2 ಹಂತದಲ್ಲಿ ಸಂಪುಟ ವಿಸ್ತರಣೆಯಾಯ್ತು, ಸಚಿವ ಸ್ಥಾನ ವಂಚಿತರ ಪಟ್ಟಿ
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಯ ಮೊದಲ ಹಂತ ಕಳೆದ ಆಗಸ್ಟ್ ತಿಂಗಳಿನಲ್ಲಿ ನೆರವೇರಿತ್ತು. ಮೊದಲ ಹಂತದಲ್ಲಿ 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಗುರುವಾರ(ಫೆ.6)ದಂದು ಮತ್ತೊಮ್ಮೆ ಮಾಡಲಾಗಿದ್ದು, ಬಿಜೆಪಿಗೆ ವಲಸೆ ಬಂದು ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ 10 ಮಂದಿ ಶಾಸಕರಿಗೆ ಸಚಿವರಾಗುವ ಯೋಗ ಒಲಿದು ಬಂದಿದೆ. ಆದರೆ, ಮಿಕ್ಕಂತೆ ಸಚಿವ ಸ್ಥಾನ ವಂಚಿತರ ಪಟ್ಟಿ ಮತ್ತೊಮ್ಮೆ ಬೆಳೆದಿದೆ.
ಸಚಿವ ಸ್ಥಾನ ವಂಚಿತ ಮಿಕ್ಕ ನಾಯಕರಿಗೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಅನೇಕ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಮಿಕ್ಕಂತೆ ನಿಗಮ ಮಂಡಳಿ ಸ್ಥಾನ ಭರವಸೆ ಸಿಕ್ಕಿದೆ. ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದಿರುವ ಶಾಸಕರಿಗೆ ಎರಡನೇ ಹಂತದಲ್ಲಿ ಸ್ಥಾನ ಸಿಗಬಹುದು.
ಮೊದಲ ಹಂತದಂತೆ ಎರಡನೇ ಹಂತದಲ್ಲೂ ಒಂದಷ್ಟು ಅಚ್ಚರಿಯ ಹೆಸರುಗಳು ಕೇಳಿ ಬಂದಿತ್ತು. ಈ ಪೈಕಿ ದತ್ತಾತ್ರೇಯ ರೇವೂರ,ಎಸ್.ಎ ರವೀಂದ್ರನಾಥ, ಕುಡಚಿ ರಾಜೀವ್, ಪೂರ್ಣಿಮಾ ಶ್ರೀನಿವಾಸ, ಆಯನೂರು ಮಂಜುನಾಥ್ ಹೆಸರಿಸಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಅಂಗಾರ, ಬಸನಗೌಡ ಪಾಟೀಲ್ ಯತ್ನಾಳ್, ಚಿತ್ರದುರ್ಗ ಜಿಲ್ಲೆಯ ತಿಪ್ಪಾರೆಡ್ಡಿ, ಹಾಲಪ್ಪ ಆಚಾರ್, ಸಿಪಿ ಯೋಗೇಶ್ವರ್ ಹೆಸರು ಈ ಬಾರಿ ಕೇಳಿ ಬಂದಿತ್ತು.
ಮಿಕ್ಕಂತೆ ಉಮೇಶ್ ಕತ್ತಿ, ವೀರಣ್ಣ ಚರಂತಿಮಠ, ಸಿದ್ದು ಸೌದಿ, ಬಸವನಗೌಡ ಪಾಟೀಲ ಯತ್ನಾಳ, ಮುರಗೇಶ್ ನಿರಾಣಿ, ಬಾಲಚಂದ್ರ ಜಾರಕಿಹೊಳಿ, ಅರವಿಂದ ಲಿಂಬಾವಳಿ ಹೆಸರು ಎರಡು ಬಾರಿ ಕೇಳಿ ಬಂದರೂ ವೇದಿಕೆ ತನಕ ತಲುಪಲಿಲ್ಲ.

ಚುನಾವಣೆಯಲ್ಲಿ ಸೋಲು ಕಂಡವರು
ಮಹೇಶ್ ಕುಮಟಳ್ಳಿ ಅವಕಾಶ ವಂಚಿತರಾಗಿದ್ದಾರೆ. ಇನ್ನು ಉಪ ಚುನಾವಣೆಯಲ್ಲಿ ಸೋಲು ಕಂಡಿರುವ ಎಚ್ ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡದಂತೆ ಹೈಕಮಾಂಡ್ ಸೂಚಿಸಿತ್ತು. ಅದರಂತೆ ಯಡಿಯೂರಪ್ಪ ನಡೆದುಕೊಂಡಿದ್ದಾರೆ. ಪಕ್ಷೇತರರಾಗಿರುವ ಆರ್ ಶಂಕರ್ ಅವರು ಎಂಎಲ್ಸಿ ಆದ ಬಳಿಕ ಸಚಿವ ಸ್ಥಾನ ಸಿಗುವ ಭರವಸೆ ಸಿಕ್ಕಿದೆ. ಇನ್ನು ಖಾತೆ ಹಂಚಿಕೆ ಪ್ರಕ್ರಿಯೆ ಬಗ್ಗೆ ಹೈಕಮಾಂಡ್ ಜೊತೆ ಬಿಎಸ್ವೈ ಇನ್ನೊಂದು ಸುತ್ತಿನ ಮಾತುಕತೆ ನಡೆಸುವುದು ಅನಿವಾರ್ಯವಾಗಲಿದೆ.

