Karnataka Budget 2023: ಗ್ಯಾರಂಟಿ ಯೋಜನೆ, ಬೆಂಗಳೂರು ಅಭಿವೃದ್ಧಿಯೇ ಸಿಎಂ ಸಿದ್ದರಾಮಯ್ಯ ಆದ್ಯತೆ- ಯಾವುದಕ್ಕೆ ಎಷ್ಟು? ಅಂಕಿಅಂಶ
ಬೆಂಗಳೂರು, ಜುಲೈ 06: ಜುಲೈ 7ರಂದು ( ಶುಕ್ರವಾರ ) ಮುಖ್ಯಮಂತ್ರಿ ಸಿದ್ದರಾಮಯ್ಯನವರು ( Siddaramaiah ) ತಮ್ಮ 14 ನೇ ಬಜೆಟ್ ( Karnataka Budget 2023 ) ಅನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ( Congress ) ಘೋಷಿಸಿದ 'ಗ್ಯಾರಂಟಿ'ಗಳ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. ಇದೆಲ್ಲದರ ಹೊರತಾಗಿ ಬೆಂಗಳೂರು ( Bengaluru ) ಮಹಾನಗರದ ಅಭಿವೃದ್ಧಿ ಸಿದ್ದರಾಮಯ್ಯ ಆದ್ಯತೆ ನೀಡುತ್ತಾರೆಂದು ಎಂದು ನಿರೀಕ್ಷೆ ಮಾಡಲಾಗಿದೆ.
ಈ ಜನಪರ ಯೋಜನೆಗಳ ಹೊರತಾಗಿಯೂ ಸಿದ್ದರಾಮಯ್ಯ ಸರ್ಕಾರವು ಅಸ್ತಿತ್ವದಲ್ಲಿರುವ ಯೋಜನೆಗಳಿಗೂ ಆದ್ಯತೆ ನೀಡಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
2024 ರ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಕಲ್ಯಾಣ ಕ್ರಮಗಳನ್ನು ಘೋಷಿಸಬಹುದು ಎಂದೂ ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರು ಈ ಬಜೆಟ್ ಮಂಡಿಸಿದ ನಂತರ ರಾಜ್ಯದ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 13 ಬಜೆಟ್ ಮಂಡಿಸಿದ್ದರು.
ಈ ಬಜೆಟ್ ಸಿದ್ದರಾಮಯ್ಯ ಅವರಿಗೆ ಸವಾಲಿನದ್ದಾಗಿದೆ. ಕಾರಣ, ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಹಲವು ಜನಪರ ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸುವ ಅವಶ್ಯಕತೆ ಇದೆ.
ಐದು ಯೋಜನೆಗಳಿಗೆ ಸುಮಾರು 59,000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಪ್ರಸ್ತುತ ಬಜೆಟ್ನ ವೆಚ್ಚ 3.39 ಲಕ್ಷ ಕೋಟಿ ರೂಪಾಯಿ ಎಂದು ಸಿಎಂ ಹೇಳಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈ ವರ್ಷದ ಫೆಬ್ರವರಿಯಲ್ಲಿ 3.09 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಬಜೆಟ್ ಮಂಡಿಸಿದ್ದರು.
ಕಾಂಗ್ರೆಸ್ನ ಯೋಜನೆಗಳಿಗೆ ಹಣವನ್ನು ನೀಡಲು ಸಿದ್ದರಾಮಯ್ಯ ಅವರು ಇನ್ನಿತರ ಯೋಜನೆಗಳಿಗೆ ಹಣದ ಹಂಚಿಕೆಯನ್ನು ಕಡಿಮೆ ಮಾಡಬಹುದು. ಅಸ್ತಿತ್ವದಲ್ಲಿರುವ ಅಥವಾ ಹೊಸ ಯೋಜನೆಗಳೊಂದಿಗೆ ಕೆಲವು ಯೋಜನೆಗಳನ್ನು ವಿಲೀನಗೊಳಿಸಬಹುದು ಎಂದು ಹೇಳಲಾಗುತ್ತಿದೆ.
ಹಿಂದಿನ ಸರ್ಕಾರಗಳಿಗಿಂತ ಭಿನ್ನವಾಗಿ, ಸಿದ್ದರಾಮಯ್ಯ ಅವರು ಇಲಾಖೆಗಳಿಗೆ ಅನುಗುಣವಾಗಿ ಹಣ ಮಂಜೂರು ಮಾಡುವ ಸಾಧ್ಯತೆಯಿದೆ.
ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ಗ್ಯಾರಂಟಿ ಯೋಜನೆಗಳು ಭಾರಿ ಹಣದ ಹಂಚಿಕೆಯನ್ನು ಪಡೆಯಬಹುದು. ಸಿದ್ದರಾಮಯ್ಯನವರು ಹೆಚ್ಚಿನ ಹಣ ಮೀಸಲಿಡಬಹುದಾದ ಕೆಲವು ಇಲಾಖೆಗಳು ಪಟ್ಟಿ ಇಲ್ಲಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೆಚ್ಚಿನ ಹಂಚಿಕೆಯನ್ನು ಪಡೆಯಲಿದೆ. ಕಾರಣ 'ಗೃಹ ಲಕ್ಷ್ಮಿ' ಯೋಜನೆಯು ಈ ಇಲಾಖೆಯ ಅಡಿಯಲ್ಲಿ ಬರುತ್ತದೆ. ಇದು ಪ್ರತಿ ಮನೆಯ ಮಹಿಳಾ ಮುಖ್ಯಸ್ಥರಿಗೆ 2,000 ರೂ.ಗಳ ಭರವಸೆ ನೀಡಿದೆ. ಜುಲೈ 14 ರೊಳಗೆ ವಿಧಾನಸೌಧದಲ್ಲಿ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರ ಯೋಜಿಸಿದೆ.
