ಕರ್ನಾಟಕ ಬಂದ್: ಯಾವ ಸೇವೆ ಇದೆ? ಯಾವುದು ವ್ಯತ್ಯಯ?
Recommended Video

ಬೆಂಗಳೂರು, ಜನವರಿ 25 : ಗೋವಾದಿಂದ ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಹರಿಸಲು ಮುಂದಾಗದ ಸರ್ಕಾರಗಳ ವಿರುದ್ಧ ಕನ್ನಡ ಪರ ಸಂಘಟನೆಗಳು ಕರೆದಿರುವ ಬಂದ್ ಚಾಲನೆಯಲ್ಲಿದೆ. ಈ ಸಂದರ್ಭದಲ್ಲಿ ಯಾವ ಸೇವೆ ಲಭ್ಯವಿದೆ? ಯಾವ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂಬ ಮಾಹಿತಿ ಇಲ್ಲಿದೆ...
ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್
ಬಯಲು ಸೀಮೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ವಾಟಾಳ್ ನಾಗರಾಜ್ ಅವರು ಈ ವರ್ಷ ಮೊದಲ ಕರ್ನಾಟಕ ಬಂದ್ ಆಚರಣೆಯಲ್ಲಿ ತೊಡಗಿದ್ದಾರೆ.
ಕಳೆದ ಬಾರಿ ಜೂನ್ 12ರಂದು ಬಂದ್ ಮಾಡಿದ್ದಾಗ ರಾಹುಲ್ ಗಾಂಧಿ ಅವರ ವಿರುದ್ಧ ವಾಟಾಳ್ ಹರಿಹಾಯ್ದಿದ್ದರು. ಇಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಗುರಿಯನ್ನಾಗಿಸಿಕೊಂಡಿದ್ದಾರೆ. ಬಂದ್ ಮಾಡುವವರಿಗೆ ಪಕ್ಷಕ್ಕಿಂತ ಬಂದ್ ಮಾಡುವುದು ಮುಖ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಮಹದಾಯಿ ನದಿ ಹಂಚಿಕೆ ವಿವಾದ ಬಗೆಹರಿಸಲು ಪ್ರಧಾನಿ ಮೋದಿ ಮುಂದಾಗಬೇಕು ಎಂದು ಆಗ್ರಹಿಸಿರುವ ಕನ್ನಡ ಪರ ಹೋರಾಟಗಾರರಿಗೆ ಗೋವಾ ಸಿಎಂ ಮನೋಹರ್ ಪರಿಕ್ಕಾರ್ ಕೂಡಾ ಟಾರ್ಗೆಟ್ ಆಗಿದ್ದಾರೆ.
ಈ ಬಂದ್ ಗೆ ಅನೇಕ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ನೀಡಿವೆ. ಕೆ.ಎ ನಾರಾಯಣ ಗೌಡ ಅವರ ಕರ್ನಾಟಕ ರಕ್ಷಣಾ ವೇದಿಕೆ ಕೊನೆ ಕ್ಷಣದಲ್ಲಿ ಬಂದ್ ಗೆ ಬೆಂಬಲ ನೀಡಿರುವುದರಿಂದ ಬಂದ್ ಬಿಸಿ ಸಾರ್ವಜನಿಕರಿಗೆ ತಟ್ಟಿದೆ.

ಹೋಟೆಲ್ ಗಳು ಬಂದ್ ಆಗಿಲ್ಲ
ಸಣ್ಣ ಪುಟ್, ದೊಡ್ಡ ಹೋಟೆಲ್, ರಸ್ತೆ ಬದಿ ತಳ್ಳುಗಾಡಿ ಉಪಹಾರ ಕೇಂದ್ರಗಳು, ಮಾಲ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಕಚೇರಿಗೆ ಬಂದವರಿಗೆ ಹೋಟೆಲ್ನಲ್ಲಿ ಊಟ ಸಿಗುತ್ತದೆ. ಮಾಲ್ ಗಳ ಫುಡ್ ಕೋರ್ಟ್, ಆನ್ ಲೈನ್ ಫುಡ್ ಕೂಡಾ ಲಭ್ಯವಿದೆ.

ಮೇರು ಕ್ಯಾಬ್, ಓಲಾ, ಉಬರ್
ಆಪ್ ಆಧಾರಿತ ಆಟೋ, ಕ್ಯಾಬ್ ಗಳ ಸಂಚಾರ ವಿರಳವಾಗಿವೆ. ನಾವು ಮುಷ್ಕರಕ್ಕೆ ಬೆಂಬಲ ನೀಡಿಲ್ಲ, ಆದರೆ, ಬಲವಂತವಾಗಿ ಕಾರುಗಳನ್ನು ನಿಲ್ಲಿಸಿದರೆ ಏನು ಮಾಡುವುದು ಎಂದು ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಸಂಘಟನೆಯ ಕಾರ್ಯದರ್ಶಿ ರಾಧಾಕೃಷ್ಣ ಹೊಳ್ಳ ಪ್ರಶ್ನಿಸಿದ್ದಾರೆ. ಓಲಾ, ಉಬರ್ ಸೇವೆ ಸಿಗುತ್ತಿದ್ದರೂ ತುಂಬಾ ದುಬಾರಿ ಬೆಲೆ ಇದೆ.

