ಸಸ್ಪೆನ್ಸ್ ಥ್ರಿಲ್ಲರ್ : ಬಹುಮತ ಸಾಬೀತುಪಡಿಸಲು ಬಿಜೆಪಿ ಮಾಸ್ಟರ್ ಪ್ಲಾನ್

Recommended Video

      ಬಹುಮತ ಸಾಬೀತುಪಡಿಸಲು ಬಿಜೆಪಿ ಮಾಸ್ಟರ್ ಪ್ಲಾನ್ | Oneindia Kannada

      ಬೆಂಗಳೂರು, ಮೇ 16 : ಮೇ 17ರಂದು, ರಾಯರ ದಿನ ಗುರುವಾರ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಬಿರುಬೇಸಿಗೆಯಲ್ಲೂ ಚಳಿನಡುಕ ಹುಟ್ಟಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಲೆಕ್ಕಾಚಾರಗಳು ಸಂಪೂರ್ಣ ಉಲ್ಟಾ ಆಗಿವೆ.

      ಗುರುವಾರದಂದೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿದ್ದಾರೆ. ಇದೇ ಮಾತನ್ನು ಚುನಾವಣೆಗೂ ಮೊದಲು ಅವರು ಹೇಳಿದ್ದರು. ಜ್ಯೋತಿಷಿಗಳ ಅಣತಿಯಂತೆ ಮೇ 17ರಂದೇ ಅವರು ಮುಹೂರ್ತ ಗುರುತು ಹಾಕಿಕೊಂಡಿದ್ದರು.

      ಆದರೆ, ಕೇವಲ 104 ಸ್ಥಾನಗಳಿರುವ ಯಡಿಯೂರಪ್ಪನವರು ಹೇಗೆ ಬಹುಮತ ಸಾಬೀತುಪಡಿಸುತ್ತಾರೆ? ಬಹುಮತ ಸಾಬೀತುಪಡಿಸಲು ಬೇಕಾಗಿರುವುದು ಇನ್ನೂ 8 ಸ್ಥಾನಗಳು. ಇಬ್ಬರು ಸ್ವತಂತ್ರ ಅಭ್ಯರ್ಥಿಗಳನ್ನು ಬಿಟ್ಟರೆ ಬೇರೆ ಯಾರೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಇದು ಚಿದಂಬರ ರಹಸ್ಯವೇನೂ ಅಲ್ಲ. ಇದಕ್ಕೂ ತಂತ್ರಗಾರಿಕೆ ರೂಪಿಸಲಾಗಿದೆ.

      ಕರ್ನಾಟಕ ರಾಜಕೀಯ ಅಂಗಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಸ್ಪನ್ಸ್ ಥ್ರಿಲ್ಲರ್ ಸಿನೆಮಾದಂತೆ ಕಂಡುಬರುತ್ತಿವೆ. ಲೆಕ್ಕಾಚಾರಗಳು ಬದಲಾಗುತ್ತಿವೆ, ನಿಷ್ಠೆಗಳು ಬದಲಾಗುತ್ತಿವೆ, ರಹಸ್ಯ ಚಟುವಟಿಕೆಗಳು ಬಯಲಾಗುತ್ತಿವೆ, ಮುಂದೆ ಏನಾಗುವುದೋ ಎಂದು ರಾಜ್ಯದ ಜನರು ಉಸಿರು ಬಿಗಿಹಿಡಿದು ನೋಡುವಂತಾಗಿದೆ.

      ಚಿತ್ರನಟ ಮತ್ತು ಕಾಂಗ್ರೆಸ್ ಕಟ್ಟಾ ಬೆಂಬಲಿಗ ಪ್ರಕಾಶ್ ರೈ ಅವರು ಮಂಗಳವಾರವೇ ಭವಿಷ್ಯ ನುಡಿದಿದ್ದಾರೆ. ಶಾಸಕರನ್ನು ಬೇಟೆಯಾಡಲು ಬಿಜೆಪಿಯ ಚಾಣಕ್ಯ ಬರುತ್ತಾರೆ, ಕುದುರೆ ವ್ಯಾಪಾರ ಮಾಡುತ್ತಾರೆ ಎಂದು. ಆದರೆ, ಅಮಿತ್ ಶಾ ಬಂದಿಲ್ಲ, ತಮ್ಮ ತಂಡವನ್ನು ಕಳಿಸಿದ್ದಾರೆ. ಕುದುರೆ ವ್ಯಾಪಾರ ಮಾಡಲ್ಲ, ಬಟ್ ಬೇರೆ ತಂತ್ರಗಾರಿಕೆ ಹೂಡಿದ್ದಾರೆ. ಅದೇನೆಂದರೆ...

