ಕಾಂಗ್ರೆಸ್ ಪ್ರಣಾಳಿಕೆ 2023: ಬಿಜೆಪಿ ಕೊಟ್ಟಿರುವ ಭರವಸೆಗಳ ಕತೆ ಏನು? ರಾಜ್ಯ ದಿವಾಳಿಯಾಗಲ್ವಾ? : ಸಿದ್ದರಾಮಯ್ಯ
ಬೆಂಗಳೂರು,ಮೇ2: ಮೋದಿ ಅವರು ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರೆಂಟಿಗಳನ್ನು ಈಡೇರಿಸಲು ಆಗಲ್ಲ, ಹಾಗೆ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದಾರೆ. ಹಾಗಾದರೆ ಈಗ ಬಿಜೆಪಿ ಕೊಟ್ಟಿರುವ ಭರವಸೆಗಳ ಕತೆ ಏನು? ರಾಜ್ಯ ದಿವಾಳಿಯಾಗಲ್ವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ಮಂಗಳವಾರ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯ ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಾಡಿರುವ ಸಾಲದ ಹೊರೆಯಿಂದಾಗಿ ಪ್ರತೀ ವರ್ಷ 56,000 ಕೋಟಿ ಹಣವನ್ನು ಅಸಲು ಮತ್ತು ಬಡ್ಡಿ ರೂಪದಲ್ಲಿ ಕಟ್ಟಬೇಕಾಗಿದೆಯಲ್ಲ ಇದಕ್ಕೆ ಎಲ್ಲಿಂದ ಹಣ ತರುತ್ತಾರೆ? ಸ್ವಾತಂತ್ರ್ಯ ನಂತರದಿಂದ ನಮ್ಮ ಸರ್ಕಾರದ ಕೊನೆಯ ಅವಧಿಯ ವರೆಗೆ ರಾಜ್ಯದ ಮೇಲಿದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ಕಳೆದ 5 ವರ್ಷದಲ್ಲಿ ಇದು 5 ಲಕ್ಷದ 64 ಸಾವಿರ ಕೋಟಿಗೆ ಹೆಚ್ಚಾಗಿದೆ.

ಈ ಸರ್ಕಾರ 3 ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿದೆ. ಈ ಸಾಲದ ಪ್ರಮಾಣವನ್ನು ಕಡಿಮೆ ಮಾಡಬೇಕಾಗಿದೆ. ಪ್ರತೀ ವರ್ಷ ಮಾಡುವ ಸಾಲದ ಪ್ರಮಾಣ ಕಡಿಮೆ ಮಾಡಿ ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ಮಾಡಿ ಆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿದರೆ ಸಾಕು ನಮ್ಮ ಎಲ್ಲಾ ಭರವಸೆಗಳನ್ನು ಸುಲಭದಲ್ಲಿ ಈಡೇರಿಸಲು ಸಾಧ್ಯವಿದೆ. 56,000 ಕೋಟಿ ರೂಪಾಯಿ ಸಾಲ ಮರುಪಾವತಿಯ ಹಣ ಸರ್ಕಾರದ ಆಸ್ತಿ ಸೃಜನೆಗಾಗಿ ಅಲ್ಲ, ಅದರಿಂದ ರಾಜ್ಯಕ್ಕೆ ಯಾವ ಲಾಭವೂ ಆಗಲ್ಲ.
ನರೇಂದ್ರ ಮೋದಿಅವರಿಗೆ ರಾಜ್ಯದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು 13 ಬಜೆಟ್ ಗಳನ್ನು ಮಂಡಿಸಿರುವುದರಿಂದ ಕರ್ನಾಟಕದ ಹಣಕಾಸಿನ ಸ್ಥಿತಿಯ ಪೂರ್ಣ ಅರಿವು ನನಗಿದೆ. ನಾವೇನು ಈಗ 5 ಗ್ಯಾರೆಂಟಿಗಳನ್ನು ಕೊಟ್ಟಿದ್ದೇವೆ ಜೊತೆಗೆ ನಮ್ಮ ಪ್ರಣಾಳಿಕೆಯಲ್ಲಿರುವ ಎಲ್ಲಾ ಭರವಸೆಗಳನ್ನು ಚಾಚು ತಪ್ಪದೆ ಜಾರಿ ಮಾಡುತ್ತೇವೆ. ನಮ್ಮ 5 ಗ್ಯಾರೆಂಟಿಗಳನ್ನಂತೂ ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಮಾಡಿ ಜಾರಿಗೆ ಕೊಡುತ್ತೇವೆ. ನರೇಂದ್ರ ಮೋದಿ ಅವರು ಜನರಿಗೆ ತಪ್ಪು ಮಾಹಿತಿ ಕೊಡಲು ಹೋಗಬೇಡಿ ಎಂದು ಅವರನ್ನು ಆಗ್ರಹಿಸುತ್ತೇನೆ. ರಾಜ್ಯದ ಜನ ಬಿಜೆಪಿಯವರ ಮಾತುಗಳನ್ನು ಕೇಳಲು ಹೋಗಬೇಡಿ ಅವರು ಸುಳ್ಳು ಹೇಳುತ್ತಾರೆ ಎಂದರು.

