ಮುಖ್ಯಮಂತ್ರಿ ಖುರ್ಚಿ ಹಗ್ಗಜಗ್ಗಾಟ: ಮುಂಬರುವ ಲೋಕಸಭಾ ಚುನಾವಣೆ ಮೇಲಿನ ಪರಿಣಾಮವೇನು?
ಬೆಂಗಳೂರು, ನವೆಂಬರ್ 3: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನ ಬದಲಾಗುತ್ತದೆ ಎಂಬ ಊಹಾಪೋಹಗಳ ನಡುವೆ ಕಾಂಗ್ರೆಸ್ ಮೇಲೆ ಇದು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಹುದೊಡ್ಡ ಹೊಡೆತ ನೀಡಲಿದೆ.
ಲೋಕಸಭಾ ಚುನಾವಣೆ ಬಳಿಕ ಇಲ್ಲವೇ ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಮುಂದಿನ 5 ವರ್ಷವೂ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಆದರೆ ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೂ ನೀಡಬೇಕು ಎಂದು ಆಗ್ರಹಗಳು ಕೇಳಿ ಬರುತ್ತಿರುವುದರಿಂದ ಇದಕ್ಕೆ ಅಂತ್ಯ ಹಾಡಲು ಈಗಾಗಲೇ ಕೇಂದ್ರದಿಂದ ಸುರ್ಜೆವಾಲಾ ಹಾಗೂ ವೇಣುಗೋಪಾಲ್ ಬಂದು ಹೋಗಿದ್ದಾರೆ.

ಆದರೆ ಈ ಬೆಳವಣಿಗೆಗೆಗಳು ಕಾಂಗ್ರೆಸ್ಗೆ ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಂತೂ ಅಲ್ಲವೇ ಅಲ್ಲ. ಇನ್ನು ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡುವಿನ ಮುಸುಕಿನ ಗುದ್ದಾಟ ಕಾಂಗ್ರೆಸ್ನಲ್ಲಿ ಬಹುದೊಡ್ಡ ಕಂದಕವನ್ನೇ ಸೃಷ್ಟಿಸಲಿದೆ.
ಈ ಮಧ್ಯೆ ಐಟಿ ಸಚಿವ ಪ್ರಿಯಾಂಕ್ ಖರ್ಗೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರೂ ಹೈಕಮಾಂಡ್ ಸೂಚಿಸಿದರೇ ನಾನೂ ಮುಖ್ಯಮಂತ್ರಿ ಆಗಬಹುದು ಎಂದು ಹೇಳಿದ್ದಾರೆ.ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ಖಾತೆ ಎಚ್ಸಿ ಮಹದೇವಪ್ಪ ಅವರೂ ಕೂಡ ಸಿದ್ದರಾಮಯ್ಯ ಅವರೇ ಪೂರ್ಣವಧಿ ಮುಖ್ಯಮಂತ್ರಿ ಹೇಳಿದ್ದರು.

ಡಿಕೆ ಶಿವಕುಮಾರ್ ಅವರಿಗೆ ಇರುವ ಶಾಸಕ ಬೆಂಬಲದ ಕೊರತೆ ಇದೆ. ಇಂದು ಹುಬ್ಬಳ್ಳಿ ಭೇಟಿ ಸಂದರ್ಭದಲ್ಲಿ ಯಾವೊಬ್ಬ ಶಾಸಕನೂ ಸ್ವಾಗತಕ್ಕೆ ಬಂದಿರಲಿಲ್ಲ, ಶಾಸಕ ಕೋನರೆಡ್ಡಿ ಒಬ್ಬರೇ ಡಿಕೆ ಶಿವಕುಮಾರ್ ಭೇಟಿ ಸಂದರ್ಭ ಹಾಜರಿದ್ದರು. ಈ ಮೂಲಕ ಡಿಕೆ ಶಿವಕುಮಾರ್ಗೆ ಶಾಸಕರ ಬೆಂಬಲದ ಕೊರೆತೆ ಎದ್ದು ಕಂಡಿದೆ. ಸಚಿವ ಸಂತೋಷ್ ಲಾಡ್ ಸಿದ್ದರಾಮಯ್ಯ ಅವರ ಕೋರ್ ಅಭಿಮಾನಿ. ಹೀಗಾಗಿ ಅವರೂ ಡಿಕೆ ಶಿವಕುಮಾರ್ ಬೆಂಬಲ ವ್ಯಕ್ತಪಡಿಸುವುದು ಕಷ್ಟ.
ಕರ್ನಾಟಕ ವಿಧಾನಸಭಾ ಚುನಾವಣೆ ಗೆಲುವಿನ ನಾಗಲೋಟದಲ್ಲಿ ಇರುವ ಕಾಂಗ್ರೆಸ್ ನಾಯಕರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿರುವ ಈ ಒಳಬೇಗುದಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ನಕರಾತ್ಮಕ ಸಂದೇಶ ಹೋಗುತ್ತದೆ. ಬಹುಮುಖ್ಯವಾಗಿ ಮತದಾರರಲ್ಲಿ ವಿಶ್ವಾದ ಗಳಿಸುಲ್ಲಿ ಪಕ್ಷ ವಿಫಲವಾಗುವ ಸಾಧ್ಯತೆ ಹೆಚ್ಚಿದೆ.

ಇಷ್ಟೇಲಾ ಆದರೂ ಡಿಕೆ ಶಿವಕುಮಾರ್ ಮಾತ್ರ ಅಪಾರ ಆತ್ಮಾಭಿಮಾನಿ. ನಾನು ಕಾಂಗ್ರೆಸ್ ಹೈಕಮಾಂಡ್ ಹೇಗೆ ಹೇಳುತ್ತದೆ ಹಾಗೆ ಕೇಳುತ್ತೇನೆ ಎಂದು ಸದ್ಯ ನಡೆಯುತ್ತಿರುವ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅವರು ಇದೆಲ್ಲಾ ಬೇಡ ಎಂದು ಒಮ್ಮೆಯೂ ಹೇಳಿಲ್ಲ. ನಿನ್ನೆ ಅವರ ಆಪ್ತ ರಾಮನಗರ ಶಾಸಕ ಇಕ್ಬಲ್ ಅವರೂ ಕೂಡ ಡಿಕೆ ಶಿವಕುಮಾರ್ ಅವರನ್ನು ನಾವು ಸಿಎಂ ಆಗಿ ನೋಡಲು ಬಯಸುತ್ತೇವೆ ಎಂದು ಹೇಳಿರುವುದು ಸಮಸ್ಯೆ ಹಸಿಯಾಗಿಡುವ ಪ್ರಯತ್ನವಾಗಿದೆ.
ಶುಕ್ರವಾರ ದಲಿತ ಸಿಎಂ ರೇಸ್ನಲ್ಲಿ ಕಣದಲ್ಲಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಕೂಡ ನಾನೂ ಸಿಎಂ ಆಗೋ ಅದೃಷ್ಟ ಆದಷ್ಟು ಬೇಗ ಬರಲಿ ಎಂದು ಆಶಿಸುತ್ತೇನೆ. ನಾನು ಸಹಕಾರ ಸಚಿವ ರಾಜಣ್ಣ ಅವರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದಂತಿದೆ. ಇದು ಖಂಡಿತಾ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ದೃಷ್ಟಿಯಿಂದ ನೆಗೆಟಿವ್ ಇಂಪ್ಯಾಕ್ಟ್ಗೆ ಕಾರಣವಾಗಬಹುದು.












Click it and Unblock the Notifications