ಬಿಜೆಪಿ ಬತ್ತಳಿಕೆಯಲ್ಲಿರುವ ಶಕ್ತಿಶಾಲಿ ಬಾಣ 'ಮಹದಾಯಿ!'
2018 ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಭಾವಶಾಲಿ ಅಸ್ತ್ರಗಳಲ್ಲಿ 'ನೀರು' ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರ ನೀರಿನ ಸಮಸ್ಯೆಯನ್ನು ನೀಗಿಸುವ ಮಹದಾಯಿ ಯೋಜನೆ ಇದೀಗ ರಾಜಕೀಯ ಪಕ್ಷಗಳಿಗೆ ಮತಗಳಿಸುವ ಸಾಧನವೂ ಆಗಿದೆ.
ಕಳೆದ ಎರಡೂವರೆ ವರ್ಷಗಳಿಂದ ಕಳಸಾ ಬಂಡೂರಿ ನಾಲೆ ಜೋಡಣೆ ಕುರಿತು ಹೋರಾಟ ನಡೆಯುತ್ತಲೇ ಇದ್ದರೂ ತಲೆಕೆಡಿಸಿಕೊಳ್ಳದವರೆಲ್ಲ ಈಗ ಏಕಾಏಕಿ ಮಹದಾಯಿಯನ್ನು ಅಪ್ಪಿಕೊಳ್ಳುತ್ತಿರುವುದೇಕೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ಯೋಗಿ ಆದಿತ್ಯನಾಥ ಮಾತಿನ ಓಘಕ್ಕೆ ಉಘೇ ಎಂದ ಹುಬ್ಬಳ್ಳಿ ಮಂದಿ
ಇದೀಗ ಗೋವಾ ಸರ್ಕಾರದೊಂದಿಗೆ ಮಾತನಾಡಿ ಮಹದಾಯಿ ಕುರಿತ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಮುಂದಾಗಿರುವ ಬಿಜೆಪಿ, ಈ ಬಾರಿಯ ಚುನಾವಣೆಗೆ ನೀರನ್ನೇ ತನ್ನ ಬತ್ತಳಿಕೆಯ ಪ್ರಮುಖ ಬಾಣವನ್ನಾಗಿಸಿಕೊಂಡರೆ ಅಚ್ಚರಿಯೇನಿಲ್ಲ.
ಗೋವಾದಿಂದಲೂ ಧನಾತ್ಮಕ ಪ್ರತಿಸ್ಪಂದನೆ
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರೂ, ಈ ಸಮಸ್ಯೆಯನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧವಿರುವುದಾಗಿ ಹೇಳಿರುವುದು ಬಿಜೆಪಿಗೆ ಮತ್ತಷ್ಟು ಬಲ ನೀಡಿದೆ.ನದಿ ನೀರಿನ ಹಂಚಿಕೆ ವಿವಾದ ಮಹಾದಾಯಿ ನದಿ ನ್ಯಾಯಾಧಿಕರಣದ ಮುಂದಿದ್ದು, ನ್ಯಾಯಾಧಿಕರಣದ ತೀರ್ಮಾನಕ್ಕೆ ಗೋವಾ ಬದ್ಧವಾಗಿದೆ ಎಂದು ಸಹ ಪರಿಕ್ಕರ್ ಹೇಳಿದ್ದರು. ಕಳಸಾ ಬಂಡೂರಿ ಯೋಜನೆಯ ಅನುಷ್ಠಾನದ ಕ್ರೆಡಿಟ್ ಅನ್ನು ಬಿಜೆಪಿ ತೆಗೆದುಕೊಂಡರೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆ ಬಹುದೊಡ್ಡ ಹೊಡೆತ ಬೀಳುವುದು ಖಂಡಿತ. ಪ್ರಾಣ ಉಳಿಸುವ ಜೀವನದಿ ಇದೀಗ ರಾಜಕೀಯದ ದಾಳವಾಗಿ ಬದಲಾಗಿರುವುದು ಸುಳ್ಳಲ್ಲ!
ಮಹಾದಾಯಿ ಬಿಜೆಪಿಗೇಕೆ ಮಹತ್ವ?
