ವಿಧಾನಸೌಧವನ್ನೇ ಗೋಮೂತ್ರದಿಂದ ತೊಳೆಯುತ್ತೇವೆ, ನೀವು 'ಪ್ಯಾಕ್ ಅಪ್' ಮಾಡಿ: ಬೊಮ್ಮಾಯಿಗೆ ಡಿಕೆಶಿ ಹೇಳಿದ್ದೇನು?
ಕರ್ನಾಟಕ ವಿಧಾನಸಭೆಗೆ ಇನ್ನೂ ನಾಲ್ಕೈದು ತಿಂಗಳು ಬಾಕಿ ಇದೆ. ಮೂರು ಪಕ್ಷಗಳು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದೇ ಸಮಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ವಾಗ್ಯುದ್ಧಗಳು ನಡೆಯುತ್ತಿವೆ. ಬೊಮ್ಮಾಯಿ ಅವರಿಗೆ 'ಪ್ಯಾಕ್ ಅಪ್' ಮಾಡಲು ಡಿಕೆಶಿ ಹೇ
ಬೆಂಗಳೂರು, ಜನವರಿ 25: ಕರ್ನಾಟಕ ವಿಧಾನಸಭೆಗೆ ಇನ್ನೂ ನಾಲ್ಕೈದು ತಿಂಗಳು ಬಾಕಿ ಇದೆ. ಮೂರು ಪಕ್ಷಗಳು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದೇ ಸಮಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ವಾಗ್ಯುದ್ಧಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟ ಸಚಿವರಿಗೆ 'ಪ್ಯಾಕ್ ಅಪ್' ಎಂದು ಕರ್ನಾಟಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ. 'ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದ್ದು, 'ವಿಧಾನಸೌಧ'ವನ್ನು 'ಗಂಜಾಳ' (ಗೋಮೂತ್ರ)ದಿಂದ ಶುದ್ಧೀಕರಿಸುತ್ತೇವೆ ಎಂದು ಹೇಳಿದ್ದಾರೆ. ಡಿ ಕೆ ಶಿವಕುಮಾರ ಅವರ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಆಡಳಿತಾರೂಢ ಬಿಜೆಪಿಯ ಸಚಿವರು ಹಾಗೂ ಬೊಮ್ಮಾಯಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ಆರೋಪವನ್ನೂ ಮಾಡಿದ್ದಾರೆ.
ಸರ್ಕಾರಕ್ಕೆ ಇನ್ನೂ 40-45 ದಿನಗಳು ಬಾಕಿ ಇದೆ
'ನಿಮ್ಮ ಸರ್ಕಾರಕ್ಕೆ ಇನ್ನೂ 40-45 ದಿನಗಳು ಬಾಕಿ ಇವೆ. ನಿಮ್ಮ ಟೆಂಟ್ಗಳನ್ನು ಪ್ಯಾಕ್ ಮಾಡಿ ಮತ್ತು ಉಳಿದಿರುವ ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗಿ. ನಾವು ವಿಧಾನಸೌಧವನ್ನು ಸ್ವಚ್ಛಗೊಳಿಸಲು ಡೆಟಾಲ್ನೊಂದಿಗೆ ಬರುತ್ತೇವೆ. ನಾನು ಶುದ್ಧೀಕರಣಕ್ಕಾಗಿ ಸ್ವಲ್ಪ ಗಂಜಲ (ಗೋಮೂತ್ರ) ಕೂಡ ತರುತ್ತೇನೆ. ಈ ದುಷ್ಟ ಸರ್ಕಾರವನ್ನು ಕಿತ್ತೊಗೆಯಲು ಜನರು ಬಯಸುತ್ತಿದ್ದಾರೆ' ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ‘ಟೆಂಡರ್ಶೂರ್' ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಆಡಳಿತ ಪಕ್ಷ ಲೋಕಾಯುಕ್ತಕ್ಕೆ ದೂರು ನೀಡಿದ ಒಂದು ದಿನದ ನಂತರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ ನಡೆದಿದೆ.