ಹಿಂದಿನ ಸರ್ಕಾರವು ವಾರಣಾಸಿಗೆ ತೀರ್ಥಯಾತ್ರೆ ಮಾಡುವ ಪ್ರತಿ ಭಕ್ತನಿಗೆ 5,000 ರೂಪಾಯಿ ನೀಡುವ 'ಕಾಶಿ ಯಾತ್ರೆ' ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಪ್ರಸ್ತುತ ಸರ್ಕಾರವು ಇಂತಹ ಯೋಜನೆಗಳನ್ನು ಮುಂದುವರಿಸುತ್ತದೆಯೇ ಅಥವಾ ಅವುಗಳನ್ನು ನಿಲ್ಲಿಸುತ್ತದೆಯೇ ಎಂಬುದು ಕುತೂಹಲ ಕೆರಳಿಸಿದೆ.
ಸಾರಿಗೆ
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ 'ಶಕ್ತಿ' ಯೋಜನೆ ಮೊದಲು ಜಾರಿಗೆ ಬಂದದೆ. ಈ ಯೋಜನೆಗೆ ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ ಇದು ಭಾರಿ ಜನಸಂದಣಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಬಸ್ಗಳಿಗೆ ಬೇಡಿಕೆ ಇದೆ.
ಜೂನ್ 11 ರಿಂದ, ಜುಲೈ 5 ರವರೆಗೆ 13.72 ಕೋಟಿಗೂ ಹೆಚ್ಚು ಮಹಿಳೆಯರು 325 ಕೋಟಿ ರೂಪಾಯಿ ಮೌಲ್ಯದ ಟಿಕೆಟ್ ದರದಲ್ಲಿ ಪ್ರಯಾಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಾರಿಗೆ ಇಲಾಖೆಗೆ ಗಮನಾರ್ಹ ಪಾಲು ಹಂಚಿಕೆ ಮಾಡಬಹುದು.
ಅನ್ನಭಾಗ್ಯ ಯೋಜನೆ
'ಅನ್ನ ಭಾಗ್ಯ' ಯೋಜನೆಯಡಿ ರಾಜ್ಯವು ವಿವಿಧ ಮೂಲಗಳಿಂದ ಅಕ್ಕಿ ಖರೀದಿಸುವವರೆಗೆ ಬಿಪಿಎಲ್ ಕಾರ್ಡುದಾರರಿಗೆ ಹಣವನ್ನು ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ರಾಜ್ಯಕ್ಕೆ ತಿಂಗಳಿಗೆ ಸುಮಾರು 800 ಕೋಟಿ ರೂ. ಹೊರೆಯಾಗಲಿದೆ.

ಗೃಹ ಜ್ಯೋತಿ
200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಅನ್ನು ನೀಡುವ 'ಗೃಹ ಜ್ಯೋತಿ' ಯೋಜನೆಗೆ ಸಿದ್ದರಾಮಯ್ಯ ಹೆಚ್ಚಿನ ಪಾಲನ್ನು ನೀಡಬೇಕಿದೆ. ಇದು ಇಂಧನ ಇಲಾಖೆಯ ಅಡಿಯಲ್ಲಿ ಬರುತ್ತದೆ. ಇದು ಬಜೆಟ್ನ ದೊಡ್ಡ ಪಾಲನ್ನು ಪಡೆಯುವ ನಿರೀಕ್ಷೆಯಿದೆ. ಜುಲೈ 6 ರ ವರೆಗೆ 1 ಕೋಟಿಗೂ ಹೆಚ್ಚು ಜನರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
ಯುವನಿಧಿ ಯೋಜನೆ
'ಯುವ ನಿಧಿ' ಯೋಜನೆ ಅನುಷ್ಠಾನದ ಕುರಿತು ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ. ಸರ್ಕಾರವು ಅನುಷ್ಠಾನದ ದಿನಾಂಕವನ್ನು ಘೋಷಿಸಬಹುದು ಅಥವಾ ಅದನ್ನು ಮುಂದಿನ ಆರ್ಥಿಕ ವರ್ಷಕ್ಕೆ ತಳ್ಳಬಹುದು ಎಂದು ಹೇಳಲಾಗುತ್ತಿದೆ.
ಬೆಂಗಳೂರು ಅಭಿವೃದ್ಧಿ
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ಬ್ರ್ಯಾಂಡ್ ಅನ್ನು ಸುಧಾರಿಸಲು ಸಾರ್ವಜನಿಕರಿಂದ ಸಲಹೆಗಳನ್ನು ಕೇಳಿದ್ದಾರೆ. ನಗರದಲ್ಲಿ ಸುರಂಗ ರಸ್ತೆಗಳ ಕಾರ್ಯಸಾಧ್ಯತೆಯ ಕುರಿತು ಸರ್ಕಾರ ಅಧ್ಯಯನ ನಡೆಸುತ್ತಿದ್ದು, ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾಪವಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.












Click it and Unblock the Notifications