Get Updates
Get notified of breaking news, exclusive insights, and must-see stories!
Live

Karnataka By-Election Results 2024 Live: ಶಿಗ್ಗಾವಿ, ಚನ್ನಪಟ್ಟಣ, ಸಂಡೂರಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು

ಬೆಂಗಳೂರು, ನವೆಂಬರ್ 23: ಕರ್ನಾಟಕದ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಮೂರು ವಿಧಾನಸಭಾ ಕ್ಷೇತ್ರಗಳಿಗೆ 2024ರ ನವೆಂಬರ್ 13ರಂದು ನಡೆದಿದೆ. ಇಂದು ನೆವೆಂಬರ್ 23ರಂದು ಶನಿವಾರ ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಕಾಂಗ್ರೆಸ್ ಪಕ್ಷ ತೀವ್ರ ಪೈಪೋಟಿ ಒಡ್ಡಿದ್ದು, ಯಾರಿಗೆ ಅಧಿಕಾರ ಸಿಗಲಿದೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳುತ್ತದೆ.

ಚನ್ನಪಟ್ಟಣದಲ್ಲಿ ಅತ್ಯಧಿಕ ಮತದಾನ 88.80% ರಷ್ಟು ಮತದಾನ ನಡೆದರೆ, ಶಿಗ್ಗಾವಿಯಲ್ಲಿ 80.48%ರಷ್ಟು ಹಾಗೂ ಸಂಡೂರಿನಲ್ಲಿ 76.24ರಷ್ಟು ಮತದಾನ ನಡೆದಿದೆ. ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಿಪಿ ಯೋಗೇಶ್ವರ (ಚನ್ನಪಟ್ಟಣ), ಭರತ್ ಬೊಮ್ಮಾಯಿ ವಿರುದ್ಧ ಯಾಸಿರ್ ಖಾನ್ ಪಠಾಣ್ (ಶಿಗ್ಗಾವಿ), ಬಂಗಾರು ಹನುಮಂತು ವಿರುದ್ಧ ಅನ್ನಪೂರ್ಣ (ಸಂಡೂರು) ಸ್ಪರ್ಧಿಸಿದ್ದಾರೆ. ಮತದಾರರು ಯಾರಿಗೆ ಅಧಿಕಾರ ನೀಡಲಿದ್ದಾರೆ ಎಂದು ಇಂದು ತಿಳಿಯಲಿದೆ. ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗೆ 'ಒನ್ ಇಂಡಿಯಾ ಕನ್ನಡ' ವೀಕ್ಷಿಸಬಹುದು.

Karnataka By Election Results 2024 Live Updates in Kannada  Channapatna Shiggaon Sandur

Nov 24, 2024, 11:23 am IST

ಚನ್ನಪಟ್ಟಣದಲ್ಲಿ‌ ಕಾಂಗ್ರೆಸ್‌ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಿ.ಪಿ.ಯೋಗೇಶ್ವರ್‌ ಪತ್ನಿ ಅವರಿಂದು ಮದ್ದೂರಿನ ಹೊಳೆ ಆಂಜನೇಯ ದೇಗುಲಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ
Nov 24, 2024, 1:07 am IST

ನಿಖಿಲ್ ಸೋಲಿನಿಂದಾಗಿ ರಾಮನಗರದಲ್ಲಿ ಜೆಡಿಎಸ್ ಬಲ ಸಂಪೂರ್ಣ ಇಲ್ಲವಾಗಿದೆ. ಸದ್ಯ ದೇವೇಗೌಡರ ಕುಟುಂಬಕ್ಕೆ ಕಾಂಗ್ರೆಸ್ ಗೇಟ್ ಪಾಸ್ ನೀಡಿದೆ. ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗುವ ಮೂಲಕ ಹಿಡಿತ ಸಾಧಿಸಿದೆ.
Nov 24, 2024, 12:17 am IST

ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿದ ಸಿ.ಪಿ.ಯೋಗೇಶ್ವರ್‌ ಅವರನ್ನು ಸಚಿವ ಸಂತೋಷ್‌ ಲಾಡ್‌ ಹೂಗುಚ್ಛ ನೀಡಿ ಅಭಿನಂದಿಸಿದರು.
Nov 23, 2024, 10:59 pm IST

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ವಿವರ

ಶಿಗ್ಗಾಂವಿ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಯಾಸಿರ್ ಅಹ್ಮದ್‌ಖಾನ್‌ ಒಟ್ಟು 1,00,756 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಭರತ್‌ ಬೊಮ್ಮಾಯಿ ಅವರನ್ನು 13,448 ಮತಗಳ ಅಂತದಲ್ಲಿ ಸೋಲಿಸಿದ್ದಾರೆ. ಮತಗಳ ವಿವರ: ಪಠಾಣ್ ಯಾಸಿರ್ ಅಹ್ಮದ್‌ಖಾನ್‌- 1,00,756 ಭರತ್‌ ಬೊಮ್ಮಾಯಿ- 87,308 ಅಂತರ- 13,448
Nov 23, 2024, 10:42 pm IST

ಸಂಡೂರು ವಿಧಾನಸಭಾ ಕ್ಷೇತ್ರದ ವಿವರ

ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಈ ತುಕಾರಾಮ್ ಗೆಲುವು ಸಾಧಿಸಿದ್ದಾರೆ. ಅನ್ನಪೂರ್ಣ ಈ ತುಕಾರಾಮ್ 93,616 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿಯ ಬಂಗಾರು ಹನುಮಂತು ಅವರನ್ನು 9,649 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮತಗಳ ವಿವರ: ಅನ್ನಪೂರ್ಣ ಈ ತುಕಾರಾಮ್-93,616 ಬಂಗಾರು ಹನುಮಂತು- 83,967 ಅಂತರ- 9,649- Live
Nov 23, 2024, 10:26 pm IST

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವಿವರ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. 20 ಸುತ್ತಿನಲ್ಲಿ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯೋಗೇಶ್ವರ್‌ ಒಟ್ಟು 1,12,642 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಸಾಧಿಸಿದ್ದಾರೆ. ಈ ಮೂಲಕ 25,413 ಮತಗಳ ಅಂತರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಗೆ ಮತ್ತೊಮ್ಮೆ ಸೋಲುಣಿಸಿದ್ದಾರೆ. ಮತಗಳ ವಿವರ: ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್- 1,12,642 ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ-87,229 ಅಂತರ- 25,413
Nov 23, 2024, 9:53 pm IST

ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಕೆಲಸಗಳು ಹಾಗೂ ಜನಪರ ಆಡಳಿತವನ್ನು ಬೆಂಬಲಿಸುವ ಮೂಲಕ ರಾಜ್ಯದ ಸರ್ವತೋಮುಖದ ಅಭಿವೃದ್ಧಿಗೆ ಮತ ನೀಡಿರುವುದು ಖುಷಿಯ ಸಂಗತಿ. ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಿ, ಯಾಸೀರ್ ಅಹಮದ್ ಖಾನ್ ಪಠಾಣ್ ಅವರಿಗೆ ಮತ ನೀಡಿದ ಶಿಗ್ಗಾಂವಿ-ಸವಣೂರು ಕ್ಷೇತ್ರದ ಸಮಸ್ತ ಜನತೆಗೆ ತುಂಬು ಹೃದಯದ ಧನ್ಯವಾದಗಳು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ.
Nov 23, 2024, 9:18 pm IST

