ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ; ಮುಂಬೈ ಕರ್ನಾಟಕ ಇನ್ಮುಂದೆ ಕಿತ್ತೂರು ಕರ್ನಾಟಕ!
ಬೆಂಗಳೂರು, ನ. 08: ಉತ್ತರ ಕರ್ನಾಟಕ (ಮುಂಬೈ ಕರ್ನಾಟಕ)ವನ್ನು ಇನ್ಮುಂದೆ ಕಿತ್ತೂರು ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡುವ ಮಹತ್ವದ ನಿರ್ಣಯವನ್ನು ಸೋಮವಾರ ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಬೆಯಲ್ಲಿ ತೆಗೆದುಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಹಾವೇರಿ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಕೊಡುಗೆಯನ್ನೂ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಆಡಳಿತಾತ್ಮಕವಾಗಿಯೂ ಹಲವು ನಿರ್ಧಾರಗಳನ್ನು ಸಿಎಂ ಬೊಮ್ಮಾಯಿ ತೆಗೆದುಕೊಂಡಿದ್ದಾರೆ. ಜೊತೆಗೆ ಬೆಳಗಾವಿಯಲ್ಲಿ ಚಳಿಗಾಲದ ವಿಧಾನ ಮಂಡಲ ಅಧಿವೇಶನ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ಮಹತ್ವದ ತೀರ್ಮಾನಗಳ ಕುರಿತು ಕಾನೂನು ಸಚಿವ ಮಾಧುಸ್ವಾಮಿ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ.
* ಮುಂಬೈ ಕರ್ನಾಟಕದ ಹೆಸರು ಬದಲಾವಣೆ ಮಾಡಿ 'ಕಿತ್ತೂರು ಕರ್ನಾಟಕ'ವೆಂದು ಹೊಸ ನಾಮಕರಣ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ.
* ನಟ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ವಿಚಾರ ಇಂದಿನ ಸಂಪುಟ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ಮಾಹಿತಿ ಕೊಟ್ಟ ಸಚಿವ ಮಾಧುಸ್ವಾಮಿ.
* ನೇಕಾರ ಸಮುದಾಯಕ್ಕೆ ಎಸ್ಸಿ,ಎಸ್ಟಿ ಹಣ ಬಳಕೆ ಮಾಡಿಕೊಳ್ಳಲು ನಿರ್ಧಾರ, ನೇಕಾರ ಸಮುದಾಯಕ್ಕೆ 376 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ.
* ಗಣೀಗಾರಿಕೆ ಮಾಡಲು ಸಂಪುಟದ ಅನುಮತಿ, ಬೃಹತ್ ಗಣಿಗಾರಿಕೆ ಕಂಪನಿಗಳಿಗೆ ಅನುಮತಿ ಕೊಟ್ಟ ರಾಜ್ಯ ಸಚಿವ ಸಂಪುಟ
* ಬಳ್ಳಾರಿ ನಗರದ ರಸ್ತೆ ಅಭಿವೃದ್ಧಿಗೆ ಡಿಎಂಎಫ್ ಫಂಡ್ನಿಂದ 30 ಕೋಟಿ ರೂ. ಹಾಗೂ ಯುಜಿಡಿ ಮಾಡಲು 12 ಕೋಟಿ ರೂಪಾಯಿಗಳ ಬಿಡಗಡೆಗೆ ಸಂಪುಟ ಸಭೆಯಲ್ಲಿ ತೀರ್ಮಾನ.
* ಬಿಟ್ ಕಾಯಿನ್ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಯಾಗಿಲ್ಲ, ಬಿಟ್ ಕಾಯಿನ್ ಕಳ್ಳತನ ಬಗ್ಗೆ ಇ.ಡಿ ತನಿಖೆಗೆ ವಹಿಸಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಆಗ ಸಿಎಂ ಬೊಮ್ಮಾಯಿ ಕಾನೂನು ಸಚಿವರಾಗಿದ್ದರು, ಅವರೇ ನಿಮಗೆ ಉತ್ತರ ಕೊಡುತ್ತಾರೆ ಎಂದ ಕಾನೂನು ಸಚಿವ ಮಾಧುಸ್ವಾಮಿ.
* ಮೇಕೆದಾಟು ಯೋಜನೆ ಜಾರಿ ವಿಚಾರ ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ಆಗಿಲ್ಲ, ಮುಂದಿನ ವಾರ ಅದರ ಬಗ್ಗೆ ಸಭೆ ಮಾಡಿ ನಂತರ ನಿರ್ಧಾರ ತೆಗೆದುಕೊಳ್ಳಲು ಸಂಪುಟದ ತೀರ್ಮಾನ.
