Nomination Last Date: ಅಮವಾಸ್ಯೆ ಸೂರ್ಯಗ್ರಹಣದಂದು ನಾಮಪತ್ರ ಸಲ್ಲಿಸುವವರ ವಿವರ
ಬೆಂಗಳೂರು, ಏಪ್ರಿಲ್ 20: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಸ್ಫರ್ಧಾಳುಗಳಿಗೆ ಇಂದು ಏಪ್ರಿಲ್ 20 ಗುರುವಾರವೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಕಾಂಗ್ರೆಸ್ನ ಪ್ರಮುಖ ನಾಯಕರು ಸೇರಿದಂತೆ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.
ಗುರುವಾರ (ಏಪ್ರಿಲ್ 20) ವರ್ಷ ಮೊದಲ ಸೂರ್ಯಗ್ರಹಣ ಜೊತೆಗೆ ಅಮವಾಸ್ಯೆ ಸಹ ಇದೆ. ಈ ಕಾರಣಕ್ಕೆ ಆಚಾರ ವಿಚಾರಗಳಲ್ಲಿ ನಂಬಿಕೆ ಇರುವಂತವರು ಬಹುತೇಕ ಬುಧವಾರವೇ ನಾಮಪತ್ರ ಸಲ್ಲಿಸಿದ್ದಾರೆ. ಕಡೆಗಳಿಗೆಯಲ್ಲಿ ಟಿಕೆಟ್ ಘೋಷಣೆಯಾದವರು ಆಯಾ ಪಕ್ಷಗಳಿಂದ ಬಿ.ಫಾಮ್ ಪಡೆದಿದ್ದು, ಅವರ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಯಮಕನಮರಡಿ ವಿಧಾನಸಭಾ ಕ್ಷೇತ್ರದಿಂದ ಇಂದು ಬೆಳಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅವರು ಅಮವಾಸ್ಯೆ ದಿನ ನಾಮಪತ್ರ ಸಲ್ಲಿಸುವ ನಿರ್ಧಾರ ಮಾಡಿದ್ದರು ಎನ್ನಲಾಗಿದೆ. ಕ್ಷೇತ್ರದ ಸ್ಮಶಾನದಿಂದಲೇ ಚುನಾವಣಾ ಪ್ರಚಾರ ಆರಂಭಿಸಿದ್ದರು.
ಬಿಜೆಪಿಯಿಂದಲೂ ಬಹುತೇಕ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಬುಧವಾರ ಸಂಜೆ ನಂತರ ಟಿಕೆಟ್ ಘೋಷಣೆಯಾದ ಮಾನ್ವಿ ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಪಕ್ಷವು ಬುಧವಾರ ಮಧ್ಯಾಹ್ನ 3ನೇ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಕೆಲವರು ಇವತ್ತು ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ.
ರಾಜ್ಯ ಸಾರ್ವತ್ರಿಕ ಚುನಾವಣೆ ಅಧಿಕಸೂಚನೆ ಪ್ರಕಟಗೊಂಡ ಏಪ್ರಿಲ್ 13ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಯಿತು. ಅಂದು ಮೊದಲ ದಿನವೇ ಬರೋಬ್ಬರಿ 221 ನಾಮಪತ್ರಗಳು ಸಲ್ಲಿಕೆಯಾಗಿದ್ದವು.












Click it and Unblock the Notifications