ಸದನದಲ್ಲಿ ಸಿದ್ದರಾಮಯ್ಯ ಆರ್ಭಟ: ಮೂಲೆಯಲ್ಲಿ ಮಗುಮ್ಮಾಗಿ ಕೂತ ಬಿಎಸ್ವೈ
ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮಾತನಾಡುತ್ತಿರಬೇಕಾದರೆ, ಇಡೀ ಸದನದಲ್ಲಿ ಸಂಚಲನ ಮೂಡುತ್ತದೆ. ಹೇಳಬೇಕಾಗಿರುವ ವಿಚಾರವನ್ನು ದಾಖಲೆ ಸಮೇತ ಸದನದಲ್ಲಿ ಮುಂದಿಡುವ ಸಿದ್ದರಾಮಯ್ಯನವರು ಬೊಮ್ಮಾಯಿ ಸರಕಾರದ ವಿರುದ್ದ ಒಂದೇ ಸಮನೆ ತಿರುಗಿ ಬೀಳುತ್ತಿದ್ದಾರೆ.
ತೈಲ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮಾತನಾಡುತ್ತಿರುವ ಸಿದ್ದರಾಮಯ್ಯನವರು, ಕರ್ನಾಟಕದಿಂದ ಕೇಂದ್ರಕ್ಕೆ ಹೋಗುತ್ತಿರುವ ತೆರಿಗೆ ವಿಚಾರವನ್ನು ಇಂಚಿಂಚಾಗಿ ಹೊರಗಿಡುತ್ತಿದ್ದಾರೆ. ಕೇಂದ್ರ ಸರಕಾರದ ಬಜೆಟ್ ಕಾಪಿಯಿಂದ ನಾನು ಅಂಕಿಅಂಶವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ ಎಂದು ಹೇಳಿರುವ ಸಿದ್ದರಾಮಯ್ಯನವರು, ಆಡಳಿತ ಪಕ್ಷದ ನಾಯಕರ ಬಾಯಿಯನ್ನು ಮುಚ್ಚಿಸುತ್ತಿದ್ದಾರೆ.
"ಕರ್ನಾಟಕ ಸರಕಾರದ ವಿಚಾರದಲ್ಲಿ ಸಿದ್ದರಾಮಯ್ಯನವರು ಏನು ಬೇಕಾದರೂ ಮಾತನಾಡಿಕೊಳ್ಳಲಿ, ಆ ಹಕ್ಕು ಅವರಿಗಿದೆ. ಕೇಂದ್ರ ಸರಕಾರದ ಬಗ್ಗೆ ಮಾತನಾಡುವ ಯಾವ ಹಕ್ಕೂ ಸಿದ್ದರಾಮಯ್ಯನವರಿಗೆ ಇಲ್ಲ"ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದಾಗ, ಅದಕ್ಕೆ ಖಡಕ್ ಉತ್ತರವನ್ನು ಸಿದ್ದರಾಮಯ್ಯ ನೀಡಿದ್ದಾರೆ.
ಸದನದಲ್ಲಿ "ಹೇಳುವ ತಾಕತ್ ನಮಗಿರಬೇಕಾದರೆ, ಕೇಳುವ ತಾಕತ್ ನಿಮಗ್ಯಾಕೆ ಇಲ್ಲ"ಎನ್ನುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರ ಹೇಳಿಕೆಯಿಂದಾಗಿ ಸದನದಲ್ಲಿ ಭಾರೀ ಕೋಲಾಹಲವೇ ಎದ್ದಿದೆ. ಆ ವೇಳೆ, ಸ್ಪೀಕರ್ ಕಾಗೇರಿಯವರು ಲಂಚ್ ಟೈಮ್ ಎಂದು ಸದನವನ್ನು ಮುಂದೂಡಿದರು. ಇಷ್ಟೆಲ್ಲಾ ಆದರೂ, ಮಾಜಿ ಸಿಎಂ ಯಡಿಯೂರಪ್ಪ ಸುಮ್ಮನೆ ಕೂತಿದ್ದರು.

ಯಡಿಯೂರಪ್ಪನವರಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಬಳಿ ಮನವಿ
ಈ ಅಧಿವೇಶನದ ಉದ್ದಕ್ಕೂ ತಮಗೆ ಸಚೇತಕರ (ಪಕ್ಷದ ಚೀಫ್ ವಿಪ್) ಪಕ್ಕ ಸ್ಥಾನ ಕಲ್ಪಿಸಿಕೊಡಿ ಎಂದು ಯಡಿಯೂರಪ್ಪನವರು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಬಳಿ ಮನವಿ ಮಾಡಿದ್ದರು. ಅದರಂತೇ, ಕೊನೇ ಬೆಂಚ್ ನಲ್ಲಿ ವಿಪ್ ಆಗಿ ನೂತನವಾಗಿ ಆಯ್ಕೆಯಾಗಿರುವ ಬೊಮ್ಮನಹಳ್ಳಿಯ ಶಾಸಕ ಸತೀಶ್ ರೆಡ್ಡಿ ಜೊತೆ ಬಿಎಸ್ವೈ ಆಸೀನರಾಗಿದ್ದರು. ಸದನದಲ್ಲಿ ನಡೆಯುತ್ತಿದ್ದ ವಿದ್ಯಮಾನ/ಡಿಬೇಟ್ ಗಳನ್ನು ಮೈಕ್ರೋಫೋನ್ ಹಾಕಿಕೊಂಡು ಬಿಎಸ್ವೈ ಆಲಿಸುತ್ತಿದ್ದರು.

