ಲಿಂಗಾಯತ ವಿರೋಧಿ ಹೇಳಿಕೆ: ಸಿಟಿ ರವಿ ಬೆಂಬಲಕ್ಕೆ ಬಂದ ಬಿಎಲ್ ಸಂತೋಷ್- ಹುಟ್ಟಿಕೊಂಡಿತು 'RSS Vs Lingayat' ಚರ್ಚೆ
ಬಿಜೆಪಿ ಶಾಸಕ ಸಿಟಿ ರವಿ ಬೆನ್ನಿಗೆ ನಿಂತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು, ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಬೆಂಗಳೂರು, ಮಾರ್ಚ್ 17: ಲಿಂಗಾಯತರ ವಿರುದ್ಧವಾಗಿ ಬಿಜೆಪಿ (BJP) ಶಾಸಕ ಸಿಟಿ ರವಿ ( CT Ravi ) ಮಾತನಾಡಿದ್ದಾರೆ ಎಂಬ ವರದಿ ರಾಜ್ಯ ರಾಜಕಾರಣದಲ್ಲಿ ಕಲ್ಲೋಲವನ್ನೇ ಸೃಷ್ಟಿಸಿದೆ. ಕರ್ನಾಟಕ ಚುನಾವಣೆಗೆ (Karnataka Elections 2023) ಇನ್ನೆರಡು ತಿಂಗಳು ಬಾಕಿ ಇರುವಾಗ ಸಿಟಿ ರವಿ ನೀಡಿದ್ದಾರೆ ಎನ್ನಲಾದ ಹೇಳಿಕೆಯು ಲಿಂಗಾಯತ ಸಮುದಾಯದ ಆಕ್ರೋಶಕ್ಕೂ ಕಾರಣವಾಗಿದೆ. ಸಿಟಿ ರವಿ ಕ್ಷಮೆಯಾಚಿಸದೇ ಹೋದರೆ, ಅವರು ಪ್ರಚಾರಕ್ಕೆ ತೆರಳುವ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಲಿಂಗಾಯತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಬಿಜೆಪಿಯಿಂದ ಲಿಂಗಾಯತ ಸಮುದಾಯ ದೂರು ಸರಿಯುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ನಾಯಕರಿಗೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಹಾಗೂ ಅವರ ತಂಡದವರೂ ಬಿಜೆಪಿ ಕೇಂದ್ರ ನಾಯಕರ ಮಾತುಗಳನ್ನು ಕೇಳಲೇಬೇಕು ಎಂದು ಸಿಟಿ ರವಿ ಹೇಳಿದ್ದಾರೆಂದು ವರದಿಯಾಗಿದೆ.

ಇದಕ್ಕೆ ಸ್ಪಷ್ಟಣೆ ನೀಡಿರುವ ಸಿಟಿ ರವಿ, ಇದೆಲ್ಲವೂ ನಕಲಿ ವರದಿಯಾಗಿದೆ. ನಾನು ಈ ಹೇಳಿಕೆಯನ್ನು ನೀಡಿಯೇ ಇಲ್ಲ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸಿಟಿ ರವಿ ಅವರ ಹೇಳಿಕೆಯ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಕೇಳಿದಾಗ, ರವಿ ಅವರನ್ನು ಕರೆದು ಮಾತನಾಡುತ್ತೇನೆ. ಸಮುದಾಯವೊಂದರ ಬಗ್ಗೆ ಹೀಗೆ ಮಾತನಾಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ. ಯಡಿಯೂರಪ್ಪನವರನ್ನು ಬಿಟ್ಟರೆ, ಬಿಜೆಪಿಯ ಯಾವುದೇ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ಸಿಟಿ ರವಿ ಬೆನ್ನಿಗೆ ನಿಂತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು, ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಪ್ರತಿನಿತ್ಯ ಫೋಟೋಶಾಪ್ ಸುದ್ದಿಗಳನ್ನು ಹರಡುವ ಟ್ರೋಲ್ ಆರ್ಮಿ ಮತ್ತು ಫೇಕ್ ನ್ಯೂಸ್ ಫ್ಯಾಕ್ಟರಿಯಾಗಿ ಬದಲಾಗಿದೆ. ನಿನ್ನೆ ಆರ್ಎಸ್ಎಸ್ಗೆ ಸಂಬಂಧಿಸಿದ ಮತ್ತು ಇಂದು ಸಿ.ಟಿ.ರವಿ ಸಂಬಂಧಿಸಿದ ಸುಳ್ಳು ಸುದ್ದಿಗಳನ್ನು ಕಾಂಗ್ರೆಸ್ ಹರಡಿದೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಪ್ರಬುದ್ಧವಾಗಿದೆ ಎಂಬುದನ್ನು ಕಾಂಗ್ರೆಸ್ಸಿಗರು ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ. ಸಿಟಿ ರವಿ ಪರ ಬಿಎಲ್ ಸಂತೋಷ್ ಮಾತನಾಡಿರುವುದು 'RSS Vs Lingayat' ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ.

