TV9 C-Voter Opinion Poll Survey: ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ಗೆ ಸೆಡ್ಡುಹೊಡೆದ ಕಾಂಗ್ರೆಸ್- ಇಲ್ಲಿದೆ ಅಂಕಿಅಂಶ
ಬೆಂಗಳೂರು, ಏಪ್ರಿಲ್ 25: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಸಮೀಕ್ಷೆಗಳು ಈಗಾಗಲೇ ಬರಲಾರಂಭಿಸಿದ್ದು, ಇದೀಗ ಟಿವಿ 9 ಹಾಗೂ ಸಿ ವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆ ಹೊರಬಿದ್ದಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಇಬ್ಬರು ಸಮೀಕ್ಷೆಯ ತಂಡದಲ್ಲಿದ್ದರು. 21,895 ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ ಈ ಸಮೀಕ್ಷೆಯಲ್ಲಿ ಸಿದ್ದಪಡಿಸಲಾಗಿದೆ ಎಂದು ಸಿವೋಟರ್- ಟಿವಿ 9 ಹೇಳಿದೆ.
ಇತ್ತೀಚೆಗೆ ಮಾಡಿದ ಈ ಸಮೀಕ್ಷೆ ಶೇಕಡ 95ರಷ್ಟು ನಿಖರವಾಗಿದೆ ಎಂದು ಸಮೀಕ್ಷೆ ನಡೆಸಿದ ವೀಕ್ಷಕರು ತಿಳಿಸಿದ್ದಾರೆ. ಕರ್ನಾಟಕ ವಿವಿಧ ಭಾಗದಲ್ಲಿ ಸಂಚರಿಸಿ ಮಾಡಿರುವ ಈ ಸಮೀಕ್ಷೆಗೆ ಮತದಾರರು ಉತ್ತರಿಸಿದ್ದಾರೆ. ಇದರಲ್ಲಿ ಮತದಾರನಿಗೆ ಮುಖ್ಯವಾದ ವಿಷಯವಾದ ರಾಜ್ಯದ ಸಮಗ್ರ ಅಭಿವೃದ್ಧಿ, ಉದ್ಯೋಗ, ಭ್ರಷ್ಟಾಚಾರ, ಸಾಮಾಜಿಕ ಸಮುದಾಯದ ವಿಷಯದ ಕುರಿತು ಪ್ರಶ್ನೆ ಕೇಳಲಾಗಿತ್ತು.

ಸರ್ಕಾರಿ ಸೇವೆ, ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಮಿಸಲಾತಿ ಇನ್ನು ಅನೇಕ ಪ್ರಶ್ನೆಗಳನ್ನು ಕೇಳಲಾಗಿತ್ತು. ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿಗೆ 104 ಸ್ಥಾನಗಳು, ಕಾಂಗ್ರೆಸ್ಗೆ 78, ಜೆಡಿಎಸ್ಗೆ 37 ಹಾಗೂ ಇತರರು 3 ಮಂದಿ ಗೆಲುವು ಸಾಧಿಸಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10ರಂದು ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ.
ಕರ್ನಾಟಕದಲ್ಲಿ ಪ್ರಚಾರ ಭರಾಟೆ ಜೋರಾಗಿದ್ದು, ಎರಡು ರಾಷ್ಟ್ರೀಯ ಪಕ್ಷಗಳ ಎರಡೂ ಹೈಕಮಾಂಡ್ನ ನಾಯಕರು ಮತಯಾಚನೆ ರೋಡ್ ಶೋಗಳನ್ನು ನಡೆಸುವುದರೊಂದಿಗೆ ಚುನಾವಣಾ ಕಾವು ಹೆಚ್ಚಾಗಿದೆ. ಹೀಗಾಗಿ ಚುನಾವಣಾ ಸಮೀಕ್ಷೆಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.
ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಬಹಿರಂಗಗೊಂಡ ಸಮೀಕ್ಷೆಯ ಭಾಗದಲ್ಲಿ ಕಾಂಗ್ರೆಸ್ ಪರವಾಗಿ ಶೇಕಡ 37.9ರಷ್ಟು ಜನರು ಒಲವು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಬಿಜೆಪಿ ಶೇಕಡ 17.7ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಇನ್ನು ಜೆಡಿಎಸ್ ಪರ ಶೇಕಡ 36.4ರಷ್ಟು ಜನರು ಒಲವು ಹೊಂದಿದ್ದಾರೆ. ಅಲ್ಲದೆ ಇತರೆ ಶೇಕಡ 8ರಷ್ಟು ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಗೆಲ್ಲುವ ಸ್ಥಾನಗಳಿಗೆ ಪರಿವರ್ತಿಸಿದರೆ ಈ ಬಾರಿ ಕಾಂಗ್ರೆಸ್ಗೆ 21ರಿಂದ 25 ಸ್ಥಾನಗಳು ಗೆಲ್ಲಬಹುದು ಎಂದು ತಿಳಿಸಿದರೆ ಬಿಜೆಪಿ 4ರಿಂದ 8 ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿಸಿದೆ. ಇನ್ನು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಭದ್ರಕೋಟೆಯನ್ನು ಹೊಂದಿದ್ದು, ಹೀಗಾಗಿ 24ರಿಂದ 28 ಸ್ಥಾನಗಳು ಬರಲಿವೆ. ಅಲ್ಲದೆ ಇತರರು 1 ಸ್ಥಾನವನ್ನು ಪಡೆಯಬಹುದು ಎಂದು ತಿಳಿಸಿದೆ.
ನಿರೀಕ್ಷೆಯಂತೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ. ಹಳೆ ಮೈಸೂರು ಭಾಗ ಎಂದರೆ ರಾಮನಗರ, ಮಂಡ್ಯ, ಮೈಸೂರು, ಹಾಸನ ಚಾಮರಾಜನಗರ, ಕೊಡಗು ಇವೇ ಮೊದಲಾದ ಜಿಲ್ಲೆಗಳು ಬರುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ನಾಯಕರಿಗೆ ಸಿಹಿಸುದ್ದಿ ನೀಡುತ್ತಿವೆ. ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಕಾಂಗ್ರೆಸ್ ಮುನ್ನಡೆ ಸಾಧಿಸಬಹುದು ಎಂಬ ಮುನ್ಸೂಚನೆ ನೀಡುತ್ತಿವೆ.
ಕಳೆದ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಳೆ ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡದೆ ಬದಾಮಿಯಿಂದ ಕಣಕ್ಕೆ ಇಳಿದಿದ್ದರು. ಆದರೆ ಈಗ ತಮ್ಮ ತವರು ಜಿಲ್ಲೆಯಾದ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವುದು ಕಾಂಗ್ರೆಸ್ಗೆ ಹೊಸ ಹುರುಪು ನೀಡಿದೆ. ಹೀಗಾಗಿ ಈ ಭಾಗದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಬಹುದು ಎಂದು ಹೇಳಿದೆ.












Click it and Unblock the Notifications