      ಲಿಂಗಾಯತರಿಂದ ಕಾಂಗ್ರೆಸ್ಸಿಗೆ ಭಾರೀ ಹೊಡೆತ

      ಲಿಂಗಾಯತರಿಂದ ಕಾಂಗ್ರೆಸ್ಸಿಗೆ ಭಾರೀ ಹೊಡೆತ

      ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಮತ್ತು ಅಲ್ಪಸಂಖ್ಯಾತ ಸ್ಥಾನಮಾನ ನೀಡಿ, ಆ ಸಮುದಾಯವನ್ನೇ ವಿಭಿಜಿಸಲು ಯತ್ನಿಸಿದ್ದು ಕಾಂಗ್ರೆಸ್ಸಿಗೆ ಭಾರೀ ಹೊಡೆತ ಬಿದ್ದಿರುವುದು ಮುಂಬೈ ಕರ್ನಾಟಕ ಮತ್ತು ಕೇಂದ್ರ ಕರ್ನಾಟಕ ಭಾಗದಲ್ಲಿ ಸಾಬೀತಾಗಿದೆ. ಭಾರತೀಯ ಜನತಾ ಪಕ್ಷ ಈ ಪ್ರಾಂತ್ಯದಲ್ಲಿ ಭರ್ಜರಿ ಫಸಲು ಪಡೆದಿದೆ. ಕಾಂಗ್ರೆಸ್ಸಿನ ಧರ್ಮ ವಿಭಜನೆಯ ತಂತ್ರದಿಂದ ಆ ಪಕ್ಷದಲ್ಲಿನ ಕೆಲವಾರು ನಾಯಕರೇ ಸಿಡಿದೆದ್ದಿದ್ದಾರೆ.

      ಲಿಂಗಾಯತ ನಾಯಕರಿಗೆ ಅಸ್ತಿತ್ವವೇ ಇಲ್ಲ

      ಲಿಂಗಾಯತ ನಾಯಕರಿಗೆ ಅಸ್ತಿತ್ವವೇ ಇಲ್ಲ

      ಈಗ ಕಾಂಗ್ರೆಸ್ ಪಕ್ಷವೇ ಒಕ್ಕಲಿಗರ ನಾಯಕ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುತ್ತಿರುವುದರಿಂದ, ಕುಮಾರಸ್ವಾಮಿ ಅವರು ಡ್ರೈವರ್ ಸೀಟಿನಲ್ಲಿದ್ದಾರೆ. ಅವರು ಹಾಕುವ ತಾಳಕ್ಕೆ ಲಿಂಗಾಯತ ನಾಯಕರು ಕುಣಿಯಬೇಕಾಗುತ್ತದೆ. ಅಕ್ಷರಶಃ ಲಿಂಗಾಯತ ನಾಯಕರಿಗೆ ಕಾಂಗ್ರೆಸ್ಸಿನಲ್ಲಾಗಲಿ, ಮೈತ್ರಿ ಸರಕಾರದಲ್ಲಾಗಲಿ ಅಸ್ತಿತ್ವವೇ ಇಲ್ಲದಂತಾಗಿದೆ. ಹೀಗಾಗಿ ಅವರು ಸದನದಲ್ಲಿ ಬಹುಮತ ಸಾಬೀತು ಪಡಿಸಲು ಬಿಜೆಪಿ ಮುಂದಾದರೆ ಅವರಿಗೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ.

      ಮತಹಾಕದೆ ದೂರ ಉಳಿಯುವ ಸಾಧ್ಯತೆ

      ಮತಹಾಕದೆ ದೂರ ಉಳಿಯುವ ಸಾಧ್ಯತೆ

      ಇದು ಕಾಂಗ್ರೆಸ್ಸಿಗೆ ಮತ್ತು ಜೆಡಿಎಸ್ಸಿಗೆ ಭಾರೀ ಮರ್ಮಾಘಾತ ನೀಡಲಿದೆ. ಇವರು ಸದನದಲ್ಲಿ ಬಿಜೆಪಿ ಪರ ಅಡ್ಡಮತದಾನ ಮಾಡುವ ಸಾಧ್ಯತೆಯಿದೆ ಅಥವಾ ಕಾಂಗ್ರೆಸ್ ಗೆ ವಿರುದ್ಧವಾಗಿ ಮತಹಾಕದಂತೆ ತಟಸ್ಥರಾಗಿ ಉಳಿಯುವ ಸಾಧ್ಯತೆಯೂ ನಿಚ್ಚಳವಾಗಿದೆ. ಹೀಗಾದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸೋಲು ಖಚಿತ. ಅಮಿತ್ ಶಾ ಅವರು ಈ ತಂತ್ರಗಾರಿಕೆ ಕೈಗೂಡುವ ಲಕ್ಷಣಗಳು ದಟ್ಟವಾಗಿವೆ. ಈ ನಾಲ್ವರು ಯಾರ ಕೈಗೂ ಸಿಗುತ್ತಿಲ್ಲ, ಕರೆಗೂ ದಕ್ಕುತ್ತಿಲ್ಲ. ಈಗ ಕೈಹಿಚುಕಿಕೊಳ್ಳುವ ಸರದಿ ಜೆಡಿಎಸ್ ದಾಗಿದೆ.