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಜನತೆಯ ಬೆಂಬಲ ಹೆಚ್ಚಾಗಿದೆ ಎಂಬುದಕ್ಕೆ ಇಂದಿನ ಉಪಚುನಾವಣೆಯ ಫಲಿತಾಂಶಗಳೇ ಸಾಕ್ಷಿ. ಶಿಗ್ಗಾಂವಿ-ಸವಣೂರ, ಸಂಡೂರು, ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂರೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿ, ವಿಧಾನಸಭೆಗೆ ಪ್ರವೇಶಿಸಿರುವ ನಮ್ಮ ಅಭ್ಯರ್ಥಿಗಳಾದ ಯಾಸಿರ್‌ ಅಹ್ಮದ್‌ ಖಾನ್‌ ಪಠಾಣ್‌, ಅನ್ನಪೂರ್ಣ ತುಕಾರಾಮ್‌ ಹಾಗೂ ಸಿ.ಪಿ. ಯೋಗೇಶ್ವರ್‌ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು. ಗ್ಯಾರಂಟಿ ಸರ್ಕಾರದ ಗೆಲುವು ಮುಂದುವರಿಯುತ್ತಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.
Nov 23, 2024, 8:58 pm IST

ಸಿದ್ದರಾಮಯ್ಯ ನಾಡು ಕಂಡ ಅಪರೂಪದ ನಾಯಕ, 40 ವರ್ಷ ನಿಷ್ಕಳಂಕ ರಾಜಕಾರಣ ಮಾಡಿದ ಮುತ್ಸದ್ಧಿ. ಆದರೆ, ಅವರ ಹೆಸರಿಗೆ ಕಳಂಕ ತರಲು ಅನಗತ್ಯವಾಗಿ ಮುಡಾ ವಿಷಯ ಮುನ್ನೆಲೆಗೆ ತಂದ ಪ್ರತಿಪಕ್ಷಗಳ ನಡೆಗೆ ಜನಾಕ್ರೋಶ ಮೂರು ಉಪ ಚುನಾವಣೆಯಲ್ಲಿ ಹೊರಬಿದ್ದಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದ್ದಾರೆ
Nov 23, 2024, 8:11 pm IST

ಉಪ ಚುನಾವಣೆಯಲ್ಲಿ ಜನ ಆಡಳಿತಾರೂಢ ಪಕ್ಷಕ್ಕೆ ಜೈಕಾರ ಹಾಕುವುದು ಸಹಜ. ಜೊತೆಗೆ ರಾಜ್ಯದಲ್ಲಿ ಹಣ, ಹೆಂಡ ಮತ್ತು ಸರ್ಕಾರಿ ಮಶಿನರಿಗಳ ಅವ್ಯಾಹತ ಬಳಕೆ ಈ ಫಲಿತಾಂಶಕ್ಕೆ ಕಾರಣ ಎಂದು ಕರ್ನಾಟಕದ ಉಪಚುನಾವಣೆ ಫಲಿತಾಂಶದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರತಿಕ್ರಿಯಿಸಿದ್ದಾರೆ.
Nov 23, 2024, 8:04 pm IST

ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ, ಸಿಪಿ ಯೋಗೇಶ್ವರ್ ಕ್ಷೇತ್ರದಲ್ಲಿ ಬಹಳ ಶ್ರಮ ಪಟ್ಟಿದ್ದಾರೆ. ಡಿಕೆ ಶಿವಕುಮಾರ್ ಜೊತೆ ಎರಡು ವಾರ ಕೆಲಸ ಮಾಡಿದ್ದಾರೆ ಅವರ ಬದ್ಧತೆ ಅನುಕರಣೀಯವಾಗಿದೆ. ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ನಾಯಕರು ಇಲ್ಲಸಲ್ಲದ ಆರೋಪದ ನಡುವೆಯು ಈ ಚುನಾವಣೆಯು ಸಿದ್ದರಾಮಯ್ಯ ಅಹಿಂದದ ಪ್ರಶ್ನಾತೀತ ನಾಯಕ ಮತ್ತು ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
Nov 23, 2024, 7:29 pm IST