ಮೊದಲ ಹಂತದಲ್ಲಿ ಸಚಿವ ಸ್ಥಾನ ವಂಚಿತ ಪಟ್ಟಿ
ಉಮೇಶ್ ಕತ್ತಿ ಬಾಲಚಂದ್ರ ಜಾರಕಿಹೊಳಿ ಎಂ.ಪಿ ರೇಣುಕಾಚಾರ್ಯ ಎಸ್ಎ ರಾಮದಾಸ್ ರಾಜೂ ಗೌಡ ಗೂಳಿಹಟ್ಟಿ ಶೇಖರ್ ಎಂಪಿ ಕುಮಾರಸ್ವಾಮಿ ಅರವಿಂದ ಲಿಂಬಾವಳಿ ಕೆಜಿ ಬೋಪಯ್ಯ ಅಪ್ಪಚ್ಚು ರಂಜನ್ ಎಸ್ ಆರ್ ವಿಶ್ವನಾಥ್ ಸುನಿಲ್ ಕುಮಾರ್ ರಘುಪತಿ ಭಟ್ ಹಾಲಾಡಿ ಶ್ರೀನಿವಾಸ ಶೆಟ್ಟಿ ಅರಗ ಜ್ಞಾನೇಂದ್ರ ಕೆಸಿ ತಿಪ್ಪಾರೆಡ್ಡಿ

ಬಿಸಿ ಪಾಟೀಲ್ ಗೆ ಬಂಪರ್
ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿ. ಸಿ ಪಾಟೀಲ್ ಅವರು ಸಚಿವರಾಗುವ ಮೂಲಕ 37 ವರ್ಷಗಳ ಬಳಿಕ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ಒಲಿದಿದೆ.
ಎಸ್ ಟಿ ಸೋಮಶೇಖರ್, ಕೆ ಸುಧಾಕರ್, ಬೈರತಿ ಬಸವರಾಜು, ಶಿವರಾಮ ಹೆಬ್ಬರ್, ಬಿ.ಸಿ ಪಾಟೀಲ್, ಗೋಪಾಲಯ್ಯ, ನಾರಾಯಣ ಗೌಡ ಅವರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಮೊದಲ ಪ್ರಯತ್ನದಲ್ಲೇ ಶಾಸಕ ಹಾಗೂ ಸಚಿವರಾಗಿ ಶ್ರೀಮಂತ ಪಾಟೀಲ್ ಕಾಣಿಸಿಕೊಂಡಿದ್ದಾರೆ.
3ನೇ ಹಂತದ ವಿಸ್ತರಣೆ ಯಾವಾಗ
3ನೇ ಹಂತದ ವಿಸ್ತರಣೆ ಜೂನ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆಯಿದೆ. ಹಾಲಿ ಸಚಿವ ಮೌಲ್ಯ ಮಾಪನ ಕೂಡಾ ಆಗಲಿದ್ದು, ಕಳಪೆ ಸಾಧನೆ ಮಾಡಿದವರಿಗೆ ಕೊಕ್ ನೀಡುವ ಸಾಧ್ಯತೆ ಹೆಚ್ಚಿದೆ. ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ ಉಳಿಸಿಕೊಂಡಿದ್ದಾರೆ. ಅತೃಪ್ತರಾಗಿ ಅನರ್ಹರಾಗಿ, ಮುಂದೆ ಬಿಜೆಪಿ ಸೇರಿದ ನೂತನ ಶಾಸಕರಿಗೆ ಈ ಖಾತೆಗಳು ಮೀಸಲಾಗಿಡಲಾಗಿದೆ. ಇಂಧನ, ಜಲಸಂಪನ್ಮೂಲ, ಕೃಷಿ, ರೇಷ್ಮೆ, ತೋಟಗಾರಿಕೆ, ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ, ಅರಣ್ಯ, ಸಹಕಾರ, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಪೌರಾಡಳಿತ, ಹಣಕಾಸು, ವೈದ್ಯಕೀಯ ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಮೂಲಸೌಕರ್ಯ, ಆಹಾರ, ಕಾರ್ವಿುಕ, ಕೌಶಲಾಭಿವೃದ್ಧಿ, ಕಾರ್ವಿುಕ, ಅಲ್ಪಸಂಖ್ಯಾತ ಕಲ್ಯಾಣ, ಡಿಪಿಎಆರ್, ಗುಪ್ತವಾರ್ತೆ ಖಾತೆ ಸಿಎಂ ಬಳಿಯಿವೆ.












Click it and Unblock the Notifications