Karnataka Assembly Elections 2023: ಬಿಎಸ್ವೈ ನೀಡಿದ ಒಂದು ಹೇಳಿಕೆಗೆ ಕಾಂಗ್ರೆಸ್ 3 ಮರುಪ್ರಶ್ನೆ
ಮೂರು ಪಕ್ಷಗಳ ಚುನಾವಣಾ ಪೂರ್ವಸಿದ್ದತೆಯ ನಡುವೆ ಪ್ರಧಾನಿ ಮೋದಿ ಮತ್ತೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಭಾನುವಾರ (ಮಾರ್ಚ್ 10) ಮಂಡ್ಯದಲ್ಲಿ ರೋಡ್ ಶೋ, ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ, ಐಐಟಿ ಧಾರವಾಡ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ, ಜಯದೇವ ಆಸ್ಪತ್ರೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಹಲವು ಹಾಲಿ ಶಾಸಕರಿಗೆ ಈ ಸಾರಿ ಟಿಕೆಟ್ ಇಲ್ಲ ಎಂದಿರುವ @BSYBJP ಮಾತಿನ ಮರ್ಮವೇನು @BJP4Karnataka?
— Karnataka Congress (@INCKarnataka) March 9, 2023
ಅಸಾಮರ್ಥ್ಯಕ್ಕೆ ಟಿಕೆಟ್ ನಿರಾಕರಣೆಯೇ?
ಸಂತೋಷ್ ಬಣದ ಶಾಸಕರಿಗೆ ಪರೋಕ್ಷ ಎಚ್ಚರಿಕೆಯೇ?
ರಾಜ್ಯದಲ್ಲಿ ನನ್ನನ್ನು ಕಡೆಗಣಿಸಬೇಡಿ ಎಂದು ಸಿಎಂ, ಕಟೀಲ್, ಸಂತೋಷ್ರಿಗೆ ನೀಡಿದ ಸಂದೇಶವೇ?
ಟಿಕೆಟ್ ಹಂಚಿಕೆಯ ಹಕ್ಕು ನನಗೇ ಇರಬೇಕು ಎಂಬ ಹಠವೇ?
ನರೇಂದ್ರ ಮೋದಿಯವರ ಮುಖ ನೋಡಿ ಬಿಜೆಪಿಗೆ ಮತ ಹಾಕಿ ಎಂದು ಸಚಿವ ಆರ್.ಅಶೋಕ್ ಹೇಳಿಕೆಯನ್ನು ನೀಡಿದ್ದರಿಂದ, ರಾಜ್ಯ ಬಿಜೆಪಿ ನಾಯಕರು ಬಹುತೇಕ ಮುಂದಿನ ಚುನಾವಣೆಯಲ್ಲಿ ಮೋದಿಯವರನ್ನೇ ನಂಬಿಕೊಂಡಂತಿದೆ. ಈ ತಿಂಗಳಲ್ಲಿ ಮತ್ತೊಮ್ಮೆ ಮೋದಿಯವರು ಕರ್ನಾಟಕಕ್ಕೆ ಬರಲಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಾಜಿ ಮುಖ್ಯಮಂತ್ರಿ, ಸಂಸದೀಯ ಮಂಡಳಿಯ ಸದಸ್ಯರೂ ಆಗಿರುವ ಯಡಿಯೂರಪ್ಪನವರು ಬಿಜೆಪಿ ಟಿಕೆಟ್ ವಿಚಾರದಲ್ಲಿ ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ಕೆಪಿಸಿಸಿ ಮೂರು ಪ್ರಶ್ನೆಯನ್ನು ಹಾಕಿದೆ. ನಾಲ್ಕಾರು ಹಾಲೀ ಶಾಸಕರಿಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎನ್ನುವ ಮಾತನ್ನು ಯಡಿಯೂರಪ್ಪನವರು ನೀಡಿದ್ದರು.
ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಲಾಗುವುದು ಎನ್ನುವ ಮಾತು ಬಿಜೆಪಿ ಪಡಶಾಲೆಯಲ್ಲಿ ಕೇಳಿ ಬರುತ್ತಿರುವುದು ಒಂದು ಕಡೆಯಾದರೆ, ಎಪ್ಪತ್ತು ವರ್ಷದ ಮೇಲಿನವರಿಗೆ ಟಿಕೆಟ್ ಸಿಗುವುದಿಲ್ಲ ಎನ್ನುವ ಚರ್ಚೆಯೂ ಬಿಜೆಪಿಯಲ್ಲಿ ನಡೆಯುತ್ತಿದೆ. ಹಾಗಾಗಿ, ಚುನಾವಣಾ ಮಂಡಳಿ ಸಮಿತಿಯ ಸದಸ್ಯರೂ ಆಗಿರುವ ಬಿಎಸ್ವೈ ಅವರ ಮಾತಿಗೆ ಟಿಕೆಟ್ ಆಕಾಂಕ್ಷಿಗಳು ತಲೆ ಕೆಡೆಸಿಕೊಂಡಿದ್ದಾರೆ. ಬಿಎಸ್ವೈ ಹೇಳಿಕೆಗೆ ಕಾಂಗ್ರೆಸ್ ಕೇಳಿದ ಮೂರು ಪ್ರಶ್ನೆಗಳು ಹೀಗಿವೆ:
1. ಹಲವು ಹಾಲಿ ಶಾಸಕರಿಗೆ ಈ ಸಾರಿ ಟಿಕೆಟ್ ಇಲ್ಲ ಎಂದಿರುವ @BSYBJP ಮಾತಿನ ಮರ್ಮವೇನು @BJP4Karnataka ? ಅಸಾಮರ್ಥ್ಯಕ್ಕೆ ಟಿಕೆಟ್ ನಿರಾಕರಣೆಯೇ?