ಚನ್ನಪಟ್ಟಣ, ಶಿಗ್ಗಾಂವ್ ಮತ್ತು ಸಂಡೂರು ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಶ್ರೀ ಸಿ.ಪಿ.ಯೋಗೇಶ್ವರ್, ಶ್ರೀ ಪಠಾಣ್ ಯಾಸಿರ್ ಮತ್ತು ಶ್ರೀಮತಿ ಅನ್ನಪೂರ್ಣ ತುಕಾರಾಂ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಭರ್ಜರಿ ಫಲಿತಾಂಶವು ಮೂರು ಕ್ಷೇತ್ರಗಳ ಜನತೆ, ಮುಖಂಡರು ಹಾಗೂ ಕಾರ್ಯಕರ್ತರು ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಗೆ ಪ್ರಬಲ ಸಾಕ್ಷಿಯಾಗಿದ್ದು, ನಮ್ಮ ಈ ಜನಪರ ಸರ್ಕಾರಕ್ಕೆ ಇನ್ನಷ್ಟು ‘ಶಕ್ತಿ’ ನೀಡಿದ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
Nov 23, 2024, 7:18 pm IST

ಮೂರು ಕ್ಷೇತ್ರಗಳ ಉಪಚುನಾವಣೆ ಬಳಿಕ ನಡೆದ ಚುನಾವಣೋತ್ತರ ಸಮೀಕ್ಷೆಗಳು ಇಲ್ಲಿ ಸುಳ್ಳಾಗಿವೆ. ಮೂರಕ್ಕೆ ಮೂರು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿಶ್ವಾಸವೂ ನಿಜವಾಗಿದೆ. ಅಲ್ಲಿಗೆ ಒಂದು ಹಂತದಲ್ಲಿ ವಿಪಕ್ಷಗಳಿಗೆ ನಾವು ಇನ್ನಷ್ಟು ಗಟ್ಟಿಯಾಗಿದ್ದೇವೆ ಎಂಬುದನ್ನು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ತೋರಿಸಿದೆ.
Nov 23, 2024, 5:36 pm IST

ತೀವ್ರ ಕುತೂಹಲ ಮೂಡಿಸಿದ್ದ ಶಿಗ್ಗಾವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ಸಾಧಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿದ್ದಾರೆ. ಕರ್ನಾಟಕದ ಮಹಾಜನತೆಗೆ ಧನ್ಯವಾದಗಳು. ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. ಇದೇ ವೇಳೆ ಕಾಂಗ್ರೆಸ್ ಪಕ್ಷದ ಎಲ್ಲ ಮೂರೂ ಅಭ್ಯರ್ಥಿಗಳನ್ನು ಗೆಲ್ಲಿಸಿ, ಜನಪರ ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಸೂಚಿಸಿರುವ ಕರ್ನಾಟಕದ ಮಹಾಜನತೆಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
Nov 23, 2024, 4:26 pm IST

ವಿಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವ ಈ ಗೆಲುವು ದಿಗ್ವಿಜಯವಾಗಿ ಕಾಣುತ್ತಿದೆ. ಈ ಗೆಲುವಿನ ಹಿಂದಿರುವ ನಮ್ಮ ಕಾರ್ಯಕರ್ತರು ಮತ್ತು ಮುಖಂಡರ ಅಪಾರ ಶ್ರಮವನ್ನು ಇದೇ ವೇಳೆ ನೆನೆಯುತ್ತೇನೆ. ಈ ಗೆಲುವು ನಮ್ಮ ಸರ್ಕಾರದ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜನರಿಗಾಗಿ ದುಡಿಯುವ ನಮ್ಮ ಸಂಕಲ್ಪಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ತುಂಬಿದೆ ಎಂದು ಸಿಎಂ ಸಿದ್ದರಾಮಯ್ಯ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.
Nov 23, 2024, 4:11 pm IST

ನಿಖಿಲ್‌ಗೆ ಚುನಾವಣಾ ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರವೇ ಆಗಿದೆ. ನಾವು ಅರ್ಜುನ ಪಾತ್ರಕ್ಕೆ ಹೋಗುತ್ತಾರೆ ಅಂತಾ ತಿಳಿದುಕೊಂಡಿದ್ದೇವು. ಮತ್ತೆ ಅಭಿಮನ್ಯು ಪಾತ್ರದಲ್ಲಿ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಸೋಲಿನಿಂದ ಬಹಳ ನೋವಾಗುತ್ತಿದೆ. ಅವರು ಗೆಲ್ಲಬೇಕಿತ್ತು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.
Nov 23, 2024, 3:51 pm IST

