ಹುಣಸೂರು ಗೆಲುವಿನ ಮೂಲಕ ಸಿದ್ದರಾಮಯ್ಯ ಸಾಧಿಸಲು ಹೊರಟಿದ್ದು ಎರಡು
'ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ ಎನ್ನುವ ಮಾತಿನಂತೆ', ಇದೇ ರೀತಿಯ ಉಪಚುನಾವಣಾ ಫಲಿತಾಂಶವನ್ನು ಕಾಂಗ್ರೆಸ್ಸಿನ ಕೆಲವು ಮುಖಂಡರು ಬಯಸಿದ್ದರೇ ಎನ್ನುವ ಪ್ರಶ್ನೆಗೆ ಬಹಿರಂಗವಾಗಿ ಸ್ಪಷ್ಟ ಉತ್ತರ ಸಿಗುಲಾರದು.
ಆದರೆ, ಒಂದು ವೇಳೆ, ಬಿಜೆಪಿಗೆ ನಿರೀಕ್ಷಿತ ಸ್ಥಾನ ಸಿಗದೇ ಇದ್ದಲ್ಲಿ, ಮತ್ತೆ 'ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ' ಎನ್ನುವ ರಗಳೆ ಕೆಲವೊಂದು ಕಾಂಗ್ರೆಸ್ ಮುಖಂಡರಿಗೆ ಬೇಕಾಗಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ. ಅದು, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗಲೇ ಹಲವು ಬಾರಿ ರುಜುವಾತಾಗಿತ್ತು.
ಉಪಚುನಾವಣೆಯಲ್ಲಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೆಲ್ಲಲೇಬೇಕೆಂದು ಹಠ ಸಾಧಿಸಿದ ಕ್ಷೇತ್ರವೆಂದರೆ ಅದು ಹುಣಸೂರು. ಅದಕ್ಕೆ ಕಾರಣ, ಅಲ್ಲಿನ ಪ್ರತಿಸ್ಪರ್ಧಿ, ತನ್ನ ವಿರೋಧಿ, ಎಚ್. ವಿಶ್ವನಾಥ್ ಎನ್ನುವುದಕ್ಕಿಂತ, ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದು ತಮ್ಮ ಪರಮಾಪ್ತ ಡಾ.ಎಚ್.ಸಿ.ಮಹಾದೇವಪ್ಪ.
ಒಂದರ್ಥದಲ್ಲಿ ರಾಜ್ಯ ರಾಜಕೀಯವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋದರೆ, ಸಿದ್ದರಾಮಯ್ಯನವರು ಏನು ಬಯಸುತ್ತಿದ್ದಾರೋ, ಅದೇ ದಿಕ್ಕಿನಲ್ಲಿ ರಾಜಕಾರಣ ಸಾಗುತ್ತಿದೆ. ಉಪಚುನಾವಣೆಯಲ್ಲಿ ಬಿಜೆಪಿಗೆ ಸರಳ ಬಹುಮತಕ್ಕೆ ಬೇಕಾದ ಸ್ಥಾನ ಸಿಗದೇ ಹೋಗುವುದು, ಮತ್ತೆ ಆಪರೇಷನ್ ಕಮಲ, ಜೆಡಿಎಸ್ ಜೊತೆ ಕೈಜೋಡಿಸುವ ಯಾವ ತಲೆನೋವೂ ಸಿದ್ದರಾಮಯ್ಯನವರಿಗೆ ಬೇಕಾದಂತಿಲ್ಲ ಎನ್ನುವುದು ಅವರ ಆಪ್ತವಲಯದಲ್ಲಿ ಕೇಳಿಬರುತ್ತಿರುವ ಮಾತು.

ಮೂರುವರೆ ವರ್ಷ ವಿರೋಧ ಪಕ್ಷದ ನಾಯಕ
ಉಳಿದ ಮೂರುವರೆ ವರ್ಷ ವಿರೋಧ ಪಕ್ಷದ ನಾಯಕನಾಗಿಯೇ ರಾಜ್ಯ ಸುತ್ತಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು, ಮತ್ತೆ ಐದು ವರ್ಷ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆಯನ್ನು ಏನು ಸಿದ್ದರಾಮಯ್ಯ ಹೊಂದಿದ್ದಾರೋ, ಅದೇ ದಿಕ್ಕಿನಲ್ಲಿ ಕಾಂಗ್ರೆಸ್ ರಾಜಕೀಯ ಸಾಗುತ್ತಿದೆ.

ದಿನೇಶ್ ಗುಂಡೂರಾವ್ ಕಾರ್ಯಕ್ಷಮತೆಯ ಬಗ್ಗೆ ಬೇಸರ
ಇನ್ನೊಂದು ಕಡೆ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ತನ್ನ ಆಪ್ತ ಇರಬೇಕು ಎನ್ನುವ ಗುರಿಯನ್ನು ಏನು ಸಿದ್ದರಾಮಯ್ಯ ಹೊಂದಿದ್ದಾರೋ, ಅದಕ್ಕೆ ಇನ್ನಷ್ಟು ಬಲ ತುಂಬಿರುವುದು ಹುಣಸೂರು ಕ್ಷೇತ್ರದ ಗೆಲುವು. ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅವರ ಸಾಧನೆ ಏನು ಎಂದರೆ, ಅದಕ್ಕೆ ಕಾಂಗ್ರೆಸ್ ಆಪ್ತವಲಯದಲ್ಲಿ ಆಶಾದಾಯಕ ಉತ್ತರ ಸಿಗುವುದು ಡೌಟು. ಯಾಕೆಂದರೆ ಅವರ ಕಾರ್ಯಕ್ಷಮತೆಯ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡರಿಗೆ ಬೇಸರ ಇರುವುದು ಗೌಪ್ಯವಾಗಿಯೇನೂ ಉಳಿದಿಲ್ಲ.