ಸ್ಥಳೀಯ ಕಾರ್ಯಕರ್ತರು ಮತ್ತು ಮುಖಂಡರಿಗೆ ಸುಲಭವಾಗಿ ಲಭ್ಯವಿರುವ ಜನಪ್ರತಿನಿಧಿಗಳಿಗೆ ಟಿಕೆಟ್ ನೀಡಬೇಕು ಎನ್ನುವ ಮಾತು ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಜೊತೆಗೆ, ಕ್ಷೇತ್ರದ ಅಭಿವೃದ್ದಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡವರಿಗೆ ಆದ್ಯತೆ ನೀಡಬೇಕು ಮತ್ತು ಇದಕ್ಕೆ ವಯಸ್ಸು ಅಡ್ಡಿಯಾಗಬಾರದು ಎನ್ನುವ ಮಾನದಂಡವನ್ನು ಸಂಘ ಪರಿವಾರ ಹಾಕಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಹಾಗಾಗಿ, ಎಪ್ಪತ್ತು ವರ್ಷ ದಾಡಿದ ಮತ್ತು ಕ್ಷೇತ್ರದ ಅಭಿವೃದ್ದಿಯಲ್ಲಿ ಹಿಂದಿರುವ ಹಾಲೀ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎನ್ನುವ ಚರ್ಚೆ ಬಿಜೆಪಿ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.
2. ಸಂತೋಷ್ ಬಣದ ಶಾಸಕರಿಗೆ ಪರೋಕ್ಷ ಎಚ್ಚರಿಕೆಯೇ? ರಾಜ್ಯದಲ್ಲಿ ನನ್ನನ್ನು ಕಡೆಗಣಿಸಬೇಡಿ ಎಂದು ಸಿಎಂ, ಕಟೀಲ್, ಸಂತೋಷ್ರಿಗೆ ನೀಡಿದ ಸಂದೇಶವೇ?
ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಗುಂಪುಗಳ ನಡುವೆ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯದಂತೆ ಬಿಜೆಪಿಯಲ್ಲೂ ಎರಡು ಬಣಗಳಿವೆ ಎನ್ನುವ ಮಾತು ಜೋರಾಗಿದೆ. ಯಡಿಯೂರಪ್ಪ ಮತ್ತವರ ಬೆಂಬಲಿಗರು ಒಂದು ಕಡೆಯಾದರೆ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಂದು ಕಡೆಯೆಂದು ವಿಪಕ್ಷಗಳು ಆರೋಪಿಸುತ್ತಿದ್ದವು.
3. ಟಿಕೆಟ್ ಹಂಚಿಕೆಯ ಹಕ್ಕು ನನಗೇ ಇರಬೇಕು ಎಂಬ ಹಠವೇ?
ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾರು ಪ್ರಮುಖ ಪಾತ್ರ ವಹಿಸುತ್ತಾರೆ ಎನ್ನುವುದು ಇನ್ನೂ ಸ್ಪಷ್ಟತೆಯಿಂದ ಕೂಡಿಲ್ಲ. ಚುನಾವಣಾ ಸಮಿತಿಯ ಸದಸ್ಯರೂ ಯಡಿಯೂರಪ್ಪ ಆಗಿರುವುದರಿಂದ ಇವರ ಮಾತಿಗೆ ಹೆಚ್ಚಿನ ತೂಕವಿರುತ್ತದೋ ಅಥವಾ ಸರ್ಪ್ರೈಸ್ ಅಭ್ಯರ್ಥಿಗಳನ್ನು ಘೋಷಿಸುವುದನ್ನು ಈ ಹಿಂದೆಯೂ ಬಿಜೆಪಿಯ ವರಿಷ್ಠರು ಮಾಡಿದ ಉದಾಹರಣೆಗಳಿವೆ.
ಹಾಗಾಗಿ, ಕೆಪಿಸಿಸಿಯ ಮೇಲಿನ ಮೂರು ಪ್ರಶ್ನೆಗಳು ಚರ್ಚೆಯನ್ನು ಹುಟ್ಟುಹಾಕುವಂತಿದೆ.












Click it and Unblock the Notifications