ಮುಂದಿನ ಸಾಲಿನಲ್ಲಿ ಕೂತು ಅಧಿವೇಶನದಲ್ಲಿ ಭಾಗವಹಿಸುತ್ತಿದ್ದ ಯಡಿಯೂರಪ್ಪ
ಕಳೆದ ಹಲವಾರು ವರ್ಷಗಳಿಂದ ಮುಂದಿನ ಸಾಲಿನಲ್ಲಿ ಕೂತು ಅಧಿವೇಶನದಲ್ಲಿ ಭಾಗವಹಿಸುತ್ತಿದ್ದ ಯಡಿಯೂರಪ್ಪನವರು ಕೊನೇ ಸೀಟಿನಲ್ಲಿ ಕೂತು ಕಲಾಪದ ಆಗುಹೋಗುಗಳನ್ನು ಅವಲೋಕಿಸುತ್ತಿದ್ದರು. ತೈಲಬೆಲೆ ಏರಿಕೆ, ಅಯಿಲ್ ಬಾಂಡ್ ಮುಂತಾದ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು, ಸರಕಾರಕ್ಕೆ ಚಾಟಿ ಬೀಸುತ್ತಿದ್ದರೆ, ಯಡಿಯೂರಪ್ಪನವರಾಗಲಿ, ಸಿಎಂ ಬಸವರಾಜ ಬೊಮ್ಮಾಯಿಯವರು ಇದುವರೆಗೂ ಸಮರ್ಥನೆಗೆ ಮುಂದಾಗಲಿಲ್ಲ.

ಏ ಸತೀಶ್ ಸುಮ್ಮನಿರಪ್ಪಾ.. ಈಗ ವಿಪ್ ಆಗಿದ್ದೀಯಾ, ಮಾತನಾಡುತ್ತಿದ್ದೀಯಾ
ಸತೀಶ್ ರೆಡ್ಡಿಯವರು ಸರಕಾರದ ಸಮರ್ಥನೆ ಬಂದಾಗ, "ಏ ಸತೀಶ್ ಸುಮ್ಮನಿರಪ್ಪಾ.. ಈಗ ವಿಪ್ ಆಗಿದ್ದೀಯಾ, ಮಾತನಾಡುತ್ತಿದ್ದೀಯಾ. ಇಷ್ಟು ದಿನ ಸೀಟಿನಿಂದ ಎದ್ದೇಳುತ್ತಿರಲಿಲ್ಲ. ಈಗ ವಿಪ್ ಆದ ಕೂಡಲೇ ಆಕ್ಟೀವ್ ಆಗಿದ್ದಿಯಾ" ಎಂದು ಸಿದ್ದರಾಮಯ್ಯ ಅವರನ್ನು ಸುಮ್ಮನಾಗಿಸಿದ್ದರು. ಅವರನ್ನು ಸಚಿವರನ್ನಾಗಿ ಕೊನೆಗೂ ಮಾಡಲೇ ಇಲ್ಲ ಎಂದು ಇನ್ನೋರ್ವ ಕಾಂಗ್ರೆಸ್ ಶಾಸಕರು ಅವರನ್ನು ಛೇಡಿಸಿದರು. ಪಕ್ಕದಲ್ಲೇ ಕೂತಿದ್ದ ಯಡಿಯೂರಪ್ಪ ಒಂದು ಸ್ಮೈಲ್ ಕೊಟ್ಟು ಹಾಗೇ ಸುಮ್ಮನಾದರು.
Recommended Video

ಅಪಾರ ಅನುಭವವನ್ನು ಹೊಂದಿರುವ ಯಡಿಯೂರಪ್ಪ ಸರಕಾರದ ಸಮರ್ಥನೆಗೆ ನಿಲ್ಲುತ್ತಾರಾ
ಯಡಿಯೂರಪ್ಪನವರು ಸಿಎಂ ಆಗಿದ್ದ ವೇಳೆ, ಸರಕಾರಕ್ಕೆ ಮುಜುಗರ ಆಗುವ ಚರ್ಚೆ ಏನಾದರೂ ನಡೆದರೆ, ಅಂತಹ ವೇಳೆ ಬೊಮ್ಮಾಯಿ ಮತ್ತು ಮಾಧುಸ್ವಾಮಿ ಎದ್ದು ನಿಲ್ಲುತ್ತಿದ್ದರು. ಈಗ, ಬೊಮ್ಮಾಯಿಯವರು ಸಿಎಂ ಆಗಿದ್ದಾರೆ, ಅಪಾರ ರಾಜಕೀಯ ಅನುಭವವನ್ನು ಹೊಂದಿರುವ ಯಡಿಯೂರಪ್ಪನವರು ಸರಕಾರದ ಸಮರ್ಥನೆಗೆ ನಿಲ್ಲುತ್ತಾರಾ ಅಥವಾ ನನಗ್ಯಾಕೆ ಎಂದು ಮೂಲೆಯಲ್ಲಿ ಕೂತು ಸದನದಲ್ಲಿ ಅಟೆಂಡೆನ್ಸ್ ಹಾಕುತ್ತಾರಾ ಎಂದು ಕಾದು ನೋಡಬೇಕಿದೆ.












Click it and Unblock the Notifications