ಮಧ್ಯ ಕರ್ನಾಟಕದ ಫಲಿತಾಂಶ; ಮುದುಡಿದ ಕಮಲ, ಕ್ಷೇತ್ರಗಳು 'ಕೈ' ವಶ!
ಬೆಂಗಳೂರು, ಮೇ 13; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡುವ ತಯಾರಿ ನಡೆಸಿದೆ. ರಾಜ್ಯದ ಆಡಳಿತ ಪಕ್ಷ ಬಿಜೆಪಿ ತಂತ್ರಗಳೆಲ್ಲವೂ ತಲೆಕೆಳಗಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಸಾಲು ಸಾಲು ಸಚಿವರು ಸೋಲು ಕಂಡಿದ್ದಾರೆ.
ಪ್ರದೇಶವಾರು ನೋಡಿದಾಗ ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿವೆ. ಜೆಡಿಎಸ್ ಈ ಭಾಗದಲ್ಲಿ ಅಷ್ಟು ಪ್ರಭಾವ ಹೊಂದಿಲ್ಲ. ನೇರ ಸ್ಪರ್ಧೆ ಏನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ.

ಈ ಭಾಗದಲ್ಲಿ ಬಿಜೆಪಿಯ ನಾಯಕರಾದ ಸಿ. ಟಿ. ರವಿ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಸೋಲು ಕಂಡಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ನ ಶಾಮನೂರು ಶಿವಶಂಕರಪ್ಪ, ಅವರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ ಗೆಲುವು ಸಾಧಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಯಾರಿಗೆ ಗೆಲುವು?; ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ನ ಹಿರಿಯೂರು (ಡಿ. ಸುಧಾಕರ್), ಹೊಸದುರ್ಗ (ಬಿ. ಜಿ. ಗೋವಿಂದಪ್ಪ), ಮೊಳಕಾಲ್ಮೂರು (ಎನ್. ವೈ. ಗೋಪಾಲಕೃಷ್ಣ), ಚಿತ್ರದುರ್ಗ (ವಿರೇಂದ್ರ ಪಪ್ಪಿ) ಹಾಗೂ ಚಳ್ಳಕೆರೆ (ಟಿ. ರಘುಮೂರ್ತಿ) ಗೆಲುವು ಸಾಧಿಸಿದ್ದಾರೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿಯ ಎಂ. ಚಂದ್ರಪ್ಪ ಗೆದ್ದು ಜಿಲ್ಲೆಯಲ್ಲಿ ಬಿಜೆಪಿಯ ಖಾತೆ ತೆರೆದರು.
ದಾವಣಗೆರೆ ಜಿಲ್ಲೆಯಲ್ಲಿ ಹರಿಹರ ಕ್ಷೇತ್ರದಲ್ಲಿ ಬಿಜೆಪಿಯ ಬಿ. ಪಿ. ಹರೀಶ್ ಗೆಲುವು ಸಾಧಿಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯಿಂದ ಗೆದ್ದವರು ಅಭ್ಯರ್ಥಿ ಇವರು ಮಾತ್ರ.
ಉಳಿದಂತೆ ದಾವಣಗೆರೆ ಉತ್ತರ (ಎಸ್. ಎಸ್. ಮಲ್ಲಿಕಾರ್ಜುನ), ದಾವಣಗೆರೆ ದಕ್ಷಿಣ (ಶಾಮನೂರು ಶಿವಶಂಕರಪ್ಪ), ಜಗಳೂರು (ದೇವೇಂದ್ರಪ್ಪ), ಹೊನ್ನಾಳಿ (ಡಿ. ಜೆ. ಶಾಂತನಗೌಡ), ಮಾಯಕೊಂಡ (ಬಸವಂತಪ್ಪ ಅಲಿಯಾಸ್ ಬಸವರಾಜ್), ಚನ್ನಗಿರಿಯಲ್ಲಿ (ಬಸವರಾಜ್ ಶಿವಗಂಗಾ) ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ.
ಶಿವಮೊಗ್ಗ; ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಬಿಜೆಪಿ ಪಾಲಾಗಿದೆ. ಶಿಕಾರಿಪುರ (ಬಿ. ವೈ. ವಿಜಯೇಂದ್ರ), ತೀರ್ಥಹಳ್ಳಿ (ಆರಗ ಜ್ಞಾನೇಂದ್ರ), ಶಿವಮೊಗ್ಗ ನಗರ (ಚೆನ್ನಬಸಪ್ಪ) ಗೆಲುವು ಸಾಧಿಸಿದ್ದಾರೆ. ಶಿವಮೊಗ ಗ್ರಾಮಾಂತರದಲ್ಲಿ ಜೆಡಿಎಸ್ನ ಶಾರದಾ ಪೂರ್ಯನಾಯ್ಕ್ ಗೆಲುವು ಸಾಧಿಸಿದ್ದಾರೆ. ಭದ್ರಾವತಿ (ಬಿ. ಕೆ. ಸಂಗಮೇಶ್ವರ), ಸಾಗರ (ಬೇಳೂರು ಗೋಪಾಲಕೃಷ್ಣ), ಸೊರಬ (ಮಧು ಬಂಗಾರಪ್ಪ) ಜಯಗಳಿಸಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಸೋಲು ಕಂಡಿದ್ದಾರೆ. ಅಲ್ಲದೇ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದ್ದು ಮುಖಭಂಗ ಅನುಭವಿಸಿದೆ. ಚಿಕ್ಕಮಗಳೂರು (ಎಚ್. ಡಿ. ತಮ್ಮಯ್ಯ), ಮೂಡಿಗೆರೆ (ನಯನ ಮೋಟಮ್ಮ), ಶೃಂಗೇರಿ (ಟಿ. ಡಿ. ರಾಜೇಗೌಡ), ತರೀಕೆರೆ (ಜಿ. ಎಚ್. ಶ್ರೀನಿವಾಸ್), ಕಡೂರು (ಕೆ. ಎಸ್. ಆನಂದ್) ಜಯಗಳಿಸಿದ್ದಾರೆ.












Click it and Unblock the Notifications