ಪ್ರತಿ ಗ್ರಾಮ ಪಂಚಾಯಿತಿಗೆ ₹1 ಕೋಟಿ, ಕಲ್ಯಾಣ ಕರ್ನಾಟಕಕ್ಕೆ ₹5,000 ಕೋಟಿ: ರಾಹುಲ್ ಗಾಂಧಿಯಿಂದ ಮಹತ್ವದ ಘೋಷಣೆ
ಜೇವರ್ಗಿ, ಏಪ್ರಿಲ್ 28: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಗ್ರಾಮ ಪಂಚಾಯಿತಿಗೆ 1 ಕೋಟಿ ರೂಪಾಯಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 5,000 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಭರವಸೆ ನೀಡಿದರು.
ಮಳೆಯ ನಡುವೆಯೇ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ರಾಹುಲ್ ಮಾತನಾಡಿದರು. ಅಲ್ಲಿ ಅವರು 50,000 ಸರ್ಕಾರಿ ಉದ್ಯೋಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿಯೂ ಅವರು ಹೇಳಿದರು.

'ನಾವು ಈ ಪ್ರದೇಶಕ್ಕೆ 5,000 ಕೋಟಿ ರೂ ನೀಡಲಿದ್ದೇವೆ. ಆ ಮೂಲಕ ಕಲ್ಯಾಣ ಕರ್ನಾಟಕದ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಕೋಟಿ ರೂಪಾಯಿ ಸಿಗಲಿದೆ' ಎಂದು ಕಲಬುರಗಿ ಜಿಲ್ಲೆಯಲ್ಲಿ ಜೇವರ್ಗಿಯಲ್ಲಿ ರಾಹುಲ್ ಗಾಂಧಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶವು ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರಗಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಒಳಗೊಂಡಿದೆ.

ಆಡಳಿತಾರೂಢ ಬಿಜೆಪಿಗೆ 'ಈ ನಂಬರ್ ಇಷ್ಟವಾದ್ದರಿಂದ' ಕೇವಲ 40 ಸೀಟುಗಳು ಬರುತ್ತವೆ ಎಂಬ 'ಭವಿಷ್ಯ'ವನ್ನೂ ಅವರು ನುಡಿದರು. ಕರ್ನಾಟಕದಲ್ಲಿ ಬಿಜೆಪಿ ಸಚಿವರು ಹಾಗೂ ಶಾಸಕರು ಸಾರ್ವಜನಿಕ ಕಾಮಗಾರಿಗಳಿಗೆ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ಸಂಗ್ರಹಿಸಿದ್ದು, ಪಕ್ಷಕ್ಕೆ 40ಕ್ಕಿಂತ ಹೆಚ್ಚು ಸ್ಥಾನಗಳು ಬರುವುದಿಲ್ಲ. ಕಾಂಗ್ರೆಸ್ 150 ಸ್ಥಾನಗಳನ್ನು ಗೆದ್ದು ಮುಂದಿನ ಸರ್ಕಾರ ರಚಿಸಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು 'ದರೋಡೆಕೋರ ಸರ್ಕಾರ' ಎಂದು ಕರೆದ ಅವರು, ಆಡಳಿತ ಪಕ್ಷವು ವಿರೋಧ ಪಕ್ಷದ ಶಾಸಕರನ್ನು ಖರೀದಿಸಿದೆ ಎಂದು ತಿಳಿಸಿದರು.
'ನಾವು ಸರ್ಕಾರ ರಚಿಸಲಿದ್ದೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ರಾಹುಲ್ ಗಾಂಧಿ ಹೇಳಿದರು.

ಅವರು ಕಾಂಗ್ರೆಸ್ನ ನಾಲ್ಕು ಪ್ರಮುಖ ಖಾತರಿಗಳ ಬಗ್ಗೆ ಪುನರುಚ್ಚರಿಸಿದರು. ಕುಟುಂಬದ ಮಹಿಳೆಗೆ ರೂ 2,000, ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಪದವೀಧರರಿಗೆ ರೂ 3,000 ಮತ್ತು ನಿರುದ್ಯೋಗಿ ಡಿಪ್ಲೋಮಾ ಹೊಂದಿರುವವರಿಗೆ ರೂ 1,500 (ಇಬ್ಬರೂ 18 ವರ್ಷ ವಯಸ್ಸಿನವರು. 25 ವರ್ಷಗಳವರೆಗೆ) ಎರಡು ವರ್ಷಗಳವರೆಗೆ ಸಿಗಲಿದೆ. ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ತಿಳಿಸಿದರು.
'371-ಜೆ ಬಗ್ಗೆ ಮಾತನಾಡಿದಾಗ, ಇದನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದರು. ನಾವು ಮಾಡಿ ತೋರಿಸಿದ್ದೇವೆ. ನಿಮಗೆ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಸಿಕ್ಕಿದೆ ಆದರೆ ಬಿಜೆಪಿ ಸರ್ಕಾರ 371-ಜೆ ಜಾರಿ ಮಾಡುವುದಿಲ್ಲ ಎಂಬುದೇ ಸತ್ಯ. ಖಾಲಿ ಇರುವ 50,000 ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ವಿಶೇಷ ಶಿಕ್ಷಣ ನೀತಿ ತರುತ್ತೇವೆ' ಎಂದು ಹೇಳಿದರು.
'ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಬಿಜೆಪಿ ಆಡಳಿತದಲ್ಲಿ ಈ ಕೆಲಸ ಎಂದಿಗೂ ಸಾಧ್ಯವಿಲ್ಲ ಏಕೆಂದರೆ ಬಿಜೆಪಿ ಸರ್ಕಾರ ಶೇ.40 ಕಮಿಷನ್ ಸರ್ಕಾರ. ಕಾಂಗ್ರೆಸ್ ಸರ್ಕಾರ ಬಡವರ, ಸಣ್ಣ ವ್ಯಾಪಾರಿಗಳ, ರೈತರ, ಕೂಲಿಕಾರರ ಸರ್ಕಾರವಾಗಲಿದೆ' ಎಂದು ರಾಹುಲ್ ಗಾಂಧಿ ತಿಳಿಸಿದರು
ಇದಲ್ಲದೆ, ರಾಹುಲ್ ಗಾಂಧಿ ಗುರುವಾರ ಪಕ್ಷದ ಐದನೇ ಖಾತರಿ ಯೋಜನೆಯನ್ನು ಘೋಷಿಸಿದರು. ಸಾರ್ವಜನಿಕ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯನ್ನು ರಾಹುಲ್ ಗಾಂಧಿ ನೀಡಿದರು.












Click it and Unblock the Notifications