ಪದೇ ಪದೇ ಬಂದ್: ಮುಖಕ್ಕೆ ಹೊಡ್ದಂಗೆ ಸರಿಯಾಗಿ ಹೇಳಿದ್ರಿ ಕುಮಾರಣ್ಣ
Recommended Video

ಕಳೆದ ಕೆಲವು ತಿಂಗಳುಗಳಿಂದ ಕನ್ನಡಪರ ಮತ್ತು ರೈತ ಸಂಘಟನೆಗಳು ಕರೆದ ಕರ್ನಾಟಕ ಮತ್ತು ಬೆಂಗಳೂರು ಬಂದ್ ಎಷ್ಟು? ಬಂದ್ ಕರೆನೀಡಿರುವುದರ ಹಿಂದಿನ ಉದ್ದೇಶ ಯಶಸ್ವಿಯಾಯಿತೇ? ಬಂದ್ ನಿಂದಾಗಿ ದೈನಂದಿನ ದುಡಿಮೆಯಿಂದ ಬದುಕುತ್ತಿರುವವರ ಪಾಡೇನು?
ನಲವತ್ತು ವರ್ಷದ ಹಿಂದಿನ ಸಮಸ್ಯೆ, ಎಷ್ಟು ಪ್ರಧಾನಿಗಳು ಬಂದು ಹೋದರು, ಎಷ್ಟು ಸಿಎಂ ಬಂದು ಹೋದ್ರೂ.. ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಪರಿಹಾರ ಆಗಬೇಕು ಎನ್ನುವ ಇಚ್ಚಾಶಕ್ತಿ ರಾಜಕೀಯ ನಾಯಕರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ.
ಗುರುವಾರ (ಜನವರಿ 25) ಕನ್ನಡಪರ ಸಂಘಟನೆಗಳು ಕರೆನೀಡಿರುವ 'ಕರ್ನಾಟಕ ಬಂದ್' ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ, ಸತ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಒಂದೇ ಮಾತಿನಲ್ಲಿ ಕನ್ನಡ ಹೋರಾಟಗಾರರಿಗೆ ಸರಿಯಾಗಿ ಚಾಟಿ ಬೀಸಿದ್ದಾರೆ.
ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್
ಇನ್ನು ಜೆಡಿಎಸ್ ವರಿಷ್ಠ ದೇವೇಗೌಡ್ರು ಕೂಡಾ, ಬಂದ್ ಕರೆನೀಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬಂದ್ ನಿಂದಾಗಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎನ್ನುವ ಮಾತನ್ನು ಗೌಡ್ರು ಹೇಳಿದ್ದಾರೆ. ನದಿನೀರು ಹಂಚಿಕೆ ವಿಚಾರದಲ್ಲಿ, ಗೌಡ್ರಿಗೆ ಇರುವಷ್ಟು ಆಳಜ್ಞಾನ ಬಹುಷ: ವರ್ತಮಾನದ ಕರ್ನಾಟಕ ರಾಜಕೀಯದಲ್ಲಿ ಇನ್ನೊಬ್ಬರಿಗಿರಲಿಕ್ಕಿಲ್ಲ.

ಏಪ್ರಿಲ್ 2016ರಿಂದ ಇದುವರೆಗೆ ಸುಮಾರು ಎಂಟು ಬಂದ್
ಏಪ್ರಿಲ್ 2016ರಿಂದ ಇದುವರೆಗೆ ಸುಮಾರು ಎಂಟು ಬಂದ್ ಗೆ ಕರ್ನಾಟಕ ಸಾಕ್ಷಿಯಾಗಿದೆ. ಅದರಲ್ಲಿ ಬಹುತೇಕ ಕಾವೇರಿ ಮತ್ತು ಮಹಾದಾಯಿ ನದಿನೀರು ಹಂಚಿಕೆ ವಿಚಾರದಲ್ಲಿ, ಮತ್ತೊಂದು ನೋಟ್ ಬ್ಯಾನ್ ವಿರೋಧಿಸಿ ಬಂದ್ ಆಗಿರುವಂತದ್ದು. ಆದರೆ ಈ ಎಲ್ಲಾ ಬಂದ್ ನಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಯುವುದು ನಿಂತಿದೆಯಾ, ಅಥವಾ ಕೇಂದ್ರ ಸರಕಾರ ನೋಟ್ ಬ್ಯಾನ್ ವಾಪಸ್ ತೆಗೆದುಕೊಂಡಿತಾ?

ಹಲವರಿಗೆ ಬಂದ್ ಮಾಡಿಸುವುದು ಹವ್ಯಾಸ
ಕನ್ನಡಪರ ಸಂಘಟಗೆಳು ಕರೆನೀಡಿದ ಬಂದ್ ಗೆ ರಾಮನಗರದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಬಂದ್ ಮಾಡಿಸುವುದರಿಂದ ಅಗುವ ಪರಿಣಾಮದ ಬಗ್ಗೆ ಅರಿವು ಇದ್ದ ಹಾಗೇ ಇಲ್ಲ. ಕೆಲವರಿಗೆ ಬಂದ್ ಮಾಡಿಸುವುದು ಹವ್ಯಾಸವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಪರೋಕ್ಷವಾಗಿ ಕನ್ನಡಪರ ಹೋರಾಟಗಾರರಿಗೆ ಟಾಂಗ್ ನೀಡಿದ್ದಾರೆ.

