಆಗಿದೆ ಎಂದು ಅವರು ತಿಳಿಸಿದರು.
ಸದ್ಯ ಸಮೀಕ್ಷೆಗಳು ಮುಂದುವರಿದಿದ್ದು, ಇನ್ನೂ 3-4 ದಿನಗಳಲ್ಲಿ ಸಮೀಕ್ಷೆ ಮುಗಿಯಲಿದೆ.
ಈ ವರೆಗಿನ ಸಮೀಕ್ಷೆ ಪ್ರಕಾರ ನೋಡುವುದಾದರೆ, ತಾಲೂಕುಗಳಲ್ಲಿ ನಡೆಸಲಾದ ಸರ್ವೇ ಫಲಿತಾಂಶಗಳು ರಾಜ್ಯದಲ್ಲಿನ 196 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿವೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತಿವೆ. ಈ ಕಾರಣದಿಂದಲೇ ಬರಪೀಡಿತ ತಾಲೂಕುಗಳ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.
ಬರ ಪರಿಹಾರ ಮಾರ್ಗಸೂಚಿಗಳಿಗೆ ತಿದ್ದುಪಡಿ ಅಗತ್ಯ
ಸಮೀಕ್ಷೆ ಬಳಿಕವೇ ಸಂಪುಟ ಸಭೆಯಲ್ಲಿ ಚರ್ಚಿಸಿ ಇಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು. ಅಲ್ಲದೇ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇನ್ನೂ ಬರ ಘೋಷಣೆಗೆ ಕೇಂದ್ರದ ಮಾರ್ಗಸೂಚಿಗಳು ರೈತರ ಹಿತಕ್ಕೆ ಪೂರಕವಾಗಿಲ್ಲ ಎಂದು ಅವರು ಆರೋಪಿಸಿದರು.
ಅನಿಯಮಿತ ಹವಾಮಾನ ಸೃಷ್ಟಿ ಹಿನ್ನೆಲೆಯಲ್ಲಿ ಅದಕ್ಕೆ ಅನುಗುಣವಾಗಿ ಪರಿಹಾರ ಈ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು.
ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ
ಬರ ಪರಿಹಾರಿ ಮಾರ್ಗಸೂಚಿಗಳಿಗೆ ತಿದ್ದುಪಡಿಗೆ ಕೋರಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದು, ಸದ್ಯದವರೆಗೆ ಯಾವುದೇ ಉತ್ತರ ಬಂದಿಲ್ಲ. ಬರಪೀಡಿತ ತಾಲ್ಲೂಕುಗಳನ್ನು ಅಧಿಕೃತವಾಗಿ ಗುರುತಿಸಿದ ಬಳಿಕ ರಾಜ್ಯ ಸರ್ಕಾರವು ಪ್ರತಿ ತಾಲ್ಲೂಕಿನಲ್ಲಿ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಿದೆ. ನಂತರ ಪರಿಹಾರ ಕಾರ್ಯ ಕೈಗೊಳ್ಳುತ್ತದೆ.
ಬರಗಾಲ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಈ ತಾಲೂಕುಗಳ ಜನರಿಗೆ 150 ದಿನಗಳ ಉದ್ಯೋಗ ನೀಡಲು ನಿರ್ಧರಿಸಿದೆ ಎಂದು ಅವರು ವಿವರಿಸಿದರು.












Click it and Unblock the Notifications