ಪಕ್ಷ ಬಲವರ್ಧನೆಗೆ ರಾಜ್ಯ ಪ್ರವಾಸ ಹೊರಟ ಬಿಜೆಪಿಗೆ ಭಾರೀ ಹಿನ್ನಡೆ!
ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರಲು ಮತ್ತು ಕಾರ್ಯಕರ್ತರಲ್ಲಿ ಹುಮ್ಮಸ್ಸನ್ನು ಮೂಡಿಸಲು, ಮೂರು ತಂಡದಲ್ಲಿ ಬಿಜೆಪಿ ರಾಜ್ಯ ಪ್ರವಾಸವನ್ನು ಆರಂಭಿಸಿದ ದಿನವೇ ಭಾರೀ ಇಕ್ಕಟ್ಟು, ಮುಜುಗರಕ್ಕೆ ಸಿಲುಕಿದೆ.
ಹಿಜಾಬ್ ನಿಂದ ಹಿಡಿದು ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಮತೀಯ ಸಂಘರ್ಷವನ್ನು ಸರಕಾರ ಸರಿಯಾಗಿ ನಿಭಾಯಿಸುತ್ತಿಲ್ಲ ಎನ್ನುವ ವಿರೋಧ ಪಕ್ಷಗಳ ಕೂಗಿನ ನಡುವೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ವಿಚಾರ, ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ಭಾರೀ ಅಸ್ತ್ರವೊಂದು ಸಿಕ್ಕಂತಾಗಿದೆ.
ಒಂದು ಕಡೆ ಜೆಡಿಎಸ್ ಪಕ್ಷ ಜನತಾ ಜಲಧಾರೆ ಆರಂಭಿಸಿದರೆ, ಬಿಜೆಪಿಯು ಮೂರು ತಂಡವಾಗಿ ರಾಜ್ಯ ಪ್ರವಾಸವನ್ನು ಮಂಗಳವಾರ (ಏಪ್ರಿಲ್ 12) ಆರಂಭಿಸಿತ್ತು. ಮಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲಿ ಬಿಜೆಪಿ ಮುಖಂಡರು ಸಭೆಯನ್ನು ನಡೆಸಿದ್ದರು.
ಈ ಹೊತ್ತಿನಲ್ಲಿ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಬಿಜೆಪಿಯನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಡೆತ್ ನೋಟ್ ನಲ್ಲಿ ಸಚಿವ ಈಶ್ವರಪ್ಪನವರ ಹೆಸರು ಉಲ್ಲೇಖವಾಗಿದ್ದರಿಂದ ವಿರೋಧ ಪಕ್ಷದವರು ಅವರ ತಲೆದಂಡಕ್ಕೆ ಪಟ್ಟು ಹಿಡಿದಿದ್ದಾರೆ.

ಬಿಜೆಪಿ ಮುಖಂಡರು ಮತ್ತು ಸಂಘ ಪರಿವಾರದವರು ಪ್ರಚೋದನಾತ್ಮಕ ಹೇಳಿಕೆ
ಧಾರ್ಮಿಕ ವಿಚಾರದಲ್ಲಿ ಬಿಜೆಪಿ ಮುಖಂಡರು ಮತ್ತು ಸಂಘ ಪರಿವಾರದವರು ಪ್ರಚೋದನಾತ್ಮಕ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಬರುತ್ತಿದೆ, ಈಗ ಈಶ್ವರಪ್ಪನವರ ವಿಚಾರ ಕಾಂಗ್ರೆಸ್ಸಿಗೆ ಸಿಕ್ಕಿದೆ. ಈಶ್ವರಪ್ಪನವರ ರಾಜೀನಾಮೆಯನ್ನು ಪಡೆದುಕೊಂಡು ಅವರನ್ನು ಬಂಧಿಸಬೇಕೆಂದು ಕಾಂಗ್ರೆಸ್ ನಾಯಕರು ರಾಜಭವನಕ್ಕೆ ತೆರಳಿ ಸಚಿವರ ವಿರುದ್ದ ಕ್ರಮಕ್ಕೆ ಆಗ್ರಹಿಸಲಿದ್ದಾರೆ. ಕಾಂಗ್ರೆಸ್ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆ
ಈ ಹಿಂದೆ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಕೊಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು, ಈಗ ಕಾಂಗ್ರೆಸ್ ಅದನ್ನು ತಿರುವುಮುರುವು ಮಾಡಲು ಕಾರ್ಯತಂತ್ರವನ್ನು ರೂಪಿಸುತ್ತಿದೆ. ಚುನಾವಣಾ ವರ್ಷವಾಗಿರುವುದರಿಂದ ಕಾಂಗ್ರೆಸ್ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಶತಾಯುಗತಾಯು ಹೋರಾಟಕ್ಕೆ ಇಳಿಯುವ ಸಾಧ್ಯತೆ ಇರುವುದರಿಂದ, ಬಿಜೆಪಿಯ ಪಕ್ಷ ಬಲಬರ್ಧನೆ ಪ್ರವಾಸಕ್ಕೆ ಸಡ್ಡು ಹೊಡೆಯುವುದು ನಿಶ್ಚಿತ.

ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸಿತ್ತು
ಮಂಗಳವಾರ ಸಂತೋಷ್ ಆತ್ಮಹತ್ಯೆ ವಿಚಾರ ಹೊರಬೀಳುತ್ತಿದ್ದಂತೆಯೇ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್, ಬುಧವಾರದಿಂದ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ಈಶ್ವರಪ್ಪನವರ ರಾಷ್ಟ್ರಧ್ವಜ ಮತ್ತು ಕೇಸರಿ ಧ್ವಜದ ಹೇಳಿಕೆಯ ವಿಚಾರದಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸಿತ್ತು. ಆದರೆ, ಹೋರಾಟಕ್ಕೆ ತಾರ್ತಿಕ ಅಂತ್ಯ ಕಾಣಿಸುವಲ್ಲಿ ಯಶಸ್ವಿಯಾಗಿರಲಿಲ್ಲ.

ಪಕ್ಷ ಬಲವರ್ಧನೆಗೆ ರಾಜ್ಯ ಪ್ರವಾಸ ಹೊರಟ ಬಿಜೆಪಿಗೆ ಭಾರೀ ಹಿನ್ನಡೆ
ರಾಷ್ಟ್ರಧ್ವಜದ ವಿಚಾರದಲ್ಲಿ ಬಿಜೆಪಿ ನಾಯಕರು ಈಶ್ವರಪ್ಪನವರ ಬೆನ್ನಿಗೆ ನಿಂತಿದ್ದರು. ಆದರೆ, ಸಂತೋಷ್ ಸಾವಿನ ವಿಚಾರದ ಡೆತ್ ನೋಟ್ ನಲ್ಲಿ ನೇರ ಈಶ್ವರಪ್ಪನವರ ಹೆಸರು ಉಲ್ಲೇಖವಾಗಿರುದರಿಂದ ಬಿಜೆಪಿ ನಾಯಕರು ಅವರ ಸಮರ್ಥನೆಗೆ ನಿಲ್ಲಲಿದ್ದಾರಾ ಎನ್ನುವುದೀಗ ಪ್ರಶ್ನೆ. ಒಟ್ಟಿನಲ್ಲಿ, ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮತ್ತು ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ರಾಜ್ಯ ಪ್ರವಾಸ ಹೊರಟಿರುವ ಬಿಜೆಪಿ ನಾಯಕರಿಗೆ ಸಂತೋಷ್ ಆತ್ಮಹತ್ಯೆ ವಿಚಾರ ತೀವ್ರ ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.












Click it and Unblock the Notifications