ಭರ್ಜರಿ ರೋಡ್ ಶೋ ; ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ್ ನಾಮಪತ್ರ ಸಲ್ಲಿಕೆ
ಕಲಬುರಗಿ,ಏಪ್ರಿಲ್21: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಲಬುರಗಿ ಉತ್ತರ ಕ್ಷೇತ್ರದ ಹಾಲಿ ಶಾಸಕಿ ಕನೀಜ್ ಫಾತಿಮಾ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರದ ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ ಗುರುವಾರ ನಾಮಪತ್ರ ಸಲ್ಲಿಸಿದರು.
ಗುರುವಾರ ಮಧ್ಯಾಹ್ನ 12ಕ್ಕೆ ಮೆರವಣಿಗೆಗೆಗೂ ಮುನ್ನ ದಕ್ಷಿಣ ಕ್ಷೇತ್ರದ ಚುನಾವಣಾ ಅಧಿಕಾರಿ ಕಚೇರಿಗೆ ಬೆಂಬಲಿಗರೊಂದಿಗೆ ಆಗಮಿಸಿದ ಅಲ್ಲಮಪ್ರಭು ಪಾಟೀಲ್ ಉಮೇದುವಾರಿಕೆ ಸಲ್ಲಿಸಿದರು. ನಂತರ ಕಾಂಗ್ರೆಸ್ ಕಚೇರಿಯಿಂದ ಸಾವಿರಾರೂ ಕಾರ್ಯಕರ್ತರ ನೇತೃತ್ವದಲ್ಲಿಮೆರವಣಿಗೆ ಆರಂಭವಾಯಿತು. ತೆರೆದ ವಾಹನದಲ್ಲಿಅಲ್ಲಮಪ್ರಭು ಪಾಟೀಲ್ ಸೇರಿ ಹಲವು ಮುಖಂಡರು ಕಾರ್ಯಕರ್ತರತ್ತ ಕೈ ಬೀಸಿ ಭರ್ಜರಿ ರೋಡ್ ಶೋ ನಡೆಸಿದರು.

ಬಿರು ಬಿಸಿಲಲ್ಲಿ ಮಧ್ಯಾಹ್ನ ಕಾಂಗ್ರೆಸ್ ಕಚೇರಿಯಿಂದ ಆರಂಭಿಸಲಾದ ಶಕ್ತಿ ಪ್ರದರ್ಶನದ ಮೆರವಣಿಗೆಗೆ ಸಾವಿರಾರೂ ಜನರು ಸಾಥ್ ನೀಡುವ ಮೂಲಕ ಅಲ್ಲಮಪ್ರಭು ಪಾಟೀಲ್ ಭರವಸೆ ಹೆಚ್ಚುವಂತೆ ಮಾಡಿದರು. ಇಡೀ ಮೆರವಣಿಗೆ ತುಂಬಾ ಕಾರ್ಯಕರ್ತರು ಕೈಯಲ್ಲಿ ಕಾಂಗ್ರೆಸ್ ಧ್ವಜ ಹಿಡಿದು ಘೋಷಣೆ ಕೂಗುತ್ತ ಉತ್ಸಾಹದಿಂದ ಪಾಲ್ಗೊಂಡರು. ಜಗತ್ ವೃತ್ತದಲ್ಲಿ ಮತ್ತೊಮ್ಮೆ ಅಲ್ಲಮಪ್ರಭು ನಾಮಪತ್ರ ಸಲ್ಲಿಕೆಗೆ ತೆರಳುವವರೆಗೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.
ಕಲಬುರಗಿ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಸುಪ್ರಸಿದ್ಧ ಜಿಡಗಾ, ಮುಗಳಖೋಡ ಮಠದ ಹಿರಿಯ ಗುರು ಲಿಂಗ ಸಿದ್ದರಾಮೇಶ್ವರ ಶ್ರೀ ಆಶೀರ್ವಾದ ರೂಪದಲ್ಲಿ ಕೊಡುಗೆ ನೀಡಿದ್ದ ಲ್ಯಾನ್ಸರ್ ಕಾರಲ್ಲೇ ಬಂದು ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ಇದೇ ಕಾರಣದಿಂದಲೇ ಸಿದ್ದರಾಮೇಶ್ವರರು 2000ರಲ್ಲಿಅಲ್ಲಮಪ್ರಭು ಪಾಟೀಲರಿಗೆ ಪ್ರೀತಿ, ಕಾಳಜಿಯಿಂದ ಲ್ಯಾನ್ಸರ್ ಕಾರ್ ಕೊಡುಗೆ ನೀಡಿ ಹರಸಿದ್ದರು. ಈ ಕಾರು ಅದೃಷ್ಟದ ಕಾರೆಂದು ತಿಳಿದಿದ್ದರಿಂದ ನಾಮಪತ್ರ ವೇಳೆ ಇದೇ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದರು.

ಶಕ್ತಿ ಪ್ರದರ್ಶಿಸಿದ ಕನೀಜ್ ಫಾತಿಮಾ
ಕಲಬುರಗಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನೀಜ್ ಫಾತಿಮಾ ಬೃಹತ್ ಮೆರವಣಿಗೆ ಮೂಲಕ, ಅಪಾರ ಬೆಂಬಲಿಗರೊಂದಿಗೆ ಗುರುವಾರ ಶಕ್ತಿ ಪ್ರದರ್ಶನ ಮಾಡಿದರು. ಗುರುವಾರ ಮಧ್ಯಾಹ್ನ ಖಾಜಾ ಬಂದೇನವಾಜ್ ದರ್ಗಾದಲ್ಲಿ ಶಾಸಕಿ ಕನೀಜ್ ಫಾತಿಮಾ ಪ್ರಾರ್ಥನೆ ಸಲ್ಲಿಕೆ ಮಾಡಿದ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ವೇಳೆ ಸಾವಿರಾರೂ ಕಾರ್ಯಕರ್ತರು ಸಾಥ್ ನೀಡಿದರು.
ಶಾಸಕಿ ಕನೀಜ್ ಫಾತಿಮಾ ಜಗತ್ವೃತ್ತದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಬಸವೇಶ್ವರ ಪ್ರತಿಮೆ, ಟೌನ್ಹಾಲ್ ಎದುರಿನ ಬಾಬು ಜಗಜೀವನರಾಂ, ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.












Click it and Unblock the Notifications