ಹಣದ ಹೊಳೆ ಹರಿಸಿ ಕಾಂಗ್ರೆಸ್ ಗೆಲುವು: ಆರ್.ಅಶೋಕ್

ಕರ್ನಾಟಕ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಹಣದ ಹೊಳೆ ಹರಿಸಿ ವಿಜಯ ಸಾಧಿಸಿದೆ. ಜೊತೆಗೆ ಜನರು ಕೂಡ ಅಭಿವೃದ್ಧಿಯಿಂದ ವಂಚಿತರಾಗುತ್ತೇವೆ ಎಂಬ ದೃಷ್ಟಿಯಿಂದ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಸರ್ಕಾರದ ಹಗರಣ ಬಯಲಿಗೆಳೆಯುವ ಕೆಲಸವನ್ನು ಬಿಜೆಪಿ ಮುಂದುವರಿಸಲಿದೆ ಎಂದು ಆರ್.ಅಶೋಕ್ ಪ್ರತಿಕ್ರಿಯಿಸಿದರು.
Nov 23, 2024, 2:54 pm IST

ಈ ಗೆಲುವು ಸರ್ಕಾರಕ್ಕೆ ಸರ್ಟಿಫಿಕೇಟ್ ಅಲ್ಲ: ಬೊಮ್ಮಾಯಿ

ಒಂದು ಕಾಲದಲ್ಲಿ 17 ಉಪ ಚುನಾವಣೆಯಲ್ಲಿ 13 ಕ್ಷೇತ್ರ ಗೆದ್ದಿದ್ದೇವು. ಈ ಸರ್ಕಾರದ ಕೆಲಸದ ಮೇಲೆ ಮತ ಬಂದಿದೆ ಅಂತೇನಿಲ್ಲ. ನಾವು ಉಪ ಚುನಾವಣೆಯಲ್ಲಿ ಅಷ್ಟು ಸ್ಥಾನ ಗೆದ್ದು ಅದಾದ ಮೇಲೆ ಸರ್ಕಾರ ಕಳೆದುಕೊಂಡಿದ್ದೇವು. ಹೀಗಾಗಿ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷದ ಆಡಳಿತಕ್ಕೆ ಸರ್ಟಿಫಿಕೇಟ್ ಅಂತ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
Nov 23, 2024, 2:49 pm IST

ವಿಜೇತರಿಗೆ, ಮತದಾರರಿಗೆ ಗೃಹ ಸಚಿವರ ಅಭಿನಂದನೆ

ರಾಜ್ಯದಲ್ಲಿ ನಡೆದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಅಭೂತಪೂರ್ವ ಜಯ ಗಳಿಸಿದಕ್ಕೆ ವಿಜೇತ ಅಭ್ಯರ್ಥಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಅಭಿನಂದನೆ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಸಿ.ಪಿ.ಯೋಗೇಶ್ವರ, ಅನ್ನಪೂರ್ಣ ತುಕರಾಂ ಮತ್ತು ಯಾಸೀರ್ ಖಾನ್ ಪಠಾಣ್ ವಿಜೇತರಾಗಿದ್ದಾರೆ. ಜನಪರ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರದ ಕಾರ್ಯವೈಖರಿಯನ್ನು ಸ್ಪಷ್ಟವಾಗಿ ಒಪ್ಪಿ, ಅಛಲವಾದ ವಿಶ್ವಾಸವಿಟ್ಟು ಪಕ್ಷದ ಅಭ್ಯರ್ಥಿಗಳ ಕೈ ಹಿಡಿದಿರುವ ಮತದಾರರಿಗೆ ಅನಂತ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Nov 23, 2024, 2:40 pm IST