ನಾನು ಮುಖ್ಯಮಂತ್ರಿಯಾಗಿರುವಾಗ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ. ಇವರ ಯೋಗ್ಯತೆಗೆ ಒಂದೇ ಒಂದು ಮನೆ ಮಂಜೂರು ಮಾಡಿ ಕಟ್ಟಿಸಿಕೊಟ್ಟಿದ್ದಾರ? 10 ಕೆ.ಜಿ ಅಕ್ಕಿ ಕೊಡಲು ಆಗಲ್ಲ ಎನ್ನುತ್ತಾರೆ, ಹಿಂದೆ 7 ಕೆ.ಜಿ ಕೊಟ್ಟವರಿಗೆ ಈಗ 10 ಕೆ.ಜಿ ಕೊಡೋಕಾಗಲ್ವಾ? ಇನ್ನೊಂದು ಎರಡ್ಮೂರು ಸಾವಿರ ಕೋಟಿ ಹಣ ಹೆಚ್ಚು ಬೇಕಾಗುತ್ತೆ ಅಷ್ಟೆ. 7 ಕೆ.ಜಿ ಕೊಡುವಾಗ 5,000 ಕೋಟಿ ಹತ್ತಿರ ಖರ್ಚು ಬರುತ್ತಿತ್ತು, 10 ಕೆ.ಜಿ ಕೊಟ್ಟರೆ ಇನ್ನೊಂದು 2.000 ಕೋಟಿ ರೂಪಾಯಿ ಜಾಸ್ತಿಯಾಗುತ್ತೆ.
ಕರ್ನಾಟಕದ ಬಜೆಟ್ ಗಾತ್ರ 3 ಲಕ್ಷದ 10 ಸಾವಿರ ಕೋಟಿ. ಪ್ರತೀ ವರ್ಷ ಬಜೆಟ್ ಗಾತ್ರ 30,000 ಕೋಟಿ ಹೆಚ್ಚಾಗುತ್ತದೆ. ಬದ್ಧ ಖರ್ಚುಗಳನ್ನು ಕಡಿಮೆ ಮಾಡಿ ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬೇಕು. ಜನರ ಬಳಿ ಹಣ ಇದ್ದರೆ, ಅವರಲ್ಲಿ ಕೊಂಡುಕೊಳ್ಳುವ ಶಕ್ತಿ ಇದ್ದರೆ ತಾನೇ ಹಣದ ಹರಿವು ಆಗುವುದು. ಜನರ ಬಳಿ ದುಡ್ಡೇ ಇಲ್ಲದೆ ಹೋದೆ ಜನ ಕೊಂಡುಕೊಳ್ಳಲು ಮಾರುಕಟ್ಟೆಗೆ ಹೋಗಲ್ಲ, ಹೀಗಾದರೆ ತೆರಿಗೆ ಸಂಗ್ರಹ ಆಗುವುದಿಲ್ಲ.
ಇದರಿಂದ ನಾವು ಈ ಎಲ್ಲಾ ವಿಚಾರಗಳನ್ನು ಲೆಕ್ಕಾಚಾರ ಹಾಕಿ ನಮ್ಮ ಭರವಸೆಗಳ ಈಡೇರಿಕೆ ಸಾಧ್ಯವಾ ಇಲ್ಲವಾ ಎಂಬುದನ್ನು ತಿಳಿದುಕೊಂಡ ಮೇಲೆಯೇ ನಮ್ಮಿಂದ ಈಡೇರಿಸಲು ಸಾಧ್ಯವಾಗುವ ಭರವಸೆಗಳನ್ನು ಮಾತ್ರ ನೀಡಿದ್ದೇವೆ. ಈ ವಿಚಾರವನ್ನು ನರೇಂದ್ರ ಮೋದಿ ಅವರಿಗೆ ತಿಳಿಸಲು ಬಯಸುತ್ತೇನೆ. ಮೋದಿ ಅವರು ಕರ್ನಾಟಕದ ಜನರಿಗೆ ತಪ್ಪು ಮಾಹಿತಿ ನೀಡಬೇಡಿ, ನಿಮಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮಾಹಿತಿ ಇಲ್ಲ ಎಂದು ಕಾಣುತ್ತದೆ. ನಾವು ನುಡಿದಂತೆ ನಡೆಯುವವರು, ಕೊಟ್ಟ ಭರವಸೆಗಳನ್ನು ಹಿಂದೆಯೂ ಈಡೇರಿಸಿದ್ದೇವೆ, ಮುಂದೆಯೂ ಈಡೇರಿಸುತ್ತೇವೆ ಎಂದರು.
ಬಿಜೆಪಿಯವರು 2018ರಲ್ಲಿ ಪ್ರಣಾಳಿಕೆಯ ಮೂಲಕ ನೀಡಿದ್ದ 600 ಭರವಸೆಗಳಲ್ಲಿ 3 ವರ್ಷ 10 ತಿಂಗಳ ಅವಧಿಯಲ್ಲಿ ಈಡೇರಿಸಿದ್ದು ಕೇವಲ 55 ಭರವಸೆಗಳು ಮಾತ್ರ. 10% ಭರವಸೆಗಳನ್ನು ಕೂಡ ಈಡೇರಿಸಲು ಅವರಿಂದ ಸಾಧ್ಯವಾಗಿಲ್ಲ, ನಿನ್ನೆ ಅವರು ನೀಡಿರುವ ಭರವಸೆಗಳನ್ನು ಕೂಡ ಈಡೇರಿಸುವ ಉದ್ದೇಶದಿಂದ ನೀಡಿರುವುದಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಇದೇ ರೀತಿ ಮಾಡಿದೆ. ರೈತರಿಗೆ ಬಿಜೆಪಿ ಪಕ್ಷ ಅನೇಕ ಭರವಸೆಗಳನ್ನು ನೀಡಿತ್ತು, ಅದರಲ್ಲಿ ಬಹುತೇಕ ಭರವಸೆಗಳನ್ನು ಈಡೇರಿಸಿಲ್ಲ, ಬಿಜೆಪಿಗೆ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕು ಎಂಬ ಪ್ರಾಮಾಣಿಕತೆ ಇಲ್ಲ, ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬದ್ಧತೆಯಿಂದ ನಡೆದುಕೊಂಡಿದೆ ಎಂದರು.












Click it and Unblock the Notifications