ಬಿಎಸ್ವೈಗೆ ಸಿಕ್ತು ಆನೆಬಲ: ಗರಿಗೆದರಿದ ಸಂಪುಟ ವಿಸ್ತರಣೆ, ಸಿಎಂ ಅಂತಿಮ ಪಟ್ಟಿಯಲ್ಲಿ ಈ ಐವರು?
ಶಿವಮೊಗ್ಗದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಯ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಸ್ಟ್ರಾಂಗ್ ಆಗಿದ್ದಾರೆ. ಇದೇ ಹುಮ್ಮಸ್ಸಿನಲ್ಲಿ ಸಂಪುಟ ವಿಸ್ತರಣೆ ಎನ್ನುವ ಗುಮ್ಮದಿಂದ ಹೊರಬರಲು ಸಿಎಂ ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಎಂ ಬದಲಾಗಲಿದ್ದಾರೆ ಎನ್ನುವ ವಿಚಾರ ಬಿಜೆಪಿ ಪಡಶಾಲೆಯಲ್ಲೂ ಚರ್ಚೆಯ ವಿಷಯವಾಗಿದ್ದರೆ, ವಿರೋಧ ಪಕ್ಷಗಳೂ ಇದನ್ನು ಅಸ್ತ್ರವಾಗಿ ಬಳಸಲಾರಂಭಿಸಿದ್ದವು. ಈ ಬಗ್ಗೆ ಪಕ್ಷದ ಉಸ್ತುವಾರಿಯವರು ಕ್ಲಿಯರ್ ಕಟ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕಾರ್ಯಶೈಲಿಯನ್ನು ಮುಕ್ತಕಂಠದಿಂದ ಹೊಗಳುವ ಮೂಲಕ, ಇದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
"ಸಂಪುಟ ವಿಸ್ತರಣೆ ಎನ್ನುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಶೀಘ್ರ ಈ ಕೆಲಸವನ್ನು ಯಡಿಯೂರಪ್ಪನವರು ಕೈಗೆತ್ತಿಕೊಳ್ಲಲಿದ್ದಾರೆ" ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಹಾಗಾಗಿ, ಈ ವಿಚಾರ ಮತ್ತೆ ಗರಿಗೆದರಿದೆ. ಸಂಪುಟ ಪುನರ್ ರಚನೆ ಮಾಡಲು ಬಿಎಸ್ವೈ ಉತ್ಸುಕರಾಗಿದ್ದರೂ, ಸದ್ಯ ವಿಸ್ತರಣೆಯನ್ನು ಮಾಡಲು ಮುಖ್ಯಮಂತ್ರಿ ಸಜ್ಜಾಗಿದ್ದು, ಆ ಪಟ್ಟಿಯಲ್ಲಿ ಐವರ ಹೆಸರು ಇದೆ ಎಂದು ಹೇಳಲಾಗುತ್ತಿದೆ.

ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ
ಪಕ್ಷ ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಯಡಿಯೂರಪ್ಪನವರು ಮತ್ತು ಕೇಂದ್ರದ ವರಿಷ್ಟರಿಂದಲೂ ಉತ್ತಮ ಹೆಸರನ್ನು ಗಳಿಸಿಕೊಂಡಿರುವ, ಬೆಂಗಳೂರು ನಗರ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿಯವರ ಹೆಸರು ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಹಿರಿಯ ಮುಖಂಡರಾಗಿರುವ ಲಿಂಬಾವಳಿಗೆ ಇತ್ತೀಚೆಗೆ ನಡೆದ ಆರ್.ಆರ್.ನಗರ ಉಪಚುನಾವಣೆಯಲ್ಲಿ ಆರ್.ಅಶೋಕ್ ಜೊತೆ ಜವಾಬ್ದಾರಿಯನ್ನು ನೀಡಲಾಗಿತ್ತು.

ಉತ್ತರ ಕರ್ನಾಟಕದ ಭಾಗದ ಪ್ರಬಾವೀ ಮುಖಂಡ ಉಮೇಶ್ ಕತ್ತಿ
ಪಕ್ಷದ ಮತ್ತೋರ್ವ ಹಿರಿಯ ಮುಖಂಡ, ಆವಾಗಾವಾಗ ಮುಖ್ಯಮಂತ್ರಿಯ ಕನಸನ್ನು ಹೊರಹಾಕುತ್ತಿರುವ, ಉತ್ತರ ಕರ್ನಾಟಕದ ಭಾಗದ ಪ್ರಬಾವೀ ಮುಖಂಡ, ಹುಕ್ಕೇರಿ ಶಾಸಕ ಉಮೇಶ್ ಕತ್ತಿಯವರ ಹೆಸರು ಪಟ್ಟಿಯಲ್ಲಿದೆ ಎನ್ನುವ ಸುದ್ದಿಯಿದೆ. ಇವರು ಕೂಡಾ ಬಹಳಷ್ಟು ಬಾರಿ ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದರು.

ರಾಣೆಬೆನ್ನೂರು ಕ್ಷೇತ್ರದ ಮಾಜಿ ಶಾಸಕ ಆರ್.ಶಂಕರ್
ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಸೇರ್ಪಡೆಯಾಗಿರುವ ರಾಣೆಬೆನ್ನೂರು ಕ್ಷೇತ್ರದ ಮಾಜಿ ಶಾಸಕ ಆರ್.ಶಂಕರ್ ಅವರ ಹೆಸರೂ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಉಪಚುನಾವಣೆಯಲ್ಲಿ ಶಂಕರ್ ಬದಲು ಅರುಣ್ ಕುಮಾರ್ ಎನ್ನುವವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದಾದ ನಂತರ ವಿಧಾನ ಪರಿಷತ್ ಮೂಲಕ ಶಂಕರ್ ಸದನಕ್ಕೆ ಆಯ್ಕೆಯಾಗಿದ್ದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ
ಆಪರೇಷನ್ ಕಮಲದ ಮತ್ತೋರ್ವ ಮುಖಂಡ, ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ಹೆಸರು ಕೂಡಾ ಸಿಎಂ ರೆಡಿಮಾಡಿರುವ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ, ಕಾಂಗ್ರೆಸ್ಸಿನ ಪ್ರಬಲ ಪೈಪೋಟಿಯ ನಡುವೆಯೂ ಮುನಿರತ್ನ ಭರ್ಜರಿಯಾಗಿ ಜಯಭೇರಿ ಬಾರಿಸಿದ್ದರು.
Recommended Video

ಹೊಸಕೋಟೆ ಕ್ಷೇತ್ರದ ಮಾಜಿ ಶಾಸಕ ಎಂ.ಟಿ.ಬಿ ನಾಗರಾಜ್
ಹೊಸಕೋಟೆ ಕ್ಷೇತ್ರದ ಮಾಜಿ ಶಾಸಕ ಎಂ.ಟಿ.ಬಿ ನಾಗರಾಜ್ ಅವರ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ ಹೇಗೆ, ಇವರಷ್ಟು ಒತ್ತಡವನ್ನು ಸಿಎಂ ಯಡಿಯೂರಪ್ಪನವರಿಗೆ ಯಾರೂ ಹಾಕಿರಲಿಕ್ಕಿಲ್ಲ. ಇವರ ಹೆಸರು ಕೂಡಾ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಉಪಚುನಾವಣೆಯಲ್ಲಿ ಇವರು ಸೋತ ನಂತರ, ಪರಿಷತ್ತಿಗೆ ಇವರು ಆಯ್ಕೆಯಾಗಿದ್ದರು.












Click it and Unblock the Notifications