ಮುಂಜಾನೆಯೇ ದೇವರ ಮೊರೆ ಹೋದ ಕುಮಾರಸ್ವಾಮಿ, ಜಿಟಿಡಿ
ಬೆಂಗಳೂರು, ಮೇ 15: ಈ ಬಾರಿಯ ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗುವ ನಿರೀಕ್ಷೆಯಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಮುಂಜಾನೆಯೇ ದೇವರ ಮೊರೆ ಹೊಕ್ಕಿದ್ದಾರೆ.
ಮತ ಎಣಿಕೆ ಆರಂಭವಾಗುವ ಮುನ್ನವೇ ನಾಗಮಂಗಲದ ಆದಿಚುಂಚನಗಿರಿಯಲ್ಲಿರುವ ಕಾಲಭೈರವ ದೇವಸ್ಥಾನಕ್ಕೆ ತೆರಳಿದ ಕುಮಾರಸ್ವಾಮಿ ಅವರು ವಿಶೇಷ ಪೂಜೆ ಸಲ್ಲಿಸಿದರು.
ಕುಟುಂಬದವರು ಮತ್ತು ಬೆಂಬಲಿಗರ ಜತೆ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಜೆಡಿಎಸ್ ಗೆಲುವಿಗಾಗಿ ಪ್ರಾರ್ಥಿಸಿದರು.
ಮತದಾನ ಮುಗಿಯುತ್ತಿದ್ದಂತೆಯೇ ಕುಮಾರಸ್ವಾಮಿ ಅವರು ಸಿಂಗಪುರಕ್ಕೆ ತೆರಳಿದ್ದರು. ಚುನಾವಣಾ ಕಾರ್ಯದಿಂದ ದಣಿದಿದ್ದ ಅವರು ವಿಶ್ರಾಂತಿ ಪಡೆಯಲು ಸಿಂಗಪುರಕ್ಕೆ ಹೋಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದವು.

ಆದರೆ, ಅತಂತ್ರ ವಿಧಾನಸಭೆ ಬರುವುದು ಖಚಿತವಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದವು. ಹೀಗಾಗಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ರಚನೆಗೆ ರಾಷ್ಟ್ರೀಯ ನಾಯಕರ ಜತೆ ಮಾತುಕತೆ ನಡೆಸುವ ಸಲುವಾಗಿ ಸಿಂಗಪುರಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು.
ದೇಶದಲ್ಲಿಯೇ ಇದ್ದರೆ ಸಮ್ಮಿಶ್ರ ಸರ್ಕಾರ ರಚನೆಯ ಮಾತುಕತೆಗೆ ತೊಂದರೆಯಾಗಬಹುದು. ಮಾಧ್ಯಮಗಳ ಕಣ್ಣಿಂದ ದೂರವಿದ್ದು ಮುಂದಿನ ಮಾತುಕತೆ ನಡೆಸುವ ಉದ್ದೇಶದಿಂದ ಅವರು ಸಿಂಗಪುರಕ್ಕೆ ಹೋಗಿದ್ದರು ಎಂದು ಹೇಳಲಾಗಿದೆ.
ಈಗ ವಿರಾಮದ ಬಳಿಕ ತವರಿಗೆ ಮರಳಿರುವ ಕುಮಾರಸ್ವಾಮಿ ಮೊದಲು ದೇವರ ಮೊರೆ ಹೋಗಿದ್ದಾರೆ. ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ನಿವಾಸಕ್ಕೂ ಕುಮಾರಸ್ವಾಮಿ ಅವರು ಬಂದಿಲ್ಲ. ಸಿಂಗಪುರದಿಂದ ಮರಳಿದ ಅವರು ಖಾಸಗಿ ಹೋಟೆಲ್ಗೆ ಹೋಗಿ ಅಲ್ಲಿಂದ ನೇರವಾಗಿ ಪತ್ನಿ ಅನಿತಾ ಅವರ ಸಮೇತ ನಾಗಮಂಗಲದ ಆದಿಚುಂಚನಗಿರಿ ಮೂಲ ಮಠಕ್ಕೆ ತೆರಳಿದರು ಎನ್ನಲಾಗಿದೆ.
ಚಾಮುಂಡಿ ಬೆಟ್ಟದಲ್ಲಿ ಜಿಟಿಡಿ
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಕುಟುಂಬದ ಸದಸ್ಯರ ಜತೆ ಚಾಮುಂಡಿ ಬೆಟ್ಟಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ ಜಿ.ಟಿ. ದೇವೇಗೌಡ ಅವರು, ಬಳಿಕ ಗ್ರಾಮದ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.











Click it and Unblock the Notifications