ಬಜೆಟ್ಟಿನಲ್ಲಿ ನೀರಾವರಿ ವಲಯವನ್ನು ಬದಿಗೊತ್ತಿದ್ದ ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್, 19: ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ಟಿನಲ್ಲಿ ಕೇವಲ 14,404 ಕೋಟಿ ರೂ.ಗಳನ್ನು ಮಾತ್ರ ನೀರಾವರಿಗೆ ಮೀಸಲಿಟ್ಟಿರುವುದು ನಿರಾಶಾದಾಯಕ ಎಂದು ಕರ್ನಾಟಕ ನೀರಾವರಿ ವೇದಿಕೆ ಅಧ್ಯಕ್ಷ ಹಾಗೂ ಖ್ಯಾತ ಕಣ್ಣಿನ ವೈದ್ಯ ಇಂಗ್ಲೆಂಡ್ ದೇಶದ ನಿವಾಸಿ ಡಾ. ಮಧು ಸೀತಪ್ಪ ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ನೀರಾವರಿಗೆ ವಿಶೇಷ ಕಾಳಜಿ ವಹಿಸಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಕೇವಲ ಶೇ.9% ನೀರಾವರಿಗೆ ಮೀಸಲಿಟ್ಟಿದ್ದಾರೆ. ಎತ್ತಿನಹೊಳೆ ಯೋಜನೆಯ ಕುರಿತು ಸಮನ್ವಯ ಸಮಿತಿಯನ್ನು ರಚಿಸಿರುವುದು ಅವೈಜ್ಞಾನಿಕ ಯೋಜನೆಯನ್ನು ಯಥಾವತ್ತಾಗಿ ಜಾರಿ ಮಾಡಲು ಮಾಡಿರುವ ಸಂಚು ಎಂದು ದೂರಿದರು.[ಕರ್ನಾಟಕ ಬಜೆಟ್: ನಿಮ್ಮ ಜಿಲ್ಲೆಗೆ ಯಾವ ಭಾಗ್ಯ ಸಿಕ್ತು?]
ಕರಾವಳಿ ಭಾಗದ ನೇತ್ರಾವತಿ ಪಾತ್ರದ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಹಾಗೂ ಪಶ್ಚಿಮಘಟ್ಟಗಳ ಅರಣ್ಯ ಸಂರಕ್ಷಣೆಗೆ ಹಣವನ್ನು ಮೀಸಲಿಡಬೇಕಿತ್ತು. ಸಮನ್ವಯ ಸಮಿತಿಯ ಬದಲು ನೇತ್ರಾವತಿ ನೀರಾವರಿ ನಿಗಮ ಸ್ಥಾಪಿಸಿ, ಪ್ರಸ್ತುತ ಎತ್ತಿನಹೊಳೆ ಯೋಜನೆಯನ್ನು ಪರಿಷ್ಕರಿಸಿ, ಎರಡೂ ಭಾಗದ ಜನರಿಗೆ ಒಂದೇ ಯೋಜನೆಯಿಂದ ಕುಡಿಯುವ ನೀರನ್ನು ಒದಗಿಸಬಹುದಿತ್ತು. ಆದರೆ ಹಾಗೇ ಮಾಡಿಲ್ಲ.[ಸಿದ್ದು ಬಜೆಟ್ ಬಗ್ಗೆ ಐಟಿ ಸಚಿವ ಎಸ್.ಆರ್.ಪಾಟೀಲ ಹೇಳಿದ್ದೇನು?]
ಅಲ್ಲದೇ ಶರಾವತಿಯ ಬಗ್ಗೆ ಪ್ರಸ್ತಾಪವೇ ಇಲ್ಲ. ಶರಾವತಿಯಿಂದ ಭಧ್ರಾ ಮೇಲ್ದಂಡೆ ಕಾಲುವೆ ಮೂಲಕ ನೀರು ಹರಿಸಲು ವಿಸ್ತೃತ ಯೋಜನಾ ವರದಿಗೆ ಹಣ ಮೀಸಲಿಡುವುದನ್ನು ಬಿಟ್ಟು ಬಯಲುಸೀಮೆಗೆ ಶಾಶ್ವತ ನೀರು ಹುಡುಕಲು ಅನ್ವೇಷಣಾ ಸಮಿತಿಯನ್ನು ರೂಪಿಸಿದ್ದಾರೆ.[ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು]
ಮಳೆಗಾಲದಲ್ಲಿ ಬೆಂಗಳೂರಿನ ಶ್ರೀಮಂತರ ಬಡಾವಣೆಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ಕೊಳಚೆ ನೀರು ಸಂಸ್ಕರಣೆ ಎಂಬ ಚಳ್ಳಘಟ್ಟ ಯೋಜನೆಯನ್ನು ಹುಟ್ಟುಹಾಕಿದ್ದಾರೆ. ಈ ಯೋಜನೆಗೆ ಮೀಸಲಿಟ್ಟಿರುವ 1400 ಕೋಟಿ ರೂ. ಹಣದಿಂದ ಕೊಳಚೆ ನೀರನ್ನು ತೃತೀಯ ಸಂಸ್ಕರಣೆ ಮಾಡಿ ಬರಪೀಡಿತ ಜಿಲ್ಲೆಗಳಿಗೆ ಸಾಗಿಸಲು ಸಾಧ್ಯವಿಲ್ಲ. ಇದಕ್ಕೆ ಕನಿಷ್ಟ 4000 ಕೋಟಿ ರೂ. ಬೇಕಾಗುತ್ತದೆ ಎಂದು ಅಂಕಿ ಅಂಶ ನೀಡಿದರು.