224 ಕ್ಷೇತ್ರಕ್ಕೆ 1450 ಅಭ್ಯರ್ಥಿಗಳಿಂದ ಟಿಕೆಟ್ ಬಯಸಿ ಅರ್ಜಿ
ಬೆಂಗಳೂರು, ಮಾರ್ಚ್ 12 : 224 ಕ್ಷೇತ್ರಗಳಿಗೆ ಟಿಕೆಟ್ ಬಯಸಿ 1450 ಜನರು ಕೆಪಿಸಿಸಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್, ಕಳೆದ ವಾರ ಪಕ್ಷ ಸೇರಿದ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರು ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಿಲ್ಲ!
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸುವ ಅಭ್ಯರ್ಥಿಗಳು ಕೆಪಿಸಿಸಿ ಕಚೇರಿಗೆ ಅರ್ಜಿ ಸಲ್ಲಿಸಬೇಕಿತ್ತು. ಅರ್ಜಿ ಸಲ್ಲಿಕೆಗೆ ಶನಿವಾರ ಕೊನೆಯ ದಿನವಾಗಿತ್ತು. ಶನಿವಾರದ ತನಕ ಕಚೇರಿಗೆ 1450 ಅರ್ಜಿಗಳು ಬಂದಿವೆ.
ಚಾಮರಾಜಪೇಟೆ, ಅರಸೀಕೆರೆ, ಬಳ್ಳಾರಿ ನಗರ, ಸಿಂಧಗಿ ಮತ್ತು ಚಿತ್ರದುರ್ಗ ಕ್ಷೇತ್ರಕ್ಕೆ ಹೆಚ್ಚಿನ ಜನರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. 1000ಕ್ಕೂ ಅಧಿಕ ಜನರು ಅರ್ಜಿಗಳನ್ನು ಪಡೆದಿದ್ದರು. ಆದರೆ, ವಾಪಸ್ ನೀಡಿಲ್ಲ.

ಪರಿಷತ್ ಸದಸ್ಯರಿಂದ ಅರ್ಜಿ : ವಿಧಾನ ಸದಸ್ಯ ವಿ.ಎಸ್.ಉಗ್ರಪ್ಪ ಮೊಳಕಾಳ್ಮೂರು ಕ್ಷೇತ್ರದಿಂದ, ಶ್ರೀನಿವಾಸ ಮಾನೆ ಹುಬ್ಬಳ್ಳಿ-ಧಾರವಾಡ ಕೇಂದ್ರ, ಮೋಟಮ್ಮ ಮೂಡಿಗೆರೆ ಕ್ಷೇತ್ರ, ಕೆ.ಸಿ.ಕೊಂಡಯ್ಯ ಬಳ್ಳಾರಿ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರ ವರುಣಾ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಕ್ಷೇತ್ರ ಕೊರಟಗೆರೆ ಸೇರಿದಂತೆ ಹಾಲಿ ಸಚಿವರು ಇರುವ ಕ್ಷೇತ್ರಕ್ಕೆ ಒಂದೇ ಅರ್ಜಿಗಳು ಬಂದಿವೆ. ಸಚಿವ ರೋಷನ್ ಬೇಗ್ ಪುತ್ರ ರುಮಾನ್ ಬೇಗ್ ಶಿವಾಜಿನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಪದಾಧಿಕಾರಿಗಳಿಗೆ ಸೂಚನೆ : ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಕೆಪಿಸಿಸಿಯ ಹಲವು ಪದಾಧಿಕಾರಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್ ಬಯಸುವ ಪದಾಧಿಕಾರಿಗಳು ಹುದ್ದೆಗೆ ರಾಜೀನಾಮೆ ನೀಡುವಂತೆ ಪಕ್ಷ ಸೂಚನೆ ನೀಡಿದೆ. ಟಿಕೆಟ್ ಖಚಿತವಾದ ಬಳಿಕ ಪದಾಧಿಕಾರಿಗಳು ರಾಜೀನಾಮೆ ನೀಡುವ ಸಾಧ್ಯತೆ ಇದೆ.












Click it and Unblock the Notifications