ಕರ್ನಾಟಕದ ಜನರಿಗೆ, ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ 'ನೀರು' ಎಂಬುದು ಒಂದು ಭಾವನಾತ್ಮಕ ವಿಷಯ. ನೀರಿನ ಕುರಿತು ಎದ್ದ ವಿವಾದಗಳಿಗೆಲ್ಲ ಕರ್ನಾಟಕದ ಜನರು ನೀಡಿರುವ ಪ್ರತಿಕ್ರಿಯೆ ಹಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಗಳಲ್ಲಂತೂ ಕುಡಿಯುವ ನೀರಿನ ಸಮಸ್ಯೆಯನ್ನು ಈಡೇರಿಸುವ ಭಗೀರಥನಿಗೆ ಮಾತ್ರವೇ ಜನ ಮತ ನೀಡುವುದು ಪಕ್ಕಾ ಎಂಬಂತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಯಾವ ಪ್ರಚಾರ ಕಾರ್ಯಗಳೂ ಹೆಚ್ಚೇನೂ ಜನರನ್ನು ಸೆಳೆಯುತ್ತಿಲ್ಲವಾದ್ದರಿಂದ ಈ ವಿಷಯವನ್ನೇ ಸೂಕ್ತವಾಗಿ ಬಳಸಿಕೊಳ್ಳುವುದು ಅದಕ್ಕೆ ಮಹತ್ವದ್ದಾಗಿದೆ.
ಉತ್ತರ ಕರ್ನಾಟಕದ ಆಧಿಪತ್ಯ ಸ್ಥಾಪನೆಗೆ...
ಉತ್ತರ ಕರ್ನಾಟಕ ಭಾಗದಲ್ಲಿರುವ ಒಟ್ಟು 50 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಪಾಲನ್ನು ಬಿಜೆಪಿ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರೂ, ಅವನ್ನೆಲ್ಲ ಉಳಿಸಿಕೊಳ್ಳುವುದಕ್ಕೆ ಬಿಜೆಪಿಗೆ ಈ ವಿಷಯವನ್ನು ಬಳಸಿಕೊಳ್ಳುವುದು ಅನಿವಾರ್ಯ. ಉತ್ತರ ಕರ್ನಾಟಕದ ಜನರನ್ನು ಸೆಳೆಯುವುದಕ್ಕೆ ಎಲ್ಲಾ ಪಕ್ಷಗಳಿಗೂ ಸಿಕ್ಕ ಅತ್ಯುತ್ತಮ ಅಸ್ತ್ರ ನೀರೇ ಆಗಿದ್ದರೂ, ಗೋವಾದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಇದರ ಕ್ರೆಡಿಟ್ ಅನ್ನು ಬಿಜೆಪಿ ತೆಗೆದುಕೊಳ್ಳುವಂತೆ ಮಾಡುವುದು ಕಷ್ಟವಾಗಲಾರದು!
ಏನಿದು ಮಹಾದಾಯಿ ಪ್ರಕರಣ?
ಮಹಾದಾಯಿ ನದಿ ಗೋವಾದಲ್ಲಿ ಮಾಂಡೋವಿ ಎಂಬ ಹೆಸರಿನಲ್ಲಿ ಹರಿಯುತ್ತದೆ. ಕರ್ನಾಟಕದ ಬೆಳಗಾವಿಯಲ್ಲಿ ಹುಟ್ಟುವ ಈ ನದಿ, ಕರ್ನಾಟಕದಲ್ಲಿ 29 ಕಿ.ಮೀ. ಮತ್ತು ಗೋವಾದಲ್ಲಿ 52ಕಿ.ಮೀ. ಹರಿಯುತ್ತದೆ. ಈ ನದಿಯು ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಮಹದಾಯಿ ನೀರನ್ನು ನೀರನ್ನು ಕಳಸಾ-ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ಜಲಾಶಯಕ್ಕೆ ಹರಿಸಿ, ಉತ್ತರ ಕರ್ನಾಟಕ ಭಾಗದ ಜನರ ನೀರಿನ ಸಮಸ್ಯೆಯನ್ನು ನೀಗಿಸಲು ಯೋಜನೆ ರೂಪಿಸಲಾಗಿದೆ. ಆದರೆ ಗೋವಾ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಯೋಜನೆ ಇನ್ನೂ ಅನುಷ್ಠಾನವಾಗಿಲ್ಲ. ಆದರೆ ಇದೀಗ ಗೋವಾ ಸರ್ಕಾರವೂ ಈ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿರುವುದು ಉತ್ತರ ಕರ್ನಾಟಕ ಭಾಗದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.