ಕಾಂಗ್ರೆಸ್ ವಿಜೇತ ಪಠಾಣ್‌ಗೆ ಬೊಮ್ಮಾಯಿ ಅಭಿನಂದನೆ

ಶಿಗ್ಗಾವಿ ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ಳುತ್ತೇನೆ. ಬಂದ ಫಲಿತಾಂಶವನ್ನು ಸ್ವೀಕಾರ ಮಾಡುವೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದ ಯಾಸಿರ್ ಖಾನ್ ಪಠಾಣ್ ಗೆ ಅಭಿನಂದನೆ ಸಲ್ಲಿಸುವೆ. ಅಲ್ಲಿಯ ಜನರ ಸ್ಪಂದನೆ ನೋಡಿದರೆ ನಮಗೆ ಭರವಸೆ ಇತ್ತು. ಆದರೆ ವಿಪರೀತ ಹಣದ ಹೊಳೆ ಹರಿಸಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಸರ್ಕಾರ ಅವರದ್ದೇ ಇದೆ, ಆಡಳಿತ ಪಕ್ಷದ ಶಾಸಕರು ಜನ ಆಯ್ಕೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
Nov 23, 2024, 2:31 pm IST

ಸಂಡೂರು ಗೆಲುವು: ತುಕಾರಾಂ ಪ್ರತಿಕ್ರಿಯೆ

ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಳಿಕ ಸಂಸದ ಈ ತುಕಾರಾಂ ಅವರು ಪಕ್ಷದ ಎಲ್ಲ ಹೈಕಮಾಂಡ್ ನಾಯಕರಿಗೂ ಅಭಿನಂದನೆ ತಿಳಿಸಿದ್ದಾರೆ. ಸಿಎಂ, ಡಿಸಿಎಂ ಸೇರಿ ಹಲವು ಸಚಿವರು ನಮ್ಮ ಪರವಾಗಿ ಪ್ರಚಾರ ಮಾಡಿದ್ದಾರೆ. ಅನ್ನಪೂರ್ಣ ‌ತುಕಾರಂ ಮೇಲೆ ವಿಶ್ವಾಸವಿಟ್ಟು ಜನರು ಆಶಿರ್ವಾದ ಮಾಡಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
Nov 23, 2024, 2:29 pm IST

ಕೊನೆಯ ಹಂತದ ಬೆಳವಣಿಗೆಯಲ್ಲಿ ಹದಿನೆಂಟು ದಿನಗಳ ತನ್ನ ಚುನಾವಣಾ ಪ್ರಚಾರದಲ್ಲಿ ಪ್ರತಿ ಹಳ್ಳಿಗಳಲ್ಲೂ ಜನರು ಬಹಳ ಪ್ರೀತಿ ವಾತ್ಸಲ್ಯ ತೋರಿಸಿದ್ದಾರೆ. 86 ಸಾವಿರಕ್ಕಿಂತಲೂ ಹೆಚ್ಚು ಮತಗಳು ನನಗೆ ಕೊಟ್ಟಿದ್ದಾರೆ. ಚುನಾವಣೆಗಳಲ್ಲಿ ತೀರ್ಪು ತೆಗೆದುಕೊಳ್ಳುವ ಶಕ್ತಿ ಜನರಿಗೆ ಮಾತ್ರ ಇರುವುದು. ಅಂತಿಮವಾಗಿ ಜನರು ತೀರ್ಮಾನ ಮಾಡಿದ್ದಾರೆ. ಅದಕ್ಕೆ ನಾನು ತಲೆ ಬಾಗುತ್ತೇನೆ. ಹಾಗೂ ನನ್ನ ಪರವಾಗಿ ಪ್ರಚಾರ ನಡೆಸಿದ ಕಾರ್ಯಕರ್ತರಿಗೂ ಹಾಗೂ ಬೆಂಬಲ ನೀಡಿದ ಮಾಧ್ಯಮಗಳಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಚನ್ನಪಟ್ಟಣ ಪರಾಜಿತ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ
Nov 23, 2024, 1:27 pm IST

