ಕೊರೊನಾ ಅವಧಿಯಲ್ಲಿ ಕಾಂಗ್ರೆಸ್ ಈ ರೀತಿ ಮಾಡುತ್ತಿರುವುದು ಇದು 2ನೇ ಬಾರಿ
ಕೊರೊನಾ ಮೊದಲನೇ ಮತ್ತು ಎರಡನೇ ಅಲೆಯನ್ನು ಯಡಿಯೂರಪ್ಪ ಸರಕಾರ ನಿರ್ವಹಿಸುತ್ತಿರುವ ವಿಚಾರದಲ್ಲಿ ಪ್ರತಿಪಕ್ಷಗಳು ಒಂದೇ ಸಮನೆ ಸರಕಾರದ ವಿರುದ್ದ ಕಿಡಿಕಾರುತ್ತಲೇ ಇದ್ದಾರೆ.
ಅದಕ್ಕೆ ಸರಿಯಾಗಿ ಆಕ್ಸಿಜನ್, ಬೆಡ್, ವೆಂಟಿಲೇಟರ್, ಲಸಿಕೆ ಪೂರೈಸುವಲ್ಲಿ ಸರಕಾರವೂ ಏದುಸಿರು ಬಿಡುತ್ತಿದೆ. ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ, ಆರ್ಥಿಕ ಪ್ಯಾಕೇಜ್ ಘೋಷಿಸಿ ಎನ್ನುವ ಕಾಂಗ್ರೆಸ್ ಮತ್ತು ಜೆಡಿಎಸ್ ಒತ್ತಾಯಕ್ಕೆ ಸರಕಾರ ಸೊಪ್ಪು ಹಾಕುತ್ತಿಲ್ಲ.
ಇದಕ್ಕೆ ಅತ್ಯಂತ ಸ್ಪಷ್ಟ ಕಾರಣವೆಂದರೆ ಸರಕಾರದ ಖಜಾನೆ ಬರಿದಾಗಿರುವುದು. ಸದ್ಯಕ್ಕೆ ಐದು ಕೆಜಿ ಅಕ್ಕಿ ಮತ್ತು ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ಬಿಟ್ಟರೆ, ಯಡಿಯೂರಪ್ಪ ಸರಕಾರ ಬೇರೇನೂ ಘೋಷಣೆಯನ್ನು ಮಾಡಿಲ್ಲ.
ರಾಜ್ಯದ ಸಚಿವರುಗಳು ತಮ್ಮ ಒಂದು ವರ್ಷದ ಸಂಬಳವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಇನ್ನು, ಕಾಂಗ್ರೆಸ್ ಶಾಸಕರೆಲ್ಲರೂ ಸೇರಿ ಸರಕಾರಕ್ಕೆ ಲಸಿಕೆ ಖರೀದಿಸಲು ಹಣ ನೀಡಲು ಮುಂದಾಗಿದ್ದಾರೆ. ಕೊರೊನಾ ಅವಧಿಯಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಈ ರೀತಿಯ ಹೆಜ್ಜೆಯನ್ನು ಇಟ್ಟಿದೆ.

ಕ್ಷೇತ್ರಾಭಿವೃದ್ಧಿ ನಿಧಿ
ಲಸಿಕೆ ಖರೀದಿಗಾಗಿ ನೂರು ಕೋಟಿ ರೂಪಾಯಿಗಳನ್ನು ನೀಡಲು ಕೆಪಿಸಿಸಿ ನಿರ್ಧಾರ
ಕಾಂಗ್ರೆಸ್ ಪಕ್ಷ ತಮ್ಮ ಶಾಸಕರು, ಸಂಸದರಿಗೆ ಮಂಜೂರು ಮಾಡುವ
ಕ್ಷೇತ್ರಾಭಿವೃದ್ಧಿ ನಿಧಿಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಲಸಿಕೆ ಖರೀದಿಗಾಗಿ ನೂರು ಕೋಟಿ ರೂಪಾಯಿಗಳನ್ನು ನೀಡಲು ಕೆಪಿಸಿಸಿ ನಿರ್ಧರಿಸಿದೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ ಘೋಷಣೆಯನ್ನು ಮಾಡಿದ್ದಾರೆ.

ನಮಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮತಿ ಬೇಕಾಗಿದೆ
"ಲಸಿಕೆ ತಯಾರಕರಿಂದ ನೇರವಾಗಿ ಲಸಿಕೆಗಳನ್ನು ಸಂಗ್ರಹಿಸಲು 100 ಕೋಟಿ ರೂಪಾಯಿಗಳ ಯೋಜನೆ ರೂಪಿಸಿದ್ದೇವೆ. ಅವುಗಳನ್ನು ಖರೀದಿಸಿ ಕರ್ನಾಟಕದ ಜನರಿಗೆ ನೀಡಲು ಅನುಮತಿ ನೀಡಿ. ರಾಜ್ಯ ಸರಕಾರ ವಿಫಲವಾಗಿರುವುದರಿಂದ ಅದನ್ನು ನಾವೇ ಮಾಡುತ್ತೇವೆ. ನಮಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮತಿ ಬೇಕಾಗಿದೆ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ದುಬಾರಿ ಪ್ರಯಾಣದ ವೆಚ್ಚವನ್ನು ನಿಗದಿ ಪಡಿಸಿ, ವ್ಯಾಪಕ ಟೀಕೆಗೆ ಗುರಿಯಾದ ಸರಕಾರ
ಕಳೆದ ವರ್ಷ ಮೇ ತಿಂಗಳ ಆದಿಯಲ್ಲಿ, ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದವರು ತಮ್ಮತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದರು. ಮೊದಲು ಬಸ್ ವ್ಯವಸ್ಥೆಯನ್ನು ನಿಲ್ಲಿಸಿದ್ದ ಸರಕಾರ, ನಂತರ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಬಸ್ ಸಂಚಾರ ಆರಂಭಿಸಿತ್ತು. ಆದರೆ, ದುಬಾರಿ ಪ್ರಯಾಣದ ವೆಚ್ಚವನ್ನು ನಿಗದಿ ಪಡಿಸಿತು. ಅದೂ, ವ್ಯಾಪಕ ಟೀಕೆಗೆ ಗುರಿಯಾದ ಹಿನ್ನಲೆಯಲ್ಲಿ ಉಚಿತ ಬಸ್ ಸೇವೆಯನ್ನು ಸರಕಾರ ನೀಡಿತ್ತು.

ಕಾಂಗ್ರೆಸ್ ಮುಖಂಡರು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರು
ಆ ವೇಳೆ, ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಕಾಂಗ್ರೆಸ್ ಮುಖಂಡರು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರಯಾಣಿಕರಿಗೆ ಬಸ್ ದರ ನಿಗದಿ ಪಡಿಸಬೇಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಆರ್ಥಿಕ ಕೊರತೆಯಿದ್ದರೆ, ನಮ್ಮ ಪಕ್ಷ ದುಡ್ಡು ಕೊಡುತ್ತದೆ ಎಂದು ಒಂದು ಕೋಟಿ ರೂಪಾಯಿ ಚೆಕ್ ಅನ್ನು ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ನೀಡಲು ಹೋಗಿದ್ದರು. ಆದರೆ, ಬಿಎಸ್ವೈ ಸರಕಾರ ಆ ಚೆಕ್ ಅನ್ನು ತೆಗೆದುಕೊಂಡಿರಲಿಲ್ಲ.












Click it and Unblock the Notifications