ಸಿಎಂ ಜೊತೆ ಚರ್ಚೆಯ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಪ್ರಲ್ಹಾದ್ ಜೋಶಿ
ಬೆಂಗಳೂರು, ಅಕ್ಟೋಬರ್ 25: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಹೇಳಿರುವಾಗ ಅನಗತ್ಯ ಗೊಂದಲ ಬೇಡ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, ಸಮಯ ಬಂದಾಗ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸಲು ದೆಹಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಸ್ವತಃ ಬೊಮ್ಮಾಯಿ ಅವರೇ ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸಲು ದೆಹಲಿಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ.
ಬೊಮ್ಮಾಯಿ ಅವರು ದೆಹಲಿಗೆ ಬಂದಾಗ ಎಲ್ಲ ನಾಯಕರು ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ತೇವೆ ಎಂದು ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದರು.
ದೀಪಾವಳಿ ಬಳಿಕ ಸಿಎಂ ದೆಹಲಿಗೆ ಬರುವುದಾಗಿ ನನಗೆ ತಿಳಿಸಿದ್ದಾರೆ. ಹೀಗಿರುವಾಗ ಸಂಪುಟ ವಿಸ್ತರಣೆ ಬಗ್ಗೆ ಯಾರು ಗೊಂದಲಪಡುವ ಅಗತ್ಯವಿಲ್ಲ. ಸಮಯ ಬಂದಾಗ ಸಂಪುಟ ವಿಸ್ತರಣೆ ಆಗಲಿದೆ ಎಂದರು.
ನಾಡಿನ ಜನತೆಗೆ ದೀಪಾವಳಿಯ ಶುಭಾಶಯ ಕೋರಿದ ಸಚಿವರು, ನಾಳೆಯಿಂದ ಕಾರ್ತೀಕ ಮಾಸ ಆರಂಭವಾಗಲಿದೆ. ಸಮಾಜದಲ್ಲಿ ಕತ್ತಲು ಸಂಪುರ್ಣವಾಗಿ ನಿವಾರಣೆಯಾಗಿ ಎಲ್ಲರ ಬಾಳಲ್ಲಿ ಬೆಳಕು ಮೂಡಲಿ ಎಂದು ಪ್ರಲ್ಹಾದ್ ಜೋಶಿ ಇದೇ ವೇಳೆ ಆಶಯ ವ್ಯಕ್ತಪಡಿಸಿದರು.
ಕತ್ತಲಿನಿಂದ ಬೆಳಕಿನತ್ತ ಸಾಗುವುದೇ ದೀಪಾವಳಿಯ ಹಬ್ಬದ ವಿಶೇಷ. ದೇಶದ ಜನರ ಕಲ್ಯಾಣಕ್ಕಾಗಿ ಅಯೋದ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಪರೂಪದ ಕಾರ್ಯಕ್ರಮ ನೆರವೇರಿಸಿದ್ದಾರೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಕೇಂದ್ರ ಸಚಿವ ಜೋಶಿ ದೀಪಾವಳಿಯ ಶುಭಕೋರಿದರು.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಏಳೆಂಟು ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ಕೆಲ ಊಹಾಪೋಹಗಳು ಕೇಳಿಬಂದಿವೆ. ಕಳಂಕಿತರಾದ ಕೆ.ಎಸ್.ಈಶ್ವರಪ್ಪ ಹಾಗೂ ರಮೇಶ ಜಾರಕಿಹೊಳಿ ಅವರೂ ಸಚಿವ ಸ್ಥಾನಕ್ಕೆ ಲಾಭಿ ಮಾಡುತ್ತಿದ್ದಾರೆ ಎಂಬ ಮಾತುಗಳೂ ದಟ್ಟವಾಗಿವೆ.