ಹೇಳುವುದು ಆಚಾರ, ತಿನ್ನೋದು ಬದನೆಕಾಯಿ: ಬಿಜೆಪಿ ಲೇವಡಿ
ಬೆಂಗಳೂರು, ಜನವರಿ 19: ಇನ್ನಾದರೂ ಕೆಲಸ ಮಾಡಿ ಬನ್ನಿ ಎಂದು ರೆಸಾರ್ಟ್ನಲ್ಲಿದ್ದ ಬಿಜೆಪಿ ಶಾಸಕರನ್ನು ವ್ಯಂಗ್ಯವಾಡಿದ್ದ ಕಾಂಗ್ರೆಸ್ಸಿಗರಿಗೆ ಈಗ ಬಿಜೆಪಿ ಅದೇ ಅಸ್ತ್ರವನ್ನು ತಿರುಗುಬಾಣವನ್ನಾಗಿ ಪ್ರಯೋಗಿಸಿದೆ.
ಕಾಂಗ್ರೆಸ್ಗೆ ಇನ್ನೂ ಕಾಡುತ್ತಿದೆ 'ಆಪರೇಷನ್' ಭಯ: ಇಂದು ಶಾಸಕರೊಂದಿಗೆ ಮತ್ತೆ ಸಭೆ
ದೆಹಲಿ ಸಮೀಪ ಐಷಾರಾಮಿ ರೆಸಾರ್ಟ್ನಲ್ಲಿ ರಜಾದಿನ ಕಳೆದು ಮನೆಗೆ ಮರಳುತ್ತಿರುವ ಬಿಜೆಪಿ ಶಾಸಕರಿಗೆ ನಾವು ಹೃದಯಪೂರ್ವಕ ಸ್ವಾಗತ ಕೋರುತ್ತೇವೆ. ಅವರು ಸಂಪೂರ್ಣವಾಗಿ ಹೊಸ ಉತ್ಸಾಹ ಪಡೆದುಕೊಂಡಿದ್ದಾರೆ. ಸುದೀರ್ಘ ಕಾಲದಿಂದ ನಿರ್ಲಕ್ಷಿಸಿದ್ದ ತಮ್ಮ ಕ್ಷೇತ್ರಗಳಿಗೆ ಇನ್ನಾದರೂ ತೆರಳಿ ಕೆಲಸಗಳಲ್ಲಿ ಭಾಗವಹಿಸುತ್ತಾರೆ ಎಂಬ ಆಶಯವಿದೆ ಎಂದು ಕೆಪಿಸಿಸಿ ಅಧ್ಯಕ್ಷರ ಟ್ವಿಟ್ಟರ್ ಖಾತೆಯಿಂದ ಗುರುವಾರ ಟ್ವೀಟ್ ಮಾಡಲಾಗಿತ್ತು.
ಬೆಳಿಗ್ಗೆ ರೆಸಾರ್ಟ್ ರಾಜಕೀಯಕ್ಕೆ ಛೀ ಎಂದರು, ಸಂಜೆ ತಾವೇ ರೆಸಾರ್ಟ್ಗೆ ಹೋದರು
ಬಿಜೆಪಿಯವರು ರೆಸಾರ್ಟ್ ಮೋಜು ಮಸ್ತಿ ಬಿಟ್ಟು ಇನ್ನಾದರೂ ಕೆಲಸದ ಕಡೆಗೆ ಗಮನ ಹರಿಸಲಿ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಆದರೆ, ಹಾಗೆ ಟ್ವೀಟ್ ಮಾಡಿದ ಮರುದಿನವೇ ಕಾಂಗ್ರೆಸ್ ತನ್ನ ಶಾಸಕರನ್ನೇ ರೆಸಾರ್ಟ್ಗೆ ಕರೆದೊಯ್ದಿದೆ. ಬೆಂಗಳೂರಿನಿಂದ ಹೊರಗಿರುವ ಬಿಡದಿಯ ಎರಡು ರೆಸಾರ್ಟ್ಗಳಲ್ಲಿ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ.
ಇತ್ತ ವಿಧಾನಸೌಧ ಜನಪ್ರತಿನಿಧಿಗಳಿಲ್ಲದೆ ಭಣಗುಡುತ್ತಿದೆ. ಕಾಂಗ್ರೆಸ್ನ ರೆಸಾರ್ಟ್ ರಾಜಕೀಯವನ್ನು ಬಿಜೆಪಿ ಪ್ರತಿ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷರ ಟ್ವೀಟ್ಅನ್ನು ಹಂಚಿಕೊಂಡಿರುವ ಬಿಜೆಪಿ, 'ಹೇಳುವುದು ಆಚಾರ, ತಿನ್ನೋದು ಬದನೆಕಾಯಿ!' ಎಂದು ಲೇವಡಿ ಮಾಡಿದೆ.
ಹೇಳುವುದು ಆಚಾರ ತಿನ್ನೋದು ಬದನೆಕಾಯಿ ! https://t.co/r5fzyFqBPi
— BJP Karnataka (@BJP4Karnataka) 18 January 2019
ಶಾಸಕಾಂಗ ಪಕ್ಷದ ಸಭೆಗೆ ಎಲ್ಲ ಶಾಸಕರೂ ಹಾಜರಾಗದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ನೀವು ನೀಡಿದ್ದ ಎಚ್ಚರಿಕೆ, ನಿಮ್ಮ ಹತಾಶೆಯನ್ನು ತೋರಿಸುತ್ತದೆ ಮತ್ತು ಈ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನ ಈ ಅಪವಿತ್ರ ಮೈತ್ರಿಯು ಜನರನ್ನು ಮೂರ್ಖರನ್ನಾಗಿಸಲು ಮಾಡಿಕೊಂಡ ಹತಾಶೆಯ ನಡೆ ಎಂದು ಬಿಜೆಪಿ ಟೀಕಿಸಿದೆ.