ನನ್ನ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದ ಜನರಿಗೆ ಧನ್ಯವಾದಗಳು. ಸರ್ಕಾರದ ಗ್ಯಾರೆಂಟಿ ಯೋಜನೆ, ಅಭಿವೃದ್ಧಿಗಳು ಕ್ಷೇತ್ರದಲ್ಲಿ ಕೈ ಹಿಡಿದಿವೆ ಎಂದು ಬಳ್ಳಾರಿಯಲ್ಲಿ ಭರ್ಜರಿ ಗೆಲುವಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಪ್ರತಿಕ್ರಿಯಿಸಿದರು.
Nov 23, 2024, 1:05 pm IST

ಶಿಗ್ಗಾವಿ ಮತ ಎಣಿಕೆ ಪೂರ್ಣ: ಕಾಂಗ್ರೆಸ್‌ ಗೆಲುವು

ಶಿಗ್ಗಾವಿ ವಿಧಾನಸಭಾ ಚುನಾವಣೆ ಹಿನ್ನೆಲೆ ಕೊನೆಯ 18ನೇ ಸುತ್ತು ಮತ ಎಣಿಕೆ ಮುಕ್ತಾಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಅವರು ಒಡೆದಿದ್ದಾರೆ. ಬಿಜೆಪಿಯ ಭರತ್ ಬೊಮ್ಮಾಯಿಗೆ ಸೋಲಾಗಿದೆ. ಕಾಂಗ್ರೆಸ್ 13,448 ಅಂತರದಲ್ಲಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿಗೆ 86960 ಮತಗಳು ಬಂದರೆ, ಕಾಂಗ್ರೆಸ್ ಅಭ್ಯರ್ಥಿ 1,00,587 ಮತಗಳನ್ನು ದಾಖಲಿಸಿದ್ದಾರೆ.
Nov 23, 2024, 12:49 pm IST

ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಮತದಾರರಿಂದ ತಕ್ಕ ಉತ್ತರ: ಮಾಜಿ ಸಂಸದ ಡಿ.ಕೆ. ಸುರೇಶ್
Nov 23, 2024, 12:22 pm IST

'ಸ್ವಾರ್ಥ ಇತ್ತು ಹೀಗಾಗಿ ವರ್ಕೌಟ್ ಆಗಿಲ್ಲ' ಸಿಪಿ ಯೋಗೇಶ್ವರ್

'ಸ್ವಾರ್ಥ ಇತ್ತು ಹೀಗಾಗಿ ವರ್ಕೌಟ್ ಆಗಿಲ್ಲ' ಸಿಪಿ ಯೋಗೇಶ್ವರ್
'ಮೈತ್ರಿ ಪಕ್ಷದಲ್ಲಿ ಸ್ವಾರ್ಥ ಇತ್ತು. ಜನ ಅವರ ಕುಟುಂಬ ರಾಜಕಾರಣಕ್ಕೆ ತೆರೆ ಎಳೆದಿದ್ದಾರೆ, ಜೆಡಿಎಸ್‌ ಬಿಜೆಪಿ ಮೈತ್ರಿ ವರ್ಕೌಟ್ ಆಗಿಲ್ಲ. ಯಡಿಯೂರಪ್ಪ ತನ್ನ ಮಗ ಮತ್ತು ಕುಮಾರಸ್ವಾಮಿ ತನ್ನ ಮಗನನ್ನು ಬೆಳೆಸಬೇಕು ಅಂತ ಹೋರಾಡುತ್ತಿದ್ದಾರೆ. ಇವರ ಷಡ್ಯಂತ್ರದಿಂದ ನಾನು ಎನ್‌ಡಿಎ ಪಕ್ಷದಿಂದ ಹೊರ ಬರಬೇಕಾಯಿತು. ಆದರೆ ಕ್ಷೇತ್ರದ ಜನ ಹಾಗೂ ಕಾಂಗ್ರೆಸ್ ಪಕ್ಷ ನನ್ನನ್ನು ಕೈ ಬಿಡಲಿಲ್ಲ' ಎಂದು ಸಿಪಿ ಯೋಗೇಶ್ವರ್ ಹೇಳಿದರು.
Nov 23, 2024, 12:19 pm IST