ಮಹಾದಾಯಿ ಹೋರಾಟಗಾರರೇ ಗುರುವಾರ ಬಂದ್ ಬೇಡ ಎಂದು ಹೇಳುತ್ತಿದ್ದಾರೆ
ಮಹಾದಾಯಿ ಹೋರಾಟಗಾರರೇ ಗುರುವಾರ ಬಂದ್ ಬೇಡ ಎಂದು ಹೇಳುತ್ತಿದ್ದಾರೆ. ಅದರೆ ವಾಟಾಳ್ ನಾಗರಾಜ್ ಯಾವ ಕಾರಣಕ್ಕೆ ಬಂದ್ ಗೆ ಕರೆ ನೀಡಿದ್ದಾರೆಂದು ಗೊತ್ತಿಲ್ಲ. ಬಂದ್ ಮಾಡುವುದರಿಂದ ಮಹಾದಾಯಿ ಸಮಸ್ಯೆ ಪರಿಹಾರ ಆಗುವುದಿಲ್ಲ. ಬದಲಾಗಿ ನಮ್ಮ ಜನರೇ ತೊಂದರೆ ಅನುಭವಿಸುತ್ತಾರೆ ಎನ್ನುವ ಮೂಲಕ, ಪದೇಪದೇ ಕರೆನೀಡಲಾಗುತ್ತಿರುವ ಬಂದ್ ಬಗ್ಗೆ ಜೆಡಿಎಸ್ ಬೆಂಬಲ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟವಾಗಿ ಸಾರಿದ್ದಾರೆ.

ಪದೇ ಪದೇ ಬಂದ್ ನಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ
ಮಹಾದಾಯಿ ವಿಚಾರದಲ್ಲಿ ಟ್ರಿಬ್ಯುನಲ್ ತನ್ನ ನಿಲುವನ್ನು ಈಗಾಗಲೇ ತಿಳಿಸಿದೆ. ಅನ್ಯಾಯವಾದರೆ ಇದರ ವಿರುದ್ದ ಹೋರಾಡುತ್ತೇನೆ. ಪದೇ ಪದೇ ಬಂದ್ ನಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ರಾಜ್ಯದಲ್ಲಿ ಈವರೆಗೆ ಎಷ್ಟೋ ಬಂದ್ ಆಗಿವೆ, ಇದರಿಂದ ಪ್ರಯೋಜನವಾಗಿದೆಯಾ? ಬಂದ್ ನಿಂದಾಗಿ ನಮಗೇ ಸಮಸ್ಯೆಯೇ ಹೊರತು ಪ್ರಧಾನಿಗಲ್ಲ ಎಂದು ದೇವೇಗೌಡ್ರು, ಬಂದ್ ಕರೆ ನೀಡಿದವರ ವಿರುದ್ದ ಗುಡುಗಿದ್ದಾರೆ.

ಸನ್ನಿ ನೈಟ್ ಸಂಬಂಧ ಕರವೇ ಮುಖಂಡರೊಬ್ಬರ ಮೇಲೆ ಕೇಳಿ ಬಂದಿದ್ದ ಆರೋಪ
ಇದುವರೆಗಿನ ಇತಿಹಾಸವನ್ನು ಕೆದಕುವುದಾದರೆ, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆನೀಡಿದ ಯಾವುದೇ ಬಂದ್ ಗೆ ನಾರಾಯಣ ಗೌಡ್ರ ಕರವೇ ಬೆಂಬಲ ನೀಡಿದ ಉದಾಹರಣೆಗಳಿಲ್ಲ. ಆದರೆ, ಜ 25ಕ್ಕೆ ಕರೆಯಲಾದ ಬಂದ್ ಗೆ ಕರವೇ ಬೆಂಬಲ ನೀಡಿರುವುದು, ಸನ್ನಿ ಲಿಯೋನ್ ನೈಟ್ ಸಂಬಂಧ ಕರವೇ ಮುಖಂಡರೊಬ್ಬರ ಮೇಲೆ ಕೇಳಿ ಬಂದಿದ್ದ ಆರೋಪದ ನಂತರ, ಬಿಜೆಪಿಗೆ ಮತಹಾಕಬೇಡಿ ಎಂದು ಸಾಮಾಜಿಕ ತಾಣದಲ್ಲಿ ನಡೆಯುತ್ತಿದ್ದ ಅಭಿಯಾನಕ್ಕೂ, ಬಂದ್ ಗೆ ಕರವೇ ಬೆಂಬಲ ನೀಡಿರುವುದಕ್ಕೂ ಸಂಬಂಧವಿದೆಯೇ ಎಂದು ಸಂಶಯ ಪಡುವಂತಾಗಿದೆ.












Click it and Unblock the Notifications