ಹುಣಸೂರು ಕ್ಷೇತ್ರದ ಜವಾಬ್ದಾರಿ ವಹಿಸಿಕೊಂಡಿದ್ದ, ಮಾಜಿ ಲೋಕೋಪಯೋಗಿ ಸಚಿವ ಮಹಾದೇವಪ್ಪ
ಹುಣಸೂರು ಕ್ಷೇತ್ರದ ಜವಾಬ್ದಾರಿ ವಹಿಸಿಕೊಂಡಿದ್ದ, ಮಾಜಿ ಲೋಕೋಪಯೋಗಿ ಸಚಿವ ಮಹಾದೇವಪ್ಪ ಪಾದರಸದಂತೆ ಕ್ಷೇತ್ರದಲ್ಲಿ ಸಂಚರಿಸಿ, ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷದ ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. Actully, ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಅಷ್ಟು ಸುಲಭದ ಮಾತಾಗಿರಲಿಲ್ಲ. ಯಾಕೆಂದರೆ, ಅಲ್ಲಿ ಜೆಡಿಎಸ್ ಕೂಡಾ ಪ್ರಬಲವಾಗಿರುವುದರಿಂದ, ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.

ಮಹಾದೇವಪ್ಪ ಅವರ ಸಂಘಟನಾತ್ಮಕ ಶಕ್ತಿ
ಆದರೆ, ಸರಿಯಾದ ರಣತಂತ್ರ ರೂಪಿಸಿದರೆ ಗೆಲುವು ಅಸಾಧ್ಯವಲ್ಲ ಎನ್ನುವುದನ್ನು ಮಹಾದೇವಪ್ಪ ನಿರೂಪಿಸಿದರು. ಈ ಜಾಣ ರಣತಂತ್ರ, ಕಾರ್ಯಕರ್ತರ ವಿಶ್ವಾಸವನ್ನು ಪಡೆದುಕೊಂಡ ರೀತಿ, ಜೊತೆಗೆ, ಮಹಾದೇವಪ್ಪ ಅವರ ಸಂಘಟನಾತ್ಮಕ ಶಕ್ತಿ, ಅವರನ್ನು ಕೆಪಿಸಿಸಿ ಅಂಗಣದಲ್ಲಿ ತಂದು ನಿಲ್ಲಿಸಿರುವುದಂತೂ ಹೌದು. ಸಿದ್ದರಾಮಯ್ಯ ಅಕ್ಷರಸಃ ಬಯಸಿದ್ದೂ ಇದನ್ನೇ...

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೂಗು
ಉಪಚುನಾವಣೆಯ ಫಲಿತಾಂಶ ಹೊರಬಿದ್ದಿರುವ ಈ ಸಂದರ್ಭದಲ್ಲಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೂಗು ಆರಂಭವಾಗಬಹುದು. ಇಂತಹ ಸಂದರ್ಭದಲ್ಲಿ,, ದಲಿತ ಸಮುದಾಯದ ಮಹಾದೇವಪ್ಪ ಅವರನ್ನು ಮಂಚೂಣಿಗೆ ತಂದು ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಕೂರಿಸುವುದು ಸಿದ್ದರಾಮಯ್ಯನವರ ಗುರಿ ಎಂದು ಹೇಳಲಾಗುತ್ತಿದೆ.

ಬರೀ ಕಾಂಗ್ರೆಸ್ಸಿನ ಗೆಲುವಲ್ಲ, ಮಹಾದೇವಪ್ಪನವರ ಮೂಲಕ ಸಿದ್ದರಾಮಯ್ಯನವರು ಸಾಧಿಸಿದ ಗೆಲುವು
ಹಾಗಾಗಿ, ಹುಣಸೂರು ಕ್ಷೇತ್ರದ ಗೆಲುವು, ಅದು ಬರೀ ಕಾಂಗ್ರೆಸ್ಸಿನ ಗೆಲುವಲ್ಲ, ಮಹಾದೇವಪ್ಪನವರ ಮೂಲಕ ಸಿದ್ದರಾಮಯ್ಯನವರು ಸಾಧಿಸಿದ ಗೆಲುವು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮೇಲ್ನೋಟಕ್ಕೆ, ತನ್ನ ವಿರೋಧಿ ಎಚ್.ವಿಶ್ವನಾಥ್ ಅವರನ್ನು ಸೋಲಿಸಿದ್ದು, ಇನ್ನೊಂದು, ತನ್ನಾಪ್ತನನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಕೂರಿಸುವಲ್ಲಿ ಇನ್ನೊಂದು ಮೆಟ್ಟಲೇರಿದ್ದು..












Click it and Unblock the Notifications