ಪೆಟ್ರೋಲ್ ಬಂಕ್ ಓಪನ್ ಇವೆ
'ನಮ್ಮ ಪರೋಕ್ಷ ಬೆಂಬಲ ಸಿಗಲಿದೆ' ಎಂದು ಬೆಂಗಳೂರು ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರನಾಥ್ ತಿಳಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್ ಗಳು ಬಹುತೇಕ ಓಪನ್ ಇವೆ. ಶೆಲ್ ಸೇರಿದಂತೆ ಇತರೆ ಬಂಕ್ ಗಳು ಮುಚ್ಚಿವೆ.

ಕೆಎಸ್ ಆರ್ಟಿಸಿ, ಬಿಎಂಟಿಸಿ
ರಾಜ್ಯದಲ್ಲಿ ಕೆಎಸ್ ಆರ್ಟಿಸಿ ಹಾಗೂ ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಸೇವೆಗಳು ಎಂದಿನಂತೆ ಇರಲಿವೆ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಸ್ಪಷ್ಟಪಡಿಸಿದ್ದಾರೆ. ಈಶಾನ್ಯ ಕರ್ನಾಟಕ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಕೊನೆ ಕ್ಷಣದಲ್ಲಿ ಬೆಂಬಲ ವ್ಯಕ್ತಪಡಿಸಿವೆ. ಕೆಎಸ್ಸಾರ್ಟಿಸಿ ಆನ್ಲೈನ್ ಬುಕಿಂಗ್ ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಕಾರ್ಮಿಕರ ಯೂನಿಯನ್ ಗಳ ನೈತಿಕ ಬೆಂಬಲವಿರುವುದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದೆ. ಕರ್ನಾಟಕದ ಬಹುತೇಕ ಕಡೆ ಬಸ್ ಸಂಚಾರ ಸ್ಥಗಿತವಾಗಿದೆ.

ಚಿತ್ರೋದ್ಯಮ ಬಂದ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬೆಂಬಲ ಸಿಕ್ಕಿದೆ. ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾರಾ ಗೋವಿಂದು ಅವರು ವಾಟಾಳ್ ಅವರಿಗೆ ಫೂರ್ಣ ಬೆಂಬಲ ನೀಡಿದ್ದಾರೆ. ಹೀಗಾಗಿ ಇಂದು ಯಾವುದೇ ಚಿತ್ರೀಕರಣ ನಡೆಯುತ್ತಿಲ್ಲ. ಸಂಜೆ ನಂತರ ಶೂಟಿಂಗ್ ನಡೆಯಲಿದೆ.

ಅಗತ್ಯ ವಸ್ತುಗಳ ಪೂರೈಕೆ ನಿಂತಿಲ್ಲ
ಅಗತ್ಯ ವಸ್ತುಗಳಾದ ಹಾಲು, ಔಷಧಗಳು ದೊರೆಯಲಿವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತೆರೆದಿವೆ. ಆಂಬ್ಯುಲೆನ್ಸ್ ಸೇವೆ ಲಭ್ಯವಿತದೆ. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವ ಲಾರಿಗಳು ಬಂದ್ಗೆ ಬೆಂಬಲ ನೀಡಿಲ್ಲ. ಬೆಳಗ್ಗೆ ದಿನಪತ್ರಿಕೆ ಪೂರೈಕೆ ನಿಂತಿಲ್ಲ. ಎಪಿಎಂಸಿ ವರ್ತಕರು ಬೆಂಬಲ ವ್ಯಕ್ತಪಡಿಸಿಲ್ಲ. ತರಕಾರಿ ಮನೆ ಮುಂದೆ, ಮಾರುಕಟ್ಟೆಗಳಲ್ಲಿ ಎಂದಿನಂತೆ ಸಿಗುತ್ತಿದೆ.

ಆಟೋರಿಕ್ಷಾ ಸಂಚಾರ
ಆಟೋರಿಕ್ಷಾ ಸಂಚಾರ ಎಂದಿನಂತೆ ಇವೆ ಎಂದು ಆದರ್ಶ ಆಟೋರಿಕ್ಷಾ ಮಾಲೀಕರ ಸಂಘ ಪ್ರಕಟಿಸಿದೆ. ಆಪ್ ಆಧಾರಿತ ಓಲಾ ಆಟೋರಿಕ್ಷಾಗಳು ಕೂಡಾ ಬಂದ್ ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಆದರೆ, ಎಂದಿಗಿಂತ ಇಂದು ಹೆಚ್ಚು ದರಗಳು ಕಂಡು ಬಂದಿದೆ,

ಬ್ಯಾಂಕಿಗೆ ಸಾಲು ಸಾಲು ರಜೆ
ಬ್ಯಾಂಕ್ ಓಪನ್ ಇವೆ. ಎಸ್ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕುಗಳು, ಖಾಸಗಿ ಬ್ಯಾಂಕ್ ಗಳು, ಭಾರತೀಯ ಜೀವ ವಿಮಾನಿಗಮ (ಎಲ್ಐಸಿ) ಕಚೇರಿಗಳು, ಅಂಚೆ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದರೂ ಸಿಬ್ಬಂದಿ ಕೊರತೆ ಕಂಡು ಬಂದಿದೆ. ಇದಲ್ಲದೆ ಜನವರಿ 26ರಿಂದ ಸಾಲು ಸಾಲು ರಜೆಯಿದೆ.












Click it and Unblock the Notifications