* ತವರು ಜಿಲ್ಲೆ ಹಾವೇರಿಗೆ ಸಿಎಂ ಬೊಮ್ಮಾಯಿ ಕೊಡುಗೆ-ಹಾಲು ಒಕ್ಕೂಟ ಮಾಡಲು ಸಂಪುಟದ ಅನುಮತಿ. ಜೊತೆಗೆ ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಹಾಲಿನ ಘಟಕಗಳ ನಿರ್ಮಾಣಕ್ಕೆ ಅನುಮತಿ.
* ನೇರ ನೇಮಕಾತಿ ಗೊಂದಲಕ್ಕೆ ತೆರೆ, ಹುದ್ದೆಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಲು ಸಂಪುಟದ ಒಪ್ಪಿಗೆ.
* 50 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಟೆಂಡರ್ ಕರೆಯಲು ಪಾರದರ್ಶಕ ವ್ಯವಸ್ಥೆ, ಯಾವುದೇ ಇಲಾಖೆ ಟೆಂಡರ್ ಪಡೆಯಲು ಏಕಗವಾಕ್ಷಿ ಪದ್ದತಿ. ಟೆಂಡರ್ ಬಗ್ಗೆ ಗಮನ ಹರಿಸಲು ಅದಕ್ಕೆ ನಿವೃತ್ತ ನ್ಯಾಯಾಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ.
* ದಕ್ಷಿಣ ಕನ್ನಡದಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮಾಡಲು 5 ನೂರು ಕೋಟಿ ರೂ. ಆಡಳಿತಾತ್ಮಕ ಅನುಮೋದನೆಗೆ ಸಂಪುಟದಲ್ಲಿ ತೀರ್ಮಾನ.
* ಸಿರಗುಪ್ಪದಲ್ಲಿ ವೇದಾವತಿಗೆ ಸೇತುವೆ ನಿರ್ಮಾಣಕ್ಕೆ 30 ಕೋಟಿ ರೂಪಾಯಿಗಳ ಬಿಡುಗಡೆಗೆ ಸಂಪುಟದ ಒಪ್ಪಿಗೆ
* ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ 825 ಕೋಟಿ ರೂ. ಹಣ ಬಿಡುಗಡೆ.
* ಅಗರ ಗ್ರಾಮದಲ್ಲಿ ಸ್ವಾನಂದಾಶ್ರಮಕ್ಕೆ ಭೂಮಿ ಮಂಜೂರು.
* ಬೆಂಗಳೂರಿನಲ್ಲಿ ಬಹುಮಹಡಿ ವಸತಿ ಯೋಜನೆಗೆ ರಾಜೀವ್ ವಸತಿ ನಿಗಮಕ್ಕೆ 69 ಎಕರೆ ಭೂಮಿ ಮಂಜೂರು ಮಾಡಲು ಒಪ್ಪಿಗೆ
* ಈ ವರ್ಷ ಒಟ್ಟು 80 ಲಕ್ಷ ಮನೆ ಕಟ್ಟುವ ಗುರಿ ರೂಪಿಸಲು ಸಂಪುಟ ಸಭೆಯಲ್ಲಿ ತೀರ್ಮಾನ.
* ಬೆಳಗಾವಿಯಲ್ಲೇ ಅಧಿವೇಶನ ನಡೆಸುವ ಚರ್ಚೆ, ಅಧಿವೇಶನದ ದಿನಾಂಕ ನಿಗದಿಯಾಗಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ದಿನಾಕ ನಿಗದಿ ಮಾಡಲು ತೀರ್ಮಾನ. (ಬಹುತೇಕ ಡಿಸೆಂಬರ್ 13 ರಿಂದ 24 ರವರೆಗೆ ಅಧಿವೇಶನ ನಡೆಸಲು ಬಹುತೇಕ ತೀರ್ಮಾನ)
* ನೂತನ ಮರಳು ನೀತಿ ಜಾರಿಗೆ ಸಮ್ಮತಿ, ನೂತನ ನೀತಿಯಡಿ ಗ್ರಾಮ ಪಂಚಾಯಿತಿಗೆ ಅಧಿಕಾರ.
* ಒಂದು ಮೆಟ್ರಿಕ್ ಟನ್ ಮರಳಿಗೆ 3 ನೂರು ರೂ. ನಂತೆ ಮಾರಾಟ ಮಾಡಲು ಸಂಪುಟದ ಒಪ್ಪಿಗೆ. ನದಿ ಮರಳಿಗೆ 700 ರೂ ನಿಗದಿ ಮಾಡಿದ ಸಂಪುಟ. ಮರಳು ಮಾರಾಟದ ಶೇಕಡಾ 25ರಷ್ಟು ಹಣವನ್ನು ಆಯಾ ಗ್ರಾ.ಪಂ.ಗಳಿಗೆ ಕೊಡಲು ತೀರ್ಮಾನ.
Recommended Video
* ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳು ತೆಗೆಯಲು ಅವಕಾಶ, ಯಾವುದೇ ಯಂತ್ರಗಳನ್ನು ಉಪಯೋಗಿಸದಂತೆ ಆದೇಶ.