ಅವ್ಯವಹಾರದ ಆರೋಪ ಮಾಡಿದ್ದ ಸುಧಾಕರ್
ರಾಜ್ಯದ ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಸಿಎಜಿ ವರದಿಯನ್ನು ಉಲ್ಲೇಖಿಸಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 35,000 ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು. ಸುಧಾಕರ್ ಆರೋಪಕ್ಕೆ ತಿರುಗೇಟು ನೀಡಿದ ಶಿವಕುಮಾರ್, ಕಳೆದ 3.5 ವರ್ಷಗಳಿಂದ ಬಿಜೆಪಿ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. 'ಅವರು ಅಧಿಕಾರದಲ್ಲಿದ್ದರು. ತನಿಖೆಗೆ ಏಕೆ ಆದೇಶಿಸಿಲ್ಲ' ಎಂದು ಕೇಳಿದ್ದಾರೆ.
40 ಪರ್ಸೆಂಟ್ ಕಮಿಷನ್ ಬ್ರಾಂಡ್
ಬಿಜೆಪಿ 40 ಪರ್ಸೆಂಟ್ ಕಮಿಷನ್ ಬ್ರಾಂಡ್ ಹೊಂದಿದ್ದು, ಅದನ್ನು ಮುಚ್ಚಿಹಾಕಲು ಕಾಂಗ್ರೆಸ್ ವಿರುದ್ಧ ಆಧಾರ ರಹಿತ ಆರೋಪ ಮಾಡಲು ಯತ್ನಿಸುತ್ತಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಭ್ರಷ್ಟಾಚಾರದ ಆರೋಪದ ಬಗ್ಗೆ ಬಿಜೆಪಿಯ ಹಳೆಯ ನಾಯಕರು ಏಕೆ ಮಾತನಾಡುತ್ತಿಲ್ಲ, ಪ್ರತಿಕ್ರಿಯಿಸುತ್ತಿಲ್ಲ ಎಂದು ಕೇಳಿದ್ದಾರೆ. ಕಾಂಗ್ರೆಸ್ನಿಂದ ಪಕ್ಷಾಂತರಗೊಂಡ ಸುಧಾಕರ್ ಅವರಂತಹವರನ್ನು ಬಳಸಿಕೊಂಡು ಆರೋಪ ಪ್ರತ್ಯಾರೋಪ ಮಾಡಲು ಬಿಜೆಪಿ ಏಕೆ ಬಯಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
2013 ರಿಂದ ಇಲ್ಲಿಯವರೆಗೆ ನಡೆದಿರುವ ಹಗರಣಗಳು ಮತ್ತು ಭ್ರಷ್ಟಾಚಾರ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಆಯೋಗದಿಂದ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 'ಶೇಕಡಾ 40 ಕಮಿಷನ್, ಪಿಎಸ್ಐ ನೇಮಕಾತಿ ಮತ್ತು ಕೋವಿಡ್ ಹಗರಣ ಸೇರಿದಂತೆ ನಮ್ಮ ಮೇಲೆ ಇರುವ ಆರೋಪಗಳ ಬಗ್ಗೆಯೂ ತನಿಖೆಯಾಗಲಿ. ಇದನ್ನು ತನಿಖಾ ಆಯೋಗಕ್ಕೆ ಹಸ್ತಾಂತರಿಸಬೇಕು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಇದು ತನಿಖೆಯಾಗಬೇಕು. ಅವರಿಗೆ ಧೈರ್ಯವಿದ್ದರೆ, ಅದನ್ನು ಮಾಡಲಿ,' ಎಂದು ಸವಾಲು ಹಾಕಿದರು.
ಸೋಲಿನ ಭೀತಿಯಿಂದ ಕಂಗೆಟ್ಟಿರುವ ಬಿಜೆಪಿ
ಸಚಿವ ಸುಧಾಕರ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ‘ನಮ್ಮ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದವರು ಯಾಕೆ ಸುಮ್ಮನಿದ್ದರು' ಎಂದರು. ಬಿಜೆಪಿ ಸೋಲಿನ ಭೀತಿಯಿಂದ ಕಂಗೆಟ್ಟಿದ್ದು, ಆಧಾರ ರಹಿತ ಆರೋಪ ಮಾಡುತ್ತಿದೆ. ಭ್ರಷ್ಟಾಚಾರ ವಿರೋಧಿ ಬ್ಯೂರೋ (ಎಸಿಬಿ) ಅನ್ನು ಹೈಕೋರ್ಟ್ ರದ್ದುಗೊಳಿಸಿದೆಯೇ ಹೊರತು ಬಿಜೆಪಿ ಸರ್ಕಾರದಿಂದಲ್ಲ. ಬಿಜೆಪಿ ಆರೋಪಿಸಿದಂತೆ ನಾವು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಲ್ಲ ಎಂದರು.