      ಆನಂದ್, ನಾಗೇಂದ್ರ, ರಾಜಶೇಖರ, ಎಂವೈ ಪಾಟೀಲ

      ಆನಂದ್, ನಾಗೇಂದ್ರ, ರಾಜಶೇಖರ, ಎಂವೈ ಪಾಟೀಲ

      ಹಾಗಿದ್ದ ಮೇಲೆ ಈ ಶಾಸಕರು ಯಾರು? ಎಂಬುದು ಇದೀಗ ಬಯಲಾಗಿದೆ. ಅವರು ಬಿಜೆಪಿಯಿಂದಲೇ ಸಿಡಿದು ಕಾಂಗ್ರೆಸ್ ಸೇರಿ ಅಲ್ಲಿಂದಲೂ ಗೆದ್ದಿರುವ ಹೊಸಪೇಟೆ ಶಾಸಕ ಆನಂದ್ ಸಿಂಗ್, ತಮ್ಮ ಮಾತೃ ಪಕ್ಷಕ್ಕೆ ಬೆಂಬಲ ನೀಡಲು ಸಿದ್ಧರಿದ್ದಾರೆ. ಆನಂದ್ ಸಿಂಗ್ ರಂತೆಯೇ ಬಿಜೆಪಿಯನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರಿ ಕೂಡ್ಲಿಗಿಯಿಂದ ಗೆದ್ದಿರುವ ನಾಗೇಂದ್ರ (ರೆಡ್ಡಿ ಬಳಗದ ಬಂಟ) ಮತ್ತೆ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಹುಮ್ನಾಬಾದ ಶಾಸಕ ರಾಜಶೇಖರ ಬಿ ಪಾಟೀಲ ಮತ್ತು ಅಫಜಲಪುರದ ಶಾಸಕ ಎಂವೈ ಪಾಟೀಲರು ಕೂಡ ಕಮಲ ಹಿಡಿಯಲು ಸಿದ್ಧರಿದ್ದಾರೆ. ಇನ್ನೇನು ಉಳಿದಿದೆ?

      ಕುಮಾರಣ್ಣ ಮಾತು ಬದಲಿಸುವ ಲಕ್ಷಣ

      ಕುಮಾರಣ್ಣ ಮಾತು ಬದಲಿಸುವ ಲಕ್ಷಣ

      ಈ ನಡುವೆ, ತಮ್ಮ ತಂತ್ರಗಾರಿಕೆ ಕೈಕೊಟ್ಟಿದ್ದರಿಂದ ಕುಮಾರಸ್ವಾಮಿ ಮತ್ತು ದೇವೇಗೌಡರು ಕೂಡ ಕಂಗೆಟ್ಟಿರುವುದು ಕಂಡುಬರುತ್ತಿದೆ. ಈಗಾಗಲೆ ಅವರು ಕೂಡ ಬಿಜೆಪಿ ನಾಯಕರೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಾರೆ. ನಿನ್ನ ಅವರು ಬಿಜೆಪಿಯ ನಾಯಕರ ಕರೆಗೆ ಓಗೊಟ್ಟಿರಲಿಲ್ಲ. ಇದೆಲ್ಲ ತಾಪತ್ರಯವೇ ಬೇಡವೆಂದು ಜೆಡಿಎಸ್ ಪಕ್ಷ ಕಾಂಗ್ರೆಸ್ ಮೈತ್ರಿಕೂಟದಿಂದ ಹೊರಗುಳಿಯಲು ಸಿದ್ದವಾದರೆ ಮತ್ತು ಬಿಜೆಪಿ ಬೆಂಬಲ ನೀಡಲು ಸಿದ್ಧವಾದರೆ ಬಿಜೆಪಿಗೆ ನಿರಾತಂಕ. ಅವರು ತಮ್ಮ ಮಾತು ಬದಲಿಸುವ ಲಕ್ಷಣಗಳು ಕೂಡ ಕಂಡುಬರುತ್ತಿವೆ.

      ಬಿಜೆಪಿ ಸಂಪರ್ಕದಲ್ಲಿ 7 ಕಾಂಗ್ರೆಸ್ ಶಾಸಕರು

      ಬಿಜೆಪಿ ಸಂಪರ್ಕದಲ್ಲಿ 7 ಕಾಂಗ್ರೆಸ್ ಶಾಸಕರು

      ಬಲ್ಲ ಮೂಲಗಳ ಪ್ರಕಾರ, ಕಾಂಗ್ರೆಸ್ ನ 7 ಶಾಸಕರು ಬಿಜೆಪಿಗೆ ಬೆಂಬಲ ನೀಡಲು ಸಿದ್ದರಾಗಿದ್ದು, ಅವರು ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್ಸಿಗೆ ಕೈಕೊಡಲಿದ್ದಾರೆ ಎಂದು ತಿಳಿದುಬಂದಿದೆ. ಇವರು ಈಗಾಗಲೆ ಬಿಜೆಪಿಯ ಸಂಪರ್ಕದಲ್ಲಿದ್ದು, ಕೆಲವರು ಕಾಂಗ್ರೆಸ್ ಜೊತೆ ಹೈದರಾಬಾದಿಗೆ ಕೂಡ ಹೋಗಿಲ್ಲ. ವಿಶ್ವಾಸಮತ ಶನಿವಾರ ಮೇ 19ರಂದು ನಡೆಯಲಿದ್ದು, ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರಿಗೆ ಅಗ್ನಿಪರೀಕ್ಷೆಯಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+