ಯಡಿಯೂರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಹುತೇಕ ಖಚಿತ
ಬೆಂಗಳೂರು, ಜನವರಿ 14 : ಕರ್ನಾಟಕ ಬಿಜೆಪಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ಅಧ್ಯಕ್ಷರ ನೇಮಕ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗುವ ಸಾಧ್ಯತೆ ಇದೆ.
ಫೆಬ್ರವರಿಯಲ್ಲಿ ಮೂರು ಕ್ಷೇತ್ರಗಳ ಉಪ ಚುನಾವಣೆ ಮತ್ತು ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ. ಚುನಾವಣೆಗಳ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ಬಿ.ಎಸ್.ಯಡಿಯೂರಪ್ಪ ಮತ್ತು ಆರ್.ಅಶೋಕ್ ಅವರ ಹೆಸರುಗಳು ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿಬರುತ್ತಿವೆ. [FIR ರದ್ದಾದರೂ ಯಡಿಯೂರಪ್ಪ ಕಾನೂನು ಹೋರಾಟ ಮುಗಿದಿಲ್ಲ]
ಯಡಿಯೂರಪ್ಪ ಅವರ ವಿರುದ್ಧದ 15 ಎಫ್ಐಆರ್ಗಳನ್ನು ಕರ್ನಾಟಕ ಹೈಕೋರ್ಟ್ ಕೆಲವು ದಿನಗಳ ಹಿಂದೆ ರದ್ದುಗೊಳಿಸಿದೆ. ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿಎಸ್ವೈಗೆ ರಿಲೀಫ್ ದೊರಕಿದೆ. 5 ಅಕ್ರಮ ಡಿ-ನೋಟಿಫಿಕೇಷನ್ ಪ್ರಕರಣಗಳಲ್ಲಿ ಹಿಂದಿನ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ನೀಡಿದ್ದ ಪೂರ್ವಾನುಮತಿಯೂ ರದ್ದುಗೊಂಡಿದೆ. [ಯಡಿಯೂರಪ್ಪ ವಿರುದ್ಧದ FIR ರದ್ದು : ಯಾರು, ಏನು ಹೇಳಿದರು?]
ಹಲವು ಕಾನೂನು ಹೋರಾಟಗಳಲ್ಲಿ ಜಯಗಳಿಸಿರುವ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಿಸಲು ವರಿಷ್ಠರು ಆಸಕ್ತಿ ಹೊಂದಿದ್ದಾರೆ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಪ್ರಬಲವಾದ ನಾಯಕರ ಅಗತ್ಯವಿದೆ ಎಂಬುದು ವರಿಷ್ಠರ ಚಿಂತನೆಯಾಗಿದೆ. ಯಡಿಯೂರಪ್ಪಗೆ ಹುದ್ದೆ ನೀಡಲು ಕಾರಣಗಳು....[ರಾಜ್ಯಾಧ್ಯಕ್ಷ ಸ್ಥಾನ ಕೊಟ್ರೆ ನಿಭಾಯಿಸುವೆ: ಯಡಿಯೂರಪ್ಪ]
ಬಿಎಸ್ವೈ ಹೆಸರು ತಿರಸ್ಕರಿಸಲು ಕಾರಣವೇ ಇಲ್ಲ
ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರ ಹೆಸರನ್ನು ತಿರಸ್ಕರಿಸಲು ಕಾರಣಗಳೇ ಇಲ್ಲ. ಕರ್ನಾಟಕ ಬಿಜೆಪಿಗೂ ಪ್ರಬಲ ನಾಯಕತ್ವದ ಅಗತ್ಯವಿದೆ. ಯಡಿಯೂರಪ್ಪ ಅವರಿಗಿಂತ ಪ್ರಬಲವಾದ ನಾಯಕರು ಮತ್ತೊಬ್ಬರಿಲ್ಲ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಬಿಎಸ್ವೈಗೆ ಅಪಾರ ಬೆಂಬಲಿಗರಿದ್ದಾರೆ ಎಂಬುದು ವರಿಷ್ಠರಿಗೂ ತಿಳಿದಿದೆ.
ಬಿಜೆಪಿಗೆ ಪ್ರಬಲ ಶಕ್ತಿ ಬೇಕಾಗಿದೆ
2011ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಕರ್ನಾಟಕ ಬಿಜೆಪಿಯ ಚಿತ್ರಣ ಬದಲಾಗಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಲು ಯಡಿಯೂರಪ್ಪ ಅವರಂತಹ ಅನುಭವಿ ನಾಯಕರ ಅಗತ್ಯವಿದೆ ಎಂಬುದು ವರಿಷ್ಠರಿಗೂ ತಿಳಿದಿದೆ.
ಯಡಿಯೂರಪ್ಪ ಅವರು ಹುದ್ದೆಯ ಆಕಾಂಕ್ಷಿಯಾಗಿದ್ದಾರೆ
ಯಡಿಯೂರಪ್ಪ ಅವರ ಆಪ್ತ ಮೂಲಗಳು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಹಲವು ಬಾರಿ ರಾಜ್ಯ ರಾಜಕಾರಣಕ್ಕೆ ಬರುವ ಕುರಿತು ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಅವರ ಮುಂದಿನ ಗುರಿಯಾಗಿದೆ.
ಆರ್.ಅಶೋಕ್ ಹೆಸರು ಚಾಲ್ತಿಯಲ್ಲಿದೆ
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರ ಹೆಸರು ಕೇಳಿಬರುತ್ತಿದೆ. ಆದರೆ, ದೆಹಲಿಯಲ್ಲಿರುವ ವರಿಷ್ಠರು ಯಡಿಯೂರಪ್ಪ ಅವರ ಪರ ಒಲವು ಹೊಂದಿದ್ದಾರೆ. ಆರ್.ಅಶೋಕ್ ಅವರಿಗಿಂತ ಯಡಿಯೂರಪ್ಪ ಅವರು ಪ್ರಬಲ ನಾಯಕರಾಗಿದ್ದಾರೆ ಎಂಬುದು ವರಿಷ್ಠರೂ ಒಪ್ಪಲೇಬೇಕು.
ಕಾನೂನು ಹೋರಾಟದಲ್ಲಿಯೂ ಜಯಗಳಿಸಿದ್ದಾರೆ
ಯಡಿಯೂರಪ್ಪ ಅವರು ಈಗಾಗಲೇ ಹಲವು ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧದ 15 ಎಫ್ಐಆರ್ಗಳನ್ನು ಕರ್ನಾಟಕ ಹೈಕೋರ್ಟ್ ಕೆಲವು ದಿನಗಳ ಹಿಂದೆ ರದ್ದುಗೊಳಿಸಿದೆ. 5 ಅಕ್ರಮ ಡಿ-ನೋಟಿಫಿಕೇಷನ್ ಪ್ರಕರಣಗಳಲ್ಲಿ ಹಿಂದಿನ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ನೀಡಿದ್ದ ಪೂರ್ವಾನುಮತಿಯನ್ನು ರದ್ದುಪಡಿಸಲಾಗಿದೆ. ಇದರಿಂದ, ಹುದ್ದೆಯ ಆಯ್ಕೆಗೆ ಇದ್ದ ತೊಡಕುಗಳು ನಿವಾರಣೆಯಾಗಿವೆ.