ಶಿಗ್ಗಾವಿಯಲ್ಲಿ ಯಾಸಿರ್ ಖಾನ್ ಪಠಾನ್ 13,700ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಬಿಜೆಪಿಗೆ ಹೀನಾಲಯ ಸೋಲಾಗಿದೆ. ಮಾಜಿ ಸಿಎಂ ಪುತ್ರ ಮೊದಲ ಚುನಾವಣೆಯಲ್ಲಿಯೇ ಸೋಲಿನ ಅನುಭವ ಕಂಡಿದ್ದಾರೆ.
Nov 23, 2024, 12:15 pm IST

ಶಿಗ್ಗಾಂವಿಯಿಂದ ಕಾಲ್ಕಿತ್ತ ಭರತ್ ಬೊಮ್ಮಾಯಿ!

ರಾಜ್ಯದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನ ಹಾದಿಯಲ್ಲಿದೆ. ಇದರಿಂದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಪ್ರತಿಷ್ಠೆಯ ಕಣವಾಗಿದ್ದ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಗೆಲುವು ಸಾಧಿಸುತ್ತಾರೆ ಎನ್ನುವ ವಿಶ್ವಾಸ ಇತ್ತು. ಆದರೆ ಶಿಗ್ಗಾಂವಿ ಮತದಾರರು ಕಮಲ ಬಿಟ್ಟು ಕೈ ಹಿಡಿದಿದ್ದಾರೆ. ಇದರಿಂದಾಗಿ ಬೇಸರಗೊಂಡ ಭರತ್‌ ಬೊಮ್ಮಾಯಿ ಶಿಗ್ಗಾಂವಿಯಿಂದ ಹೊರಟಿರುವುದು ಕಂಡು ಬಂದಿದೆ.
Nov 23, 2024, 12:15 pm IST

ಉಪಚುನಾವಣೆ ಕಾಂಗ್ರೆಸ್ ಗೆಲುವಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂತಸ, ಇದು ಕರ್ನಾಟಕ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಗೆಲುವು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆಯ ಮೈಸೂರು ಭಾಗ ಮತ್ತು ಸಮಗ್ರ ಕರ್ನಾಟಕದ ಅಭಿವೃದ್ಧಿಯ ಗೆಲುವು. ಎಂದು ಟ್ವೀಟ್ ಮಾಡಿದ್ದಾರೆ.
Nov 23, 2024, 11:57 am IST

ಶಿಗ್ಗಾವಿ: ಕಾಂಗ್ರೆಸ್ ಪಕ್ಷ ಮುನ್ನಡೆ, ಬೈ ಬೈ ಬೊಮ್ಮಾಯಿ ಪೋಸ್ಟರ್

ಶಿಗ್ಗಾವಿ: ಕಾಂಗ್ರೆಸ್ ಪಕ್ಷ ಮುನ್ನಡೆ, ಬೈ ಬೈ ಬೊಮ್ಮಾಯಿ ಪೋಸ್ಟರ್
ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಲವು ಕಾಂಗ್ರೆಸ್ ಪಕ್ಷದ ಸಚಿವ ಜಾರಕಿ ಹೋಳಿ, ಸಿದ್ದರಾಮಯ್ಯ ಹಲವು ನಾಯಕರ ಹೆಸರನ್ನು ಕೂಗುವ ಮೂಲಕ ಸಂಭ್ರಮಿಸಿದರು. ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಮತ್ತೊಂದೆಡೆ ಬಿಜೆಪಿ ವಿರುದ್ಧ ''BYE BYE ಬೊಮ್ಮಾಯಿ'' ಎಂದು ತಲೆಕೆಳಗಾದ ಬಿಜೆಪಿ ಬಾವುಟ ಪ್ರದರ್ಶಿಸಿದರು.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+