ಮಂಗಳವಾರ ಮಾತನಾಡಿದ್ದ ಸಿ ಟಿ ರವಿ, 'ಯಡಿಯೂರಪ್ಪ ಅವರು ಚುನಾವಣಾ ಸ್ಪರ್ಧೆಯಿಂದ ಹೊರಗುಳಿದ ನಂತರ ಶಿಕಾರಿಪುರ ಸ್ಥಾನವು ತೆರವಾಗಿದೆ. ಅಲ್ಲಿ ವಿಜಯೇಂದ್ರ ಸ್ಪರ್ಧಿಸುವ ನಿರ್ಧಾರ ಯಾರೊಬ್ಬರ ಅಡುಗೆ ಮನೆಯಲ್ಲಿ ನಿರ್ಧಾರವಾಗುವುದಿಲ್ಲ' ಎಂದು ತಿಳಿಸಿದ್ದಾರೆ.
'ಒಂದು ವಿಷಯ ನೆನಪಿಟ್ಟುಕೊಳ್ಳಿ. ಅಭ್ಯರ್ಥಿಗಳ ನಿರ್ಧಾರ ಯಾರ ಅಡುಗೆಮನೆಯಲ್ಲಿಯೂ ಆಗುವುದಿಲ್ಲ. ಯಾರೋ ಒಬ್ಬರ ಮಗ ಎಂಬ ಕಾರಣಕ್ಕೆ ಯಾರಿಗೂ ಟಿಕೆಟ್ ಸಿಗುವುದಿಲ್ಲ. ಆಕಾಂಕ್ಷಿಗಳ ಮನೆಯಲ್ಲಿಯೂ ಟಿಕೆಟ್ ನಿರ್ಧಾರ ಆಗುವುದಿಲ್ಲ. ವಿಜಯೇಂದ್ರ ಅವರ ಆಕಾಂಕ್ಷೆ ಬಗ್ಗೆ ಸಂಸದೀಯ ಮಂಡಳಿ ನಿರ್ಧಾರ ಕೈಗೊಳ್ಳಲಿದೆ. ಯಾವುದೇ ಅಡುಗೆಮನೆಯಲ್ಲಿ ಇದನ್ನು ನಿರ್ಧರಿಸಲಾಗುವುದಿಲ್ಲ. ಸಮೀಕ್ಷೆಗಳನ್ನು ವಿಶ್ಲೇಷಿಸಿದ ನಂತರ ಅಭ್ಯರ್ಥಿಯ ಗೆಲುವಿನ ಆಧಾರದ ಮೇಲೆ ಪಕ್ಷವು ಇದನ್ನು ನಿರ್ಧರಿಸುತ್ತದೆ. ಆ ಸಮೀಕ್ಷೆಗಳು ನಾಯಕರ ಅಡುಗೆ ಮನೆಯಲ್ಲಿ ನಡೆಯುವುದಿಲ್ಲ' ಎಂದು ಸಿಟಿ ರವಿ ಹೇಳಿದ್ದಾರೆ.
ಚುನಾವಣಾ ರಾಜಕೀಯದಿಂದ ಹೊರಬಂದ ನಂತರವೂ, ಕಿರಿಯ ಮಗನ ಮೂಲಕ ಪಕ್ಷದಲ್ಲಿ ಪ್ರಾಬಲ್ಯ ಸಾಧಿಸಲು ಯಡಿಯೂರಪ್ಪನವರು ಪ್ರಯತ್ನಗಳನ್ನು ನಡೆಸಿದ್ದಾರೆ. ಇದರ ಬಗ್ಗೆ ರಾಜ್ಯ ಬಿಜೆಪಿಯಲ್ಲಿನ ಅಸಮಾಧಾನದ ಸೂಚನೆಯಾಗಿ ರವಿ ಅವರ ಹೇಳಿಕೆಯನ್ನು ಕಾಣಬಹುದು. ವಿಜಯೇಂದ್ರ ಅವರ ಪಾತ್ರವನ್ನು ರಾಜ್ಯ ವಸತಿ ಸಚಿವ ವಿ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಕೂಡ ಪ್ರಶ್ನಿಸಿದ್ದಾರೆ.
'ನಮ್ಮ ಪಕ್ಷದಲ್ಲಿ ತನ್ನ ಮಗನಿಗಾಗಿ ಸ್ವಂತ ಸ್ಥಾನವನ್ನು ತ್ಯಾಗ ಮಾಡಿದ ದೊಡ್ಡ ನಾಯಕನಿದ್ದಾನೆ. ಅವರ ಮಗ ರಾಜ್ಯದ ಮುಂದಿನ ದೊಡ್ಡ ನಾಯಕ ಎಂದು ಹೇಳಿಕೊಂಡು ಕರ್ನಾಟಕ ಸುತ್ತುತ್ತಿದ್ದಾನೆ. ನಾನು ಅವನಿಗೆ ಕರೆ ಮಾಡಿದೆ. ಅವನು ನನ್ನನ್ನು ನಿಂದಿಸಲು ಪ್ರಾರಂಭಿಸಿದ. ನಾನು ನಿನ್ನ ರೀತಿಯಲ್ಲಿಯೂ ಮಾತನಾಡಬಲ್ಲೆ ಎಂದು ಹೇಳಿದೆ' ಎಂಬುದಾಗಿ ಅರುಣ್ ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.












